ಲೋಕಸಭೆ ಚುನಾವಣೆ : ಬಂಗಾಳದಲ್ಲಿ ಇಂಡಿಯಾ ಮೈತ್ರಿಕೂಟವಿಲ್ಲ ; ಎಲ್ಲ 42 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ ಟಿಎಂಸಿ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣಗೆ ಟಿಕೆಟ್‌

ಕೋಲ್ಕತ್ತಾ: ಮುಂಬರುವ ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ರಾಜ್ಯದ ಎಲ್ಲ 42 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಭಾನುವಾರ ಪ್ರಕಟಿಸಿದೆ.
ಬ್ರೀಗ್ರೇಡ್ ಗ್ರೌಂಡ್ ಸಮಾವೇಶದಲ್ಲಿ ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅಭಿಷೇಕ್ ಬ್ಯಾನರ್ಜಿ ಅವರು ಹೆಸರುಗಳನ್ನು ಪ್ರಕಟಿಸಿದರು. ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಬಹರಂಪುರದಿಂದ ತೃಣಮೂಲ ಅಭ್ಯರ್ಥಿಯಾಗಿ ಲೋಕಸಭೆ ವಿಪಕ್ಷ ನಾಯಕ ಕಾಂಗ್ರೆಸ್ಸಿನ ಅಧೀರ್ ರಂಜನ್ ಚೌಧರಿ ವಿರುದ್ಧ ಸ್ಪರ್ಧಿಸಲಿದ್ದಾರೆ. ತೃಣಮೂಲದ ಪಟ್ಟಿಯಿಂದ ಇತರ ಪ್ರಮುಖ ಬೆಳವಣಿಗೆಯಲ್ಲಿ ಹಾಲಿ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ (ಬಸಿರ್‌ಹತ್ — ಸಂದೇಶ್‌ಖಾಲಿ ಕ್ಷೇತ್ರ) ಅವರನ್ನು ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಡಲಾಗಿದೆ. ಆದರೆ ಮಹುವಾ ಮೊಯಿತ್ರಾ ಕೃಷ್ಣನಗರ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ
ಲೋಕಸಭೆಯಲ್ಲಿ ಪ್ರಶ್ನೆಗಾಗಿ ಲಂಚ ಪಡೆದ ಹಗರಣದಲ್ಲಿ ಲೋಕಸಭೆಯಿಂದ ಉಚ್ಚಾಟಿತರಾಗಿರುವ ಮಹುವಾ ಮೊಯಿತ್ರಾ ಅವರಿಗೆ 2019 ರಲ್ಲಿ ಲೋಕಸಭೆಗೆ ಕಳುಹಿಸಿದ ಕ್ಷೇತ್ರವಾದ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದಲೇ ಟಿಕೆಟ್‌ ನೀಡಲಾಗಿದೆ.

ನುಸ್ರತ್ ಜಹಾನ್‌ಗೆ ಟಿಕೆಟ್‌ ಇಲ್ಲ..
ಸಂದೇಶಖಾಲಿ ಪ್ರಕರಣದ ನಂತರದ ಪರಿಣಾಮವೆಂದರೆ, ಹಾಲಿ ಸಂಸದೆ ನುಸ್ರತ್ ಜಹಾನ್ ಅವರಿಗೆ ಬಸಿರ್ಹತ್‌ನಿಂದ ತೃಣಮೂಲದಿಂದ ಟಿಕೆಟ್‌ ನೀಡಲಾಗಿಲ್ಲ. ಹಾಜಿ ನೂರುಲ್ ಇಸ್ಲಾಂ ಬಸಿರ್ಹತ್‌ನಿಂದ ಸ್ಪರ್ಧಿಸಲಿದ್ದಾರೆ. ಸಂದೇಶಖಾಲಿಯು ಬಸಿರ್ಹತ್ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ಮಿಮಿ ಚಕ್ರವರ್ತಿ ಬದಲಿಗೆ ನಟಿ ಸಯೋನಿ ಘೋಷ್
ರಾಜಕೀಯ ತ್ಯಜಿಸಲು ಬಯಸುವುದಾಗಿ ನಟಿ ಮಿಮಿ ಚಕ್ರವರ್ತಿ ಘೋಷಿಸಿದ ನಂತರ ಈಗ ಅವರ ಬದಲಿಗೆ ನಟಿ ಸಯೋನಿ ಘೋಷ್ ಅವರಿಗೆ ಜಾದವ್‌ಪುರ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.
ಯೂಸುಫ್ ಪಠಾಣ್ ವರ್ಸಸ್‌ ಅಧೀರ್ ರಂಜನ್ ಚೌಧರಿ?
ತೃಣಮೂಲ ಕಾಂಗ್ರೆಸ್‌ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಬಹರಂಪುರ ಅಭ್ಯರ್ಥಿಯಾಗಿ ಘೋಷಿಸಿದೆ. ಬಹರಂಪುರ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ ಮತ್ತು ಅಧೀರ್ ರಾಜನ್ ಚೌಧರಿ 1999 ರಿಂದ ಅಲ್ಲಿಂದ ಲೋಕಸಭೆಗೆ ಆಯ್ಕೆಯಾಗುತ್ತಿದ್ದಾರೆ.
ಕಾಂಗ್ರೆಸ್-ಟಿಎಂಸಿ ಸೀಟು ಹಂಚಿಕೆಯ ಮಾತುಕತೆಗಳಿಗೆ ತಡೆ ಬೀಳಲು ಕಾರಣವಾದ ಕ್ಷೇತ್ರಗಳಲ್ಲಿ ಇದೂ ಒಂದಾಗಿದೆ, ಏಕೆಂದರೆ ಮಮತಾ ಬ್ಯಾನರ್ಜಿ ಅವರು ಈ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಒಪ್ಪಲಿಲ್ಲ.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!

ತೃಣಮೂಲ ಕಾಂಗ್ರೆಸ್‌ನ 42 ಅಭ್ಯರ್ಥಿಗಳ   ಪಟ್ಟಿ …
ಕೂಚ್ ಬೆಹರ್ – ಜಗದೀಶಚಂದ್ರ ಬಸುನಿಯಾ
ಅಲಿಪುರ್ದೂರ್ – ಪ್ರಕಾಶ ಚಿಕ್ ಬರೈಕ್ (ರಾಜ್ಯಸಭಾ ಸದಸ್ಯ)
ಜಲ್ಪೈಗುರಿ – ನಿರ್ಮಲಚಂದ್ರ ರೈ (ಶಾಸಕ)
ಡಾರ್ಜಿಲಿಂಗ್ – ಗೋಪಾಲ ಲಾಮಾ
ರಾಯಗಂಜ್ – ಕೃಷ್ಣ ಕಲ್ಯಾಣಿ
ಬಲೂರ್ಘಾಟ್ – ಬಿಪ್ಲವ ಮಿತ್ರ (ಸಚಿವ)
ಮಾಲ್ಡಾ ಉತ್ತರ – ಪ್ರಸೂನ್ ಬ್ಯಾನರ್ಜಿ (ಮಾಜಿ ಐಪಿಎಸ್ ಅಧಿಕಾರಿ)
ಮಾಲ್ಡಾ ದಕ್ಷಿಣ – ಶಾನವಾಜ್ ಅಲಿ ರೆಹಮಾನ್
ಜಂಗಿಪುರ – ಖಲೀಲುರ್ ರೆಹಮಾನ್
ಬಹರಂಪುರ್ – ಯೂಸುಫ್ ಪಠಾಣ್ (ಭಾರತದ ಮಾಜಿ ಕ್ರಿಕೆಟಿಗ)
ಮುರ್ಷಿದಾಬಾದ್ – ಅಬು ತಾಹೆರ್ ಖಾನ್
ಕೃಷ್ಣ ನಗರ – ಮಹುವಾ ಮೊಯಿತ್ರಾ
ರಣಘಾಟ್ – ಮುಕುಟಮಣಿ ಅಧಿಕಾರಿ (ಬಿಜೆಪಿ ಶಾಸಕ)
ಬಂಗಾನ್ – ಬಿಸ್ವಜಿತ ದಾಸ್
ಬ್ಯಾರಕಪೋರ್ – ಪಾರ್ಥ ಭೌಮಿಕ್ (ಸಚಿವ)
ದಮ್ ದಮ್ – ಸೌಗತ ರಾಯ್ (ಸಂಸದ)
ಬರಾಸತ್ – ಕಾಕಲಿ ಘೋಷ್ ದಸ್ತಿದಾರ್ (ಸಂಸದ)
ಬಸಿರ್ಹತ್ – ಹಾಜಿ ನೂರುಲ್ ಇಸ್ಲಾಂ
ಜೋಯನಗರ – ಪ್ರತಿಮಾ ಮೊಂಡಲ್
ಮಥುರಾಪುರ – ಬಾಪಿ ಹಲ್ದರ್
ಡೈಮಂಡ್ ಹಾರ್ಬರ್ – ಅಭಿಷೇಕ್ ಬ್ಯಾನರ್ಜಿ
ಜಾದವಪುರ- ಸಯೋನಿ ಘೋಷ್ (ಯುವ ಟಿಎಂಸಿ ಅಧ್ಯಕ್ಷರು)
ಕೋಲ್ಕತ್ತಾ ದಕ್ಷಿಣ – ಮಾಲಾ ರಾಯ್ (ಸಂಸದೆ)
ಕೋಲ್ಕತ್ತಾ ಉತ್ತರ – ಸುದೀಪ್ ಬಂದೋಪಾಧ್ಯಾಯ (ಸಂಸದ)
ಹೌರಾ- ಪ್ರಸೂನ್ ಬ್ಯಾನರ್ಜಿ (ಸಂಸದ)
ಉಲುಬೇರಿಯಾ- ಸಜ್ದಾ ಅಹ್ಮದ್
ಶ್ರೀರಾಮಪುರ – ಕಲ್ಯಾಣ ಬ್ಯಾನರ್ಜಿ (ಸಂಸದ)
ಹೂಗ್ಲಿ- ರಚನಾ ಬ್ಯಾನರ್ಜಿ (ನಟಿ)
ಅರಾಂಬಾಗ್- ಮಿತಾಲಿ ಬಾಗ್
ತಮ್ಲುಕ್ – ದೇವಾಂಗ್ಶು ಭಟ್ಟಾಚಾರ್ಯ
ಕಂಠಿ – ಉತ್ತಮ ಬಾರಿಕ್
ಘಟಾಲ್ – ದೀಪಕ ಅಧಿಕಾರಿ (ಸಂಸದ)
ಜಾರ್ಗ್ರಾಮ್ – ಕಲಿಪಾದ ಸೊರೆನ್
ಮೇದಿನಿಪುರ – ಜೂನ್ ಮಲಿಯಾ (ಶಾಸಕ)
ಪುರುಲಿಯಾ – ಶಾಂತಿರಾಮ ಮಹತೋ
ಬಂಕುರಾ – ಅರೂಪ್ ಚಕ್ರವರ್ತಿ (ಶಾಸಕ)
ಬಿಷ್ಣುಪುರ – ಸುಜಾತಾ ಮೊಂಡಲ್ ಖಾನ್ (ಪ್ರಸ್ತುತ ಬಿಜೆಪಿ ಸಂಸದರ ಮಾಜಿ ಪತ್ನಿ)
ಬುರ್ದ್ವಾನ್ – ಡಾ. ಶರ್ಮಿಳಾ ಸರ್ಕಾರ
ಬುರ್ದ್ವಾನ್-ದುರ್ಗಾಪುರ- ಕೀರ್ತಿ ಆಜಾದ್ (ಮಾಜಿ ಕ್ರಿಕೆಟಿಗ)
ಅಸನ್ಸೋಲ್ – ಶತ್ರುಘ್ನ ಸಿನ್ಹಾ (ಸಂಸದ)
ಬೋಳೂರು – ಅಸಿತ್ ಮಲ್ (ಸಂಸದ)
ಬಿರ್ಭುಮ್ – ಶತಾಬ್ದಿ ರಾಯ್ (ಸಂಸದ)

ಕಾಂಗ್ರೆಸ್‌ ಪ್ರತಿಕ್ರಿಯೆ…
ಏಕಪಕ್ಷೀಯ ಘೋಷಣೆಗಳ ಮೂಲಕ ಅಲ್ಲ, ಮಾತುಕತೆಗಳ ಮೂಲಕ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸುವ ಮೂಲಕ ಬಿಜೆಪಿ ವಿರುದ್ಧ ಹೋರಾಡಲು ಇಂಡಿಯಾ ಮೈತ್ರಿಕೂಟವು ಯಾವಾಗಲೂ ಬಯಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
“ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯೊಂದಿಗೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳುವ ತನ್ನ ಬಯಕೆಯನ್ನು ಪದೇ ಪದೇ ವ್ಯಕ್ತಪಡಿಸಿದೆ. ಅಂತಹ ಒಪ್ಪಂದವನ್ನು ಮಾತುಕತೆಗಳ ಮೂಲಕ ಅಂತಿಮಗೊಳಿಸಬೇಕೇ ಹೊರತು ಏಕಪಕ್ಷೀಯ ಘೋಷಣೆಗಳಿಂದಲ್ಲ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಾವಾಗಲೂ ಸಮರ್ಥಿಸುತ್ತದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಾವಾಗಲೂ ಇಂಡಿಯಾ ಬ್ಲಾಕ್‌ ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಡಲು ಬಯಸುತ್ತದೆ ”ಎಂದು ತೃಣಮೂಲ 42 ಕ್ಷೇತ್ರಗಳಿಗೆ 42 ಹೆಸರುಗಳನ್ನು ಘೋಷಿಸಿದ ನಂತರ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಉಗ್ರರ ದಾಳಿಯಲ್ಲಿ ಓರ್ವ ವಾಯುಪಡೆ ಸಿಬ್ಬಂದಿ ಹುತಾತ್ಮ, 5 ಮಂದಿಗೆ ಗಾಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement