ಹೊನ್ನಾವರ : ಮಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದ ಬಸ್ಸಿನಡಿ ಆಕ್ಟಿವಾ ಹೊಂಡಾ ಸಿಲುಕಿ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ-ಮಗಳು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿಯ ಗುಳದಕೇರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಡೆದಿದೆ.
ಮೃತರನ್ನು ಮುರ್ಡೇಶ್ವರದ ಮಾವಳ್ಳಿಯ ನಾಡವರಕೇರಿ ನಿವಾಸಿ ಸವಿತಾ ರಾಜು ಆಚಾರಿ(40) ಮತ್ತು ಮಗಳು ಅಂಕಿತಾ(17) ಎಂದು ಗುರುತಿಸಲಾಗಿದೆ.
ಮಂಕಿ ಜಾತ್ರೆಗೆಂದು ಸಾರಸ್ವತ ಕೇರಿಯ ತಾಯಿ ಮನೆಗೆ ಮಗಳೊಂದಿಗೆ ಸವಿತಾ ಬಂದಿದ್ದರು. ಜಾತ್ರೆ ಪೇಟೆಯಿಂದ ವಾಪಸ್ಸಾಗುವಾಗ ತಾಯಿ-ಮಗಳು ದ್ವಿಚಕ್ರವಾಹನದಲ್ಲಿ ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿ ಹೊಡೆದಿದೆ. ಹೊಂಡಾ ಆಕ್ಟಿವಾ ಸಿಲುಕಿ ನಜ್ಜುಗುಜ್ಜಾಗಿದ್ದು ಗಂಭೀರ ಗಾಯಗೊಂಡ ತಾಯಿ-ಮಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನ ತಪ್ಪಿಸಲು ಹೋಗಿ ಬಸ್ ಡಿವೈಡರ್ ಹತ್ತಿದೆ. ಬಸ್ ಚಾಲಕ ಸವದತ್ತಿಯ ಫಕೀರಪ್ಪ ಬಸಪ್ಪ ವಿರುದ್ದ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ