ಮಂಡ್ಯ: ಮುತ್ತತ್ತಿಯಲ್ಲಿ ಕಾವೇರಿ ನದಿಯಲ್ಲಿ ನಾಲ್ವರು ನೀರು ಪಾಲು

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಅರಣ್ಯ ಪ್ರದೇಶದ ಕಾವೇರಿ ನದಿಯಲ್ಲಿ ಈಜಾಡಲು ತೆರಳಿದ್ದ ನಾಲ್ವರು ನೀರು ಪಾಲಾದ ಘಟನೆ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಮೈಸೂರಿನ ಗುಂಡೂರಾವ್ ನಗರ ನಿವಾಸಿಗಳಾದ ನಾಗೇಶ (45), ಅವರ ಪುತ್ರ ಭರತ (17), ಮಹಾದೇವ (14), ಗುರುಕುಮಾರ (32) ಎಂದು ಗುರುತಿಸಲಾಗಿದೆ.
ಆಂಜನೇಯಸ್ವಾಮಿ ದೇವಾಲಯದಲ್ಲಿನ ಧಾರ್ಮಿಕ ಕಾರ್ಯಕ್ರಮಕ್ಕೆ ಮಂಗಳವಾರ ಬೆಳಿಗ್ಗೆ 50 ಮಂದಿ ಒಂದೇ ಬಸ್‌ನಲ್ಲಿ ಆಗಮಿಸಿದ್ದರು. ಬೆಳಿಗ್ಗೆ ತಿಂಡಿ ತಿಂದ ನಂತರ ಹಲವರು ಈಜಾಡಲು ಕಾವೇರಿ ನದಿಗೆ ಇಳಿದಿದ್ದರು. ಈಜಾಡುವ ಸಂದರ್ಭದಲ್ಲಿ ಮಹಾದೇವ ನೀರಿನ ಮಡುವಿನಲ್ಲಿ ಮುಳುಗಿದರು. ಆತನನ್ನು ರಕ್ಷಿಸಲು ತಂದೆ ನಾಗೇಶ ಪ್ರಯತ್ನಿಸಿದರು, ಆದರೆ, ಅವರೂ ನೀರಿನ ಮಡುವಿನಲ್ಲಿ ಸಿಲುಕಿದರು. ರಕ್ಷಣೆಗೆ ತೆರಳಿದ ಭರತ ಹಾಗೂ, ಗುರುಕುಮಾರ ಕೂಡ ಮಡುವಿನಲ್ಲಿ ಸಿಲುಕಿದರು. ಎಲ್ಲರೂ ಮಡುವಿನಲ್ಲಿ ಸಿಲುಕಿ ಜಲಸಮಾಧಿಯಾದರು ಎಂದು ಹೇಳಲಾಗಿದೆ.
ಹಲಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹಕ್ಕೆ ಹುಡುಕಾಟ ನಡೆದಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement