ಶಿರಸಿ: ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಶಿಷ್ಯ ಸ್ವೀಕಾರ ಮಹೋತ್ಸವ ಕಣ್ತುಂಬಿಕೊಳ್ಳಲು ಶಿಷ್ಯ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಮಾತೆಯರು, ಯುವಕರು, ಹಿರಿಯರು ಈ ಮಹಾ ಕಾರ್ಯದಲ್ಲಿ ಸೇವಾ ಮನೋಭಾವದಲ್ಲಿ ಭಾಗವಹಿಸುತ್ತಿರುವದು ವಿಶೇಷವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲದೆ, ಬೆಂಗಳೂರು, ಮುಂಬಯಿ, ದೆಹಲಿ, ಮಂಗಳೂರು, ಬೆಳಗಾವಿ, ಕಂಚಿ ಪ್ರಾಂತದಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.
ಮಾತೃ ಭೋಜನ ವಿಶೇಷ:
ಬುಧವಾರ ಆಗಮಿಸಿದ ಆರೇಳು ಸಾವಿರಕ್ಕೂ ಅಧಿಕ ಶಿಷ್ಯ ಭಕ್ತರಿಗೆ ಮಾತೃ ಭೋಜನ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಒಂದೂವರೆ ಸಾವಿರಕ್ಕೂ ಅಧಿಕ ಮಾತೆಯರು ಪ್ರಸಾದ ಭೋಜನ ಬಡಿಸುವುದರ ಮೂಲಕ ಅನ್ನಪೂರ್ಣೇಶ್ವರಿಯಾಗಿ ಸೇವೆ ಸಲ್ಲಿಸಿದರು. ಮಕ್ಕಳಿಗೆ ಬಡಿಸಿದಂತೆ ಊಟ ಬಡಿಸಿ ಮಾತೃ ಭೋಜನದ ಅರ್ಥ ಪೂರ್ಣತೆ ಹೆಚ್ಚಿಸಿದರು.ಭವಾನಿ, ಲಲಿತಾಂಭ, ರಾಜೇಶ್ವರಿ, ಗಂಗಾ, ಗೌರಿ, ಸರಸ್ವತೀ ಸೇರಿದಂತೆ ಹತ್ತು ಕೌಂಟರಿನಲ್ಲಿ ತಲಾ ೨೦ ಕ್ಕೂ ಹೆಚ್ಚು ಮಾತೆಯರಿಂದ ಅನ್ನ ಯಜ್ಞ ನಡೆಯಿತು.ಸಂಜೆ ಮಹಿಳೆಯರು ೧೦ ಸಾವಿರಕ್ಕೂ ಹೆಚ್ಚು ಲಾಡು ಪ್ರಸಾದವನ್ನೂ ಕಟ್ಟಿದ್ದಾರೆ.
ಅಷ್ಟಶ್ರಾದ್ಧ, ಲಕ್ಷ್ಮೀ ನೃಸಿಂಹ ಜಪ
ಶಿಷ್ಯ ಸ್ವೀಕಾರ ಮಹೋತ್ಸವ ಹಿನ್ನಲೆಯಲ್ಲಿ ಮೂರನೇ ದಿನ ಮಂಗಳವಾರ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಒಂದು ಸಾವಿರ ಗಣಪತ್ಯಥರ್ವಶೀರ್ಷ ಜಪ, ಹವನದ ಪೂರ್ಣಾಹುತಿ, ಬ್ರಹ್ಮಚಾರಿ ನಾಗರಾಜ ಭಟ್ಟರಿಂದ ಅಷ್ಟಶ್ರಾದ್ಧ ನೆರವೇರಿತು.ಮಧ್ಯಾಹ್ನೋತ್ತರ ವೈದಿಕರಿಂದ ಲಕ್ಷ್ಮೀನೃಸಿಂಹ ಜಪ ನಡೆಯಿತು.
ಸಂಜೆ ಶ್ರೀಮಠದ ಇತಿಹಾಸದ ಕುರಿತು ಡಾ. ಲಕ್ಷ್ಮೀಶ ಸೋಂದಾ ಉಪನ್ಯಾಸ, ಮಾತೆಯರಿಂದ ಭಜನೆ, ಶಂಕರ ಭಟ್ಟ ಉಂಚಳ್ಳಿ ಅವರ ಕೀರ್ತನೆಗಳು ನಡೆದವು.
ಪೂರ್ಣ ಕುಂಭ ಸ್ವಾಗತಕ್ಕೆ ಬನ್ನಿ
ಬುಧವಾರ ಶಿಷ್ಯ ಸ್ವೀಕಾರದ ಪೂರ್ವಾಂಗದ ಕಾರ್ಯಕ್ರಮಗಳು ಇರುವುದರಿಂದ ಹತ್ತರಿಂದ ಹನ್ನೆರಡು ಸಾವಿರಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ. ಇದಕ್ಕೆ ಸಂಬಂಧಿಸಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪೂರ್ಣ ಕುಂಭ ಸ್ವಾಗತಕ್ಕೆ ಬನ್ನಿ ಹೀಗೆಂದು ಶ್ರೀಮಠದ ಕೇಂದ್ರ ಮಾತೃ ಮಂಡಳಿ ಮನವಿ ಮಾಡಿಕೊಂಡಿದೆ.
ಫೆ.೨೨ರಂದು ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಆಗಮಿಸುವ ಯತಿಗಳನ್ನು, ಸ್ವರ್ಣವಲ್ಲೀ ಶ್ರೀಗಳನ್ನು, ಸನ್ಯಾಸ ಸ್ವೀಕಾರದ ನೂತನ ಶ್ರೀಗಳನ್ನೂ ಮಾತೆಯರು ಪೂರ್ಣಕುಂಭ ದೊಂದಿಗೆ ಸ್ವಾಗತಿಸಲಾಗುತ್ತಿದ್ದು, ಬುಧವಾರ ಬೆಳಿಗ್ಗೆ ೮:೩೦ರೊಳಗೆ ಸ್ವರ್ಣವಲ್ಲೀ ಮಠದಲ್ಲಿ ಇರಬೇಕಿದೆ ಎಂದುಕೇಂದ್ರ ಮಾತೃ ಮಂಡಳಿ ಅಧ್ಯಕ್ಷರಾದ ಗೀತಾ ಹೆಗಡೆ, ಶೀಗೇಮನೆ ತಿಳಿಸಿದ್ದಾರೆ.
ಬೆಳಿಗ್ಗೆ ೯ರಿಂದ ೧೦:೧೫ರ ತನಕ ಸಂಚಾರ ನಿರ್ಬಂಧ
ಫೆ.೨೨ರ ಬೆಳಿಗ್ಗೆ ೯ರಿಂದ ೧೦:೧೫ರ ತನಕ ಸನ್ಯಾಸ ಸ್ವೀಕಾರ ಕಾರ್ಯಕ್ರಮ ಶಾಲ್ಮಲಾ ನದಿಯ ನಡುವಿನಲ್ಲಿ ಆಗಲಿದ್ದು, ಮಠಕ್ಕೆ ಬರುವ ಮಾರ್ಗವೂ ಅದರ ದಡದಲ್ಲಿಯೆ ಇರುವದರಿಂದ ಒಂದು ಕಾಲು ತಾಸು ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ ಇರಲಿದೆ. ಈ ಅವಧಿ ಹೊರತು ಪಡಿಸಿ ಶ್ರೀಮಠಕ್ಕೆ ಪ್ರವೇಶಿಸಬೇಕಾಗಿದೆ ಎಂದು ಮಠದ ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ವಿ.ಹೆಗಡೆ ಗೊಡವೆಮನೆ ತಿಳಿಸಿದ್ದಾರೆ.
ಸ್ವರ್ಣವಲ್ಲೀ ಮಠದಲ್ಲಿ ಫೆ.೨೧ರ ಕಾರ್ಯಕ್ರಮ
ಶ್ರೀಸ್ವರ್ಣವಲ್ಲೀ ಮಠದಲ್ಲಿ ಬುಧವಾರ ಬೆಳಿಗ್ಗೆ ಸನ್ಯಾಸಗ್ರಹಣ ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ, ನಾಂದಿ, ಶ್ರಾದ್ಧ, ಮಾತೃಕಾ ಪೂಜಾ, ಸಾವಿತ್ರೀ ಪ್ರವೇಶ, ಶತಚಂಡಿಹವನ, ಮಧ್ಯಾಹ್ನೋತ್ತರ ಬ್ರಹ್ಮಾನ್ವಾಧಾನ, ಪ್ರಾಣಾದಿ ಹೋಮ, ಪುರುಷ ಸೂಕ್ತ ಹವನ, ವಿರಾಜ ಹೋಮ,
ಲಕ್ಷ್ಮೀನೃಸಿಂಹ ಜಪ, ನಡೆಯಲಿದೆ.
ಮಧ್ಯಾಹ್ನ ೩ಕ್ಕೆ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ಧರ್ಮ ಸಭೆ ನಡೆಯಲಿದ್ದು, ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಜೊತೆಗೆ ಕೂಡಲಿ ಶೃಂಗೇರಿ ಶ್ರೀಗಳು, ಶಿರಳಗಿ ಮಹಾ ಸ್ವಾಮೀಜಿ, ಹೊಳೆ ನರಸಿಪುರ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಇದೇ ವೇಳೆ ಆಲೋಕಯಾಂಬ ಲಲಿತೇ ಗ್ರಂಥ ಬಿಡುಗಡೆ ಆಗಲಿದೆ. ಯೋಗಾಚಾರ್ಯ ಶಂಕರನಾರಾಯಣ ಜೋಯಿಸರಿಂದ ವಿಶೇಷ ಉಪನ್ಯಾಸ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ