ನಟಿ-ಸಂಸದೆ ಹೇಮಮಾಲಿನಿ ವಿರುದ್ಧ ಅವಹೇಳನಕಾರಿ ಹೇಳಿಕೆ : ಸುರ್ಜೆವಾಲಾ ವಿರುದ್ಧ ಪ್ರಕರಣ ದಾಖಲಿಸಿದ ರಾಷ್ಟ್ರೀಯ ಮಹಿಳಾ ಆಯೋಗ

ನವದೆಹಲಿ : ಮಥುರಾ ಕ್ಷೇತ್ರದ ಹಾಲಿ ಬಿಜೆಪಿ ಸಂಸದೆ ಹಾಗೂ ನಟಿ ಹೇಮಮಾಲಿನಿ ವಿರುದ್ಧ ಕಾಂಗ್ರೆಸ್ ಸಂಸದ ರಣದೀಪ ಸಿಂಗ್ ಸುರ್ಜೆವಾಲ ಅವರು ಅವಹೇಳನಕಾರಿ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಈ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದೆ.
ಇದೇ ವೇಳೆ ಪ್ರಕರಣ ಸಂಬಂಧ ಹರಿಯಾಣದ ರಾಜ್ಯ ಮಹಿಳಾ ಆಯೋಗ ಕೂಡ ಸುರ್ಜೆವಾಲಗೆ ನೋಟೀಸ್ ಜಾರಿ ಮಾಡಿದೆ. ಹರ್ಯಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಣದೀಪ ಸಿಂಗ್‌ ಸುರ್ಜೆವಾಲ ಅವರು ಮಾತನಾಡಿರುವ ವೀಡಿಯೊವೊಂದನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿದ್ದರು. ಇದು ಮಹಿಳೆಯರನ್ನು ತುಚ್ಛವಾಗಿ ಕಾಣುವ ರಾಹುಲ್ ಗಾಂಧಿಯ ಕಾಂಗ್ರೆಸ್ ಎಂದು ಟೀಕಿಸಿದ್ದರು. ಇದಾದ ಬಳಿಕೆ ಬಳಿಕ ಉಭಯ ಪಕ್ಷಗಳ ನಾಯಕರ ನಡುವೆ ಭಾರಿ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆ ಸೃಷ್ಟಿಯಾಗಿದೆ.

ರಣದೀಪ್ ಸುರ್ಜೆವಾಲ ಅವರಿಂದ ಬಂದ ಅವಹೇಳನಕಾರಿ ಹೇಳಿಕೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ ಬಲವಾಗಿ ಖಂಡಿಸುತ್ತದೆ. ಈ ಹೇಳಿಕೆಯು ಮಹಿಳೆಯ ಘನತೆಗೆ ಕುಂದು ತರುವಂತಿದೆ ಎಂದು ಎನ್​ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಅಧಿಕೃತವಾಗಿ ಪತ್ರ ಬರೆದಿದ್ದು, ಸುರ್ಜೆವಾಲ ವಿರುದ್ದ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕ್ರಮ ಕೈಗೊಂಡ ವರದಿಯನ್ನು ಮೂರು ದಿನದಲ್ಲಿ ಸಲ್ಲಿಸಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಮಹಿಳಾ ಆಯೋಗ ಗುರುವಾರ ಹೇಳಿಕೆ ಬಿಡುಗಡೆ ಮಾಡಿದೆ.
ಶಾಸಕರು, ಸಂಸದರನ್ನು ಯಾಕೆ ಆರಿಸಿ ಕಳುಹಿಸಲಾಗುತ್ತದೆ? ನಮ್ಮ ಧ್ವನಿಯಾಗಲಿ, ನಮ್ಮ ವಿಚಾರ ಒಪ್ಪಿಸಲಿ ಎಂದು ಅವರನ್ನು ಆರಿಸಿ ಕಳುಹಿಸುತ್ತೇವೆ. ಹೇಮ ಮಾಲಿನಿಯಂತೆ ನೆಕ್ಕಲು ಕಳುಹಿಸಲಾಗುತ್ತದಾ?’ ಎಂದು ರಣದೀಪ ಸುರ್ಜೆವಾಲ ಹೇಳಿರುವ ವೀಡಿಯೊವನ್ನು ಅಮಿತ್ ಮಾಳವೀಯ ಹಂಚಿಕೊಂಡಿದ್ದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ನನ್ನ ವೀಡಿಯೊ ತಿರುಚಲಾಗಿದೆ…
ಇದೇ ವೇಳೆ, ರಣದೀಪ್ ಸಿಂಗ್ ಸುರ್ಜೆವಾಲ ಅವರು ಅಮಿತ್ ಮಾಳವೀಯ ಹಂಚಿಕೊಂಡಿರುವ ವೀಡಿಯೊವನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ತಾನು ಕೆಟ್ಟದಾಗಿ ಮಾತನಾಡಿಲ್ಲ. . ತಮ್ಮ ಮಾತುಗಳನ್ನು ವಿಡಿಯೋದಲ್ಲಿ ಎಡಿಟ್ ಮಾಡಿ ತಿರುಚಲಾಗಿದೆ ಎಂದು ಹೇಳಿದ್ದಾರೆ. ಮೋದಿ ಸರ್ಕಾರದ ಯುವ ವಿರೋಧಿ, ರೈತ ವಿರೋಧಿ, ಬಡವರ ವಿರೋಧಿ ನೀತಿಗಳಿಂದ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ನಾಯಕರು ವೀಡಿಯೊವನ್ನು ಎಡಿಟ್ ಮಾಡಿ, ತಿರುಚಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ. “ಬಿಜೆಪಿಯ ಐಟಿ ಸೆಲ್ ನಕಲಿ ಸುದ್ದಿಗಳನ್ನು ಸಂಪಾದಿಸುವ, ತಿರುಚುವ ಮತ್ತು ಹರಡುವ ಅಭ್ಯಾಸವನ್ನು ಅಭಿವೃದ್ಧಿಪಡಿಸಿದೆ. ಸಂಪೂರ್ಣ ವೀಡಿಯೋವನ್ನು ಆಲಿಸಿ. ಆಗ ನಾನು ಹೇಳಿದ್ದೇನೆ ಎಂಬುದು ಗೊತ್ತಾಗುತ್ತದೆ. “ಹೇಮಾ ಮಾಲಿನಿ ಅವರು ಧರ್ಮೇಂದ್ರ ಅವರನ್ನು ಮದುವೆಯಾಗಿರುವ ಕಾರಣ ಮತ್ತು ನಮ್ಮ ಸೊಸೆಯಾಗಿರುವುದರಿಂದ ನಾವು ಕೂಡ ಅವರನ್ನು ತುಂಬಾ ಗೌರವಿಸುತ್ತೇವೆ” ಎಂದು ಕಾಂಗ್ರೆಸ್ ನಾಯಕ ಹೇಳಿದರು. ಹೇಮಮಾಲಿನಿಯನ್ನು ಗೌರವಿಸುವುದಾಗಿ ಅದೇ ಕಾರ್ಯಕ್ರಮದಲ್ಲಿ ಹೇಳಿದ್ದ ವೀಡಿಯೊ ತುಣುಕೊಂದನ್ನು ಅವರು ಪೋಸ್ಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಹೇಮಾ ಮಾಲಿನಿ ಪ್ರತಿಕ್ರಿಯೆ..
ವಿವಾದದ ಕುರಿತು ಪ್ರತಿಕ್ರಿಯಿಸಿದ ಹೇಮಾ ಮಾಲಿನಿ, ಮಹಿಳೆಯರಿಗೆ ಗೌರವ ಕೊಡುವುದನ್ನು ಪ್ರತಿಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಲಿಯಬೇಕು ಎಂದು ಗುರುವಾರ ಹೇಳಿದ್ದಾರೆ.
ಮಥುರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಮಾತನಾಡಿದ ಅವರು, ಪ್ರತಿಪಕ್ಷಗಳು ಕೇವಲ ‘ಜನಪ್ರಿಯ ಜನರನ್ನು’ ಗುರಿಯಾಗಿಸುತ್ತವೆ ಎಂದು ಹೇಳಿದರು. “ಅವರು ಜನಪ್ರಿಯ ಜನರನ್ನು ಮಾತ್ರ ಗುರಿಯಾಗಿಸುತ್ತಾರೆ ಏಕೆಂದರೆ ಜನಪ್ರಿಯವಲ್ಲದವರನ್ನು ಗುರಿಯಾಗಿಸುವುದು ಅವರಿಗೆ ಯಾವುದೇಪ್ರಚಾರವನ್ನು ನೀಡುವುದಿಲ್ಲ… ಅವರು ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯಿಂದ ಕಲಿಯಬೇಕು” ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಮಥುರಾದಿಂದ ಮರು ನಾಮನಿರ್ದೇಶನಗೊಂಡಿದ್ದಕ್ಕೆ ಹೇಮಾ ಸಂತಸ ವ್ಯಕ್ತಪಡಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement