ಕುಮಟಾ: ಯುಗಾದಿ ಉತ್ಸವ ಸಮಿತಿ ಕುಮಟಾ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಕೂಜಳ್ಳಿಯ ಭಾವಧಾರಾ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆದಿದೆ.
ಕುಮಟಾದ ನೆಲ್ಲಿಕೇರಿಯ ಮಹಾಸತಿ ದೇವಸ್ಥಾನದಲ್ಲಿ ಶನಿವಾರ (ಏಪ್ರಿಲ್ 6) ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ನಡೆಯಿತು. ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳೇ ಇದ್ದ ಕೂಜಳ್ಳಿಯ ಭಾವಧಾರಾ ಭಜನಾ ಮಂಡಳಿ ಪ್ರಥಮ ಸ್ಥಾನ ಗೆದ್ದಿರುವುದು ವಿಶೇಷವಾಗಿದೆ.
ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ತಂಡಗಳು ಪಾಲ್ಗೊಂಡಿದ್ದವು. ಅಂತಿಮವಾಗಿ ಒಟ್ಟು ನಾಲ್ಕು ತಂಡಗಳು ಮೂರು ಸ್ಥಾನಗಳನ್ನು ಹಂಚಿಕೊಂಡಿವೆ. ಮೊದಲನೇ ಸ್ಥಾನವನ್ನು ಕೂಜಳ್ಳಿಯ ಭಾವಧಾರಾ ಭಜನಾ ಮಂಡಳಿ ಪಡೆದುಕೊಂಡಿದ್ದು 7,111 ರೂ.ಗಳ ಬಹುಮಾನ ಗೆದ್ದಿದೆ.
ದ್ವಿತೀಯ ಬಹುಮಾನ(5,111 ರೂ.)ವನ್ನು ಕುಮಟಾದ ಗಂಧರ್ವ ಕಲಾ ಕೇಂದ್ರದ ಭಜನಾ ಮಂಡಳಿ ಪಡೆದರೆ ಮೂರನೇ ಬಹುಮಾನ(3,111ರೂ.)ವನ್ನು ಶಿರಸಿಯ ಸ್ವರ್ಣವಲ್ಲೀ ಮಾತೃವೃಂದ ಭಜನಾ ತಂಡ ಹಾಗೂ ಕುಮಟಾದ ಗಂಧರ್ವ ಭಾರತಿ ಭಜನಾ ಮಂಡಳಿ ಜಂಟಿಯಾಗಿ ಹಂಚಿಕೊಂಡಿವೆ.
ಸ್ಪರ್ಧೆಯ ನಿರ್ಣಾಯಕರಾಗಿ ವಿದ್ವಾನ್ ವಿವೇಕ ಮಹಾಲೆ ಅಂಕೋಲಾ, ಶ್ರೀಧರ ಪ್ರಭು ಕುಮಟಾ ಹಾಗೂ ಪ್ರೊ. ಆನಂದ ನಾಯಕ ಚಂದಾವರ ಅವರು ಪಾಲ್ಗೊಂಡಿದ್ದರು. ಯುಗಾದಿ ಹಬ್ಬದ ಪ್ರಯುಕ್ತ ಈ ಜಿಲ್ಲಾಮಟ್ಟದ ಭಜನಾ ಸ್ಪರ್ಧೆ ಆಯೋಜಿಸಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ