ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲು ಮಾರ್ಗದ ಅಂತಿಮ ಸ್ಥಳ ಸರ್ವೆ (FLS) ನಡೆಸಲು ಮಂಜೂರಿ ನೀಡಿದ ರೈಲ್ವೆ ಸಚಿವಾಲಯ

ಶಿರಸಿ: 3.95 ಕೋಟಿ ರೂ ವೆಚ್ಚದಲ್ಲಿ 158 ಕಿ.ಮೀ ಉದ್ದದ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಹೊಸ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆ (Final Location Survey (FLS)) ನಡೆಸಲು ರೈಲ್ವೆ ಸಚಿವಾಲಯ ಮಂಜೂರಾತಿ ನೀಡಿದೆ.
ಈ ಕುರಿತು ನವದೆಹಲಿಯ ಗತಿಶಕ್ತಿ ಭವನದಲ್ಲಿರುವ ರೈಲ್ವೆ ಮಂಡಳಿಯ ಜಂಟಿ ನಿರ್ದೇಶಕರಾದ ಅಭಿಷೇಕ ಎಂಬವರು ಹುಬ್ಬಳ್ಳಿಯ ನೈಋತ್ವ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ರೈಲ್ವೇ ಸಚಿವಾಲಯದ ಹಣಕಾಸು ನಿರ್ದೇಶನಾಲಯ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಫೆಬ್ರವರಿ 27ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮಾಜಿ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಗಮನ ಸೆಳೆಯುವ ಪತ್ರ ಬರೆದಿದ್ದರು.
158 ಕಿಮೀ ಉದ್ದದ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ವರೆಗಿನ ಹೊಸ ರೈಲ್ವೆ ಮಾರ್ಗದ ಕಾರ್ಯಸಾಧ್ಯತಾ ಸಮೀಕ್ಷೆ ಪೂರ್ಣಗೊಂಡಿದ್ದು, ಕ್ರೋಢೀಕೃತ ಅಂದಾಜನ್ನು ಸಿದ್ಧಪಡಿಸಲಾಗಿದೆ. ಅಂದಾಜು 3115.16 ಕೋಟಿ ರೂ.ವೆಚ್ಚದ ಈ ಯೋಜನೆಗೆ ಆರ್ಥಿಕ ರಿಟರ್ನ್ ದರವು + 10.3% ಮತ್ತು ಹಣಕಾಸಿನ ದರವು + 2.33% 6 ಆಗಿದೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದರು.

ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನಡುವೆ ಹೊಸ ರೈಲು ಮಾರ್ಗ ಈ ಭಾಗದ ಹಲವು ವರ್ಷಗಳಿಂದ ಬೇಡಿಕೆಯಾಗಿದೆ. ಈ ಮಾರ್ಗವು ಕರ್ನಾಟಕದ ಮಲೆನಾಡು ಪ್ರದೇಶವಾದ ಸಿದ್ದಾಪುರ, ಶಿರಸಿ ಮತ್ತು ಮುಂಡಗೋಡು ಮುಂತಾದ ಪ್ರಮುಖ ಸ್ಥಳಗಳ ಮೂಲಕ ಹಾದುಹೋಗುತ್ತದೆ. ಶಿರಸಿ ಮತ್ತು ಸಿದ್ದಾಪುರ ಪ್ರದೇಶಗಳು ಅಡಕೆ ಕೃಷಿಗೆ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಸಾವಿರಾರು ಟನ್ ಅಡಿಕೆಯನ್ನು ದೇಶದ ವಿವಿಧ ಭಾಗಗಳಿಗೆ ಕಳುಹಿಸಲಾಗುತ್ತದೆ. ಅದೇ ರೀತಿ, ಈ ಪ್ರದೇಶದ ತೋಟಗಾರಿಕೆ ಬೆಳೆಗಳನ್ನು ಸಹ ದೇಶದ ವಿವಿಧ ಭಾಗಗಳಲ್ಲಿ ಸೇವಿಸಲಾಗುತ್ತದೆ. ಮುಂಡಗೋಡು ದೇಶದ ಅತಿ ದೊಡ್ಡ ಟಿಬೆಟಿಯನ್‌ ಬೌದ್ಧ ನೆಲೆಗಳನ್ನು ಹೊಂದಿದೆ. ಆದಾಗ್ಯೂ, ಈ ಪ್ರದೇಶವು ಭೌಗೋಳಿಕವಾಗಿ ದಟ್ಟವಾದ ಕಾಡುಗಳು, ಹಲವಾರು ನದಿಗಳು ಹಾಗೂ ವಿರಳ ಜನಸಂಖ್ಯೆ ಕಾರಣದಿಂದಾಗಿ ವಿಶೇಷ ಅಭಿವೃದ್ಧಿ ಸವಾಲುಗಳನ್ನು ಎದುರಿಸುತ್ತಿದೆ. ಪ್ರಸ್ತಾವಿತ ಮಾರ್ಗವು ಸುಧಾರಿತ ಸಾರಿಗೆ ಸಂಪರ್ಕದ ಮೂಲಕ ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ನಿರೀಕ್ಷೆಯಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

ಬೇಡಿಕೆಯ ಆಧಾರದ ಮೇಲೆ, ಕಾರ್ಯಸಾಧ್ಯತೆಯ ಸಮೀಕ್ಷೆಯನ್ನು ನಡೆಸಲಾಗಿದೆ ಮತ್ತು ನೈಋತ್ಯ ರೈಲ್ವೆಯು ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ಅರಣ್ಯ ಮತ್ತು ಪರಿಸರಕ್ಕೆ ಕನಿಷ್ಠ ಹಾನಿಯಾಗುವ ರೀತಿಯಲ್ಲಿ ಯೋಜನೆ ತಯಾರಿಸಿ ಸಂಪರ್ಕ ಸಾಧಿಸಲು ಉದ್ದೇಶಿಸಲಾಗಿದೆ. ಹೀಗಾಗಿ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲು ಅಂತಿಮ ಸ್ಥಳ ಸಮೀಕ್ಷೆ (Final Location Survey) ನಡೆಸಲು ಮಂಜೂರು ನೀಡುವಂತೆ ನೈಋತ್ವ ರೈಲ್ವೆ (SWR) ಉಲ್ಲೇಖದ ಅಡಿಯಲ್ಲಿ ವಿವರವಾದ ಪತ್ರವನ್ನು ರೈಲ್ವೆ ಮಂಡಳಿಗೆ ವಿನಂತಿಸಲಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿ ರೈಲ್ವೆ ಸಚಿವರ ಗಮನ ಸೆಳೆದಿದ್ದರು.
‘ಸಬಕಾ ಸಾಥ್, ಸಬಕಾ ವಿಕಾಸ’ ಖಾತ್ರಿಪಡಿಸುವ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸುಧಾರಿಸುವ ನಿಟ್ಟಿನಲ್ಲಿ ತಾಳಗುಪ್ಪ-ಶಿರಸಿ- ಹುಬ್ಬಳ್ಳಿ (158 ಕಿಮೀ) ನಡುವಿನ ಪ್ರಸ್ತಾವಿತ ಹೊಸ ರೈಲು ಮಾರ್ಗಕ್ಕೆ ಮಂಜೂರು ನೀಡಬೇಕು ಎಂದು ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಒತ್ತಾಯಿಸಿದ್ದರು.
ಇದಕ್ಕೆ ರೈಲ್ವೆ ಸಚಿವಾಲಯವು ಸ್ಪಂದಿಸಿದ್ದು, ಈ ಬಗ್ಗೆ ರೈಲ್ವೆ ಮಂಡಳಿಯ ಜಂಟಿ ನಿರ್ದೇಶಕರು ಹುಬ್ಬಳ್ಳಿಯ ನೈಋತ್ವ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದು 3.95 ಕೋಟಿ ರೂ ವೆಚ್ಚದಲ್ಲಿ 158 ಕಿ.ಮೀ ಉದ್ದದ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಹೊಸ ರೈಲು ಮಾರ್ಗದ ವಿವರವಾದ ಯೋಜನಾ ವರದಿ ತಯಾರಿಸಲು ಪೂರ್ವಭಾವಿಯಾಗಿ ಅಂತಿಮ ಸ್ಥಳ ಸಮೀಕ್ಷೆ (Final Location Survey (FLS)) ನಡೆಸಲು ಮಂಜೂರಾತಿ ನೀಡಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement