ಬೆಂಗಳೂರು: ಕರ್ನಾಟಕ ಬಜೆಟ್ 2024ರಲ್ಲಿ ರಾಜ್ಯ ಸರ್ಕಾರವು ಹೊಸದಾಗಿ ಮತ್ತೊಂದು ಸಾಮಾಜಿಕ ಭದ್ರತಾ ಯೋಜನೆಯನ್ನು ಪ್ರಕಟಿಸಿದೆ. ಈ ನೂತನ ಸಾಮಾಜಿಕ ಭದ್ರತಾ ಯೋಜನೆಗೆ ಅನ್ನ ಸುವಿಧಾ ಯೋಜನೆ ಎಂದು ಹೆಸರಿಸಿದೆ.
80 ವರ್ಷ ಮತ್ತು ಮೇಲ್ಪಟ್ಟ ಫಲಾನುಭವಿಗಳಿಗೆ ಸಹಾಯವನ್ನು ಮಾಡುವ ನಿಟ್ಟಿನಲ್ಲಿ ಸರ್ಕಾರವು ಈ ಯೋಜನೆಯನ್ನು ಆರಂಭ ಮಾಡಿದೆ. ‘ಅನ್ನ ಸುವಿಧ’ ಯೋಜನೆ ಮೂಲಕ ವಯಸ್ಸಾದವರಿಗೆ ಶೀಘ್ರದಲ್ಲೇ ಅವರ ಮನೆ ಬಾಗಿಲಿಗೆ ಅನ್ನ ಭಾಗ್ಯದ ಅಡಿಯಲ್ಲಿ ಅಕ್ಕಿ ವಿತರಣೆಯನ್ನು ಮಾಡಲಾಗುತ್ತದೆ. ಮನೆಯಿಂದ ನ್ಯಾಯಬೆಲೆ ಅಂಗಡಿಗೆ ಹೋಗಿ ದಿನಬಳಕೆಯ ಸಾಮಗ್ರಿ ಹಾಗೂ ಪಡಿತರ ಖರೀದಿಸಲು ಕಷ್ಟವಾಗುವ ವಯೋವೃದ್ಧರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಘೋಷಿಸಲಾಗಿದ್ದು, 80 ವರ್ಷ ಮೇಲ್ಪಟ್ಟ ವಯಸ್ಸಿನವರಿರುವ ಮನೆಗಳಿಗೆ ಆಹಾರ ಧಾನ್ಯ ವಿತರಣೆ ಮಾಡುವ ಯೋಜನೆ ಇದಾಗಿದೆ.
ಅನ್ನ ಸುವಿಧಾ ಯೋಜನೆಯನ್ನು ಹೋಮ್ ಡೆಲಿವರಿ ಆ್ಯಪ್ ಮೂಲಕ ಜಾರಿಗೆ ತರಲಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ 2024ರ ಜನವರಿ ಅಂತ್ಯದ ವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದೂ ಸಿಎಂ ಬಜೆಟ್ನಲ್ಲಿ ತಿಳಿಸಿದರು.
ಕೆಫೆ ಸಂಜೀವಿನಿ ಯೋಜನೆ…
ಒಂದು ವರ್ಷದ ಅವಧಿಯಲ್ಲಿ ಹಲವಾರು ಕಡೆ ಕೆಫೆ ಸಂಜೀವಿನಿ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಏನಿದು ಕೆಫೆ ಸಂಜೀವಿನಿ? “ಈ ಹಣಕಾಸು ವರ್ಷದಲ್ಲಿ ರಾಜ್ಯದೆಲ್ಲೆಡೆ ಸುಮಾರು 7.50 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಫೆ ಸಂಜೀವಿನಿಯನ್ನು ಆರಂಭಿಸಲಾಗುತ್ತದೆ. ಇದು ಸುಮಾರು 50 ಮಹಿಳೆಯರು ನಡೆಸುವಂತಹ ಕೆಫೆ ಆಗಿರಲಿದೆ,” ಎಂದು ಬಜೆಟ್ ಮಂಡನೆ ವೇಳೆ ಸಿದ್ಧರಾಮಯ್ಯ ಮಾಹಿತಿ ನೀಡಿದ್ದಾರೆ.
ಈ ಕೆಫೆ ಸಂಜೀವಿನಿ ಸ್ಥಳೀಯ ಮಹಿಳೆಯರಿಗೆ ಉದ್ಯೋಗ ನೀಡುವ ಉದ್ದೇಶದೊಂದಿಗೆ ಸ್ಥಳೀಯ ಆಹಾರವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
ಈ ಕ್ಯಾಂಟೀನ್ಗಳು ಗ್ರಾಮೀಣ ಪ್ರದೇಶದಲ್ಲಿ ಕೈಗೆಟುಕುವ ದರದಲ್ಲಿ ಆರೋಗ್ಯಕರ, ನೈರ್ಮಲ್ಯವಾಗಿರುವ ಸ್ಥಳೀಯ ಆಹಾರವನ್ನು ಈ ಕ್ಯಾಂಟೀನ್ನಲ್ಲಿ ಪೂರೈಸಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ