ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆ ‘ಸಂಕಲ್ಪ ಪತ್ರ’ ಬಿಡುಗಡೆ ಮಾಡಿದೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿಯಂದು ಸಂಕಲ್ಪ ಪತ್ರದ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಮೋದಿ ಅವರು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಹಾಗೂ ರಾಜನಾಥ್ ಸಿಂಗ್ ಅವರ ಉಪಸ್ಥಿತಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಮುಂದಿನ ಲೋಕಸಭಾ ಚುನಾವಣೆಗೆ ಮೋದಿಯ ಗ್ಯಾರಂಟಿ ಎಂದು ಘೋಷಿಸಿದ ಬಿಜೆಪಿ ಮುಂದಿನ ಐದು ವರ್ಷಗಳ ಕಾಲ ಮುಕ್ತ ರೇಶನ್, ನೀರು, ಆರೋಗ್ಯ, ವಿದ್ಯುತ್ ಸೇರಿದಂತೆ 14 ಗ್ಯಾರಂಟಿಗಳನ್ನು ದೇಶದ ಎಲ್ಲರಿಗೂ ತಲುಪಿಸುವುದಾಗಿ ಘೋಷಿಸಿದೆ. ಪ್ರಣಾಳಿಕೆಯಲ್ಲಿ ಸೂರ್ಯ ಘರ್ ಯೋಜನೆಯಡಿ ಉಚಿತ ವಿದ್ಯುತ್, ರೈತರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಈಶಾನ್ಯ ಮತ್ತು ದಕ್ಷಿಣ ರಾಜ್ಯಗಳಿಗೆ ಬುಲೆಟ್ ರೈಲು, 70 ವರ್ಷಗಳ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ಭಾಗ್ಯ ಯೋಜನೆ, ಮುದ್ರಾ ಸಾಲ ಯೋಜನೆ 20 ಲಕ್ಷ ರೂ.ಗಳಿಗೆ ಹೆಚ್ಚಳ, 3 ಕೋಟಿ ಬಡವರಿಗೆ ಮನೆ ನಿರ್ಮಾಣ ಭರವಸೆ ಇತ್ಯಾದಿ ಭರವಸೆ ನೀಡಲಾಗಿದೆ.
ಬಿಜೆಪಿಯ ಈ ಸಂಕಲ್ಪಪತ್ರವು ವಿಕಸಿತ ಭಾರತದ 4 ಪ್ರಮುಖ ಶಕ್ತಿಗಳಾದ ಯುವ ಶಕ್ತಿ, ನಾರಿ ಶಕ್ತಿ, ಬಡ, ರೈತರನ್ನು ಸಶಕ್ತಗೊಳಿಸುವ ಗುರಿ ಹೊಂದಿದೆ. ಈ ಸಂಕಲ್ಪ ಪತ್ರದಲ್ಲಿ ಉದ್ಯೋಗ ಸೃಷ್ಟಿ ಬಗ್ಗೆ ಗಮನ ಹರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಿಜೆಪಿ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು…
ಬಿಜೆಪಿ ಪ್ರಣಾಳಿಕೆ ‘ಸಂಕಲ್ಪ ಪತ್ರ’ ದಲ್ಲಿ ಅಂಬೇಡ್ಕರರ ನ್ಯಾಯ, ಆದರ್ಶಗಳ ಪಾಲನೆಯ ವಾಗ್ದಾನ
ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆ ಜಾರಿ
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಉಪಕ್ರಮಗಳನ್ನು ಜಾರಿ
ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣ
ಮೂರು ಕೋಟಿ ಮಹಿಳೆಯರಿಗೆ ಲಕ್ಪತಿ ದೀದಿ ಗ್ಯಾರಂಟಿ
ದೇಶದ ಘನತೆ, ಜನರ ಜೀವನ ಗುಣಮಟ್ಟ ಸುಧಾರಣೆಗೆ ಒತ್ತು
ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ
ಅಗ್ಗದ ಸಿಲಿಂಡರ್ ತಲುಪಿಸಿದಂತೆ ಪ್ರತಿ ಮನೆಗೆ ಪೈಪ್ ಮೂಲಕ ಗ್ಯಾಸ್ ತಲುಪಿಸುವ ಭರವಸೆ
ದೇಶದ 10 ಕೋಟಿ ರೈತರಿಗೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಂದುವರಿಕೆ
ಆಯುಷ್ಮಾನ್ ಭಾರತ್ ಅಡಿಯಲ್ಲಿ ಜನರು ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ ಮತ್ತು 70 ವರ್ಷ ದಾಟಿದವರೂ ಈ ಯೋಜನೆಗೆ ಸೇರ್ಪಡೆ.
ಪಿಎಂ ಸೂರ್ಯಘರ್ ಸೌರ ವಿದ್ಯುತ್ ಯೋಜನೆ ಮೂಲಕ ಕೋಟ್ಯಂತರ ಭಾರತೀಯರ ಮನೆಗಳ ಉಚಿತ ವಿದ್ಯುತ್, ಹೆಚ್ಚಾಗಿರುವ ವಿದ್ಯುತ್ ಮಾರಾಟ ಮಾಡಿದರೆ ಖರೀದಿ ಭರವಸೆ
ಮುದ್ರಾ ಯೋಜನೆಯಡಿ ಸಾಲದ ಮೊತ್ತವನ್ನು ₹10 ಲಕ್ಷದಿಂದ ₹ 20 ಲಕ್ಷಕ್ಕೆ ಏರಿಕೆ
ಉಚಿತ ರೇಷನ್ ಯೋಜನೆ ಮುಂದಿನ 5 ವರ್ಷಗಳ ಕಾಲವೂ ಜಾರಿ
5G ನೆಟ್ವರ್ಕ್ಗಳ ವಿಸ್ತರಣೆ
ಜನೌಷಧಿ ಕೇಂದ್ರಗಳಲ್ಲಿ ಜನರಿಗೆ ಔಷಧಗಳಲ್ಲಿ ಶೇ 80ರಷ್ಟು ರಿಯಾಯಿತಿ, ಮುಂದಿನ ದಿನಗಳಲ್ಲಿ ಜನೌಷಧಿ ಕೇಂದ್ರಗಳ ಹೆಚ್ಚಳ
ದಕ್ಷಿಣ ಭಾರತ, ಉತ್ತರ ಭಾರತ ಮತ್ತು ಪೂರ್ವ ಭಾಗದಲ್ಲಿ ಶೀಘ್ರ ಬುಲೆಟ್ ರೈಲು ಸಂಚಾರ, ಅಹಮದಾಬಾದ್ – ಮುಂಬೈ ಬುಲೆಟ್ ರೈಲು ಯೋಜನೆ ಕಾಮಗಾರಿ ಪ್ರಗತಿಯಲ್ಲಿ
ಎಐ, ಸೆಮಿಕಂಡಕ್ಟರ್ ಹಾಗೂ ದೇಶದಲ್ಲಿ ಬಾಹ್ಯಾಕಾಶ ವಲಯದ ಪ್ರಗತಿಗೆ ಒತ್ತು
ವಂದೇ ಭಾರತ್ ರೈಲುಗಳನ್ನು ದೇಶದ ಮೂಲೆ ಮೂಲೆಗೆ ವಿಸ್ತರಣೆ
10 ಕೋಟಿ ಮಹಿಳೆಯರಿಗೆ ಉದ್ಯೋಗ, ಉದ್ಯಮ ಕುರಿತು ಕೌಶಲ ತರಬೇತಿ
2036 ರಲ್ಲಿ ಒಲಿಂಪಿಕ್ಸ್ ಆತಿಥ್ಯ
ಪ್ರತಿ ಕ್ಷೇತ್ರದಲ್ಲೂ ಒಬಿಸಿ-ಎಸ್ಸಿ-ಎಸ್ಟಿಗೆ ಗೌರವ
ಜಾಗತಿಕ ಉತ್ಪಾದನಾ ಕೇಂದ್ರ ರಚನೆಗೆ ಸಿದ್ಧತೆ
ಪ್ರಪಂಚದಾದ್ಯಂತ ರಾಮಾಯಣ ಹಬ್ಬ
2025 ಬುಡಕಟ್ಟು ಹೆಮ್ಮೆಯ ವರ್ಷ
ನಿಮ್ಮ ಕಾಮೆಂಟ್ ಬರೆಯಿರಿ