ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಸುರನ್ಕೋಟೆ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಒಂದು ವಾಹನ ಸೇರಿದಂತೆ ಎರಡು ವಾಹನಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಭಾರತೀಯ ವಾಯುಪಡೆಯ ಓರ್ವ ಯೋಧ ಹುತಾತ್ಮರಾಗಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಗೊಂಡಿರುವ ಐವರಲ್ಲಿ ಒಬ್ಬ ಏರ್ ಮನ್ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರೆಲ್ಲರನ್ನೂ ಉಧಮಪುರದ ಕಮಾಂಡ್ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ರಾಷ್ಟ್ರೀಯ ರೈಫಲ್ಸ್ ಘಟಕವು ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ” ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ.
X ನಲ್ಲಿ, ಶಾಸಿತಾರ್ ಬಳಿ ದಾಳಿಗೊಳಗಾದ ತನ್ನ ಬೆಂಗಾವಲು ಪಡೆಗೆ ಭದ್ರತೆ ನೀಡಲಾಗಿದೆ ಎಂದು ಐಎಎಫ್ (IAF) ಹೇಳಿದೆ. “ಭಾರತೀಯ ವಾಯುಪಡೆಯ ವಾಹನದ ಬೆಂಗಾವಲು ವಾಹನದ ಮೇಲೆ ಉಗ್ರಗಾಮಿಗಳು ಪೂಂಚ್ ಜಿಲ್ಲೆಯ ಶಾಸಿತಾರ್ ಬಳಿ ದಾಳಿ ನಡೆಸಿದ್ದಾರೆ. ಸ್ಥಳೀಯ ಸೇನಾ ಘಟಕಗಳಿಂದ ಪ್ರಸ್ತುತ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ. ಬೆಂಗಾವಲು ಪಡೆಗೆ ಭದ್ರತೆ ನೀಡಲಾಗಿದೆ ಮತ್ತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ,” ಅದು ಹೇಳಿದೆ.
ಸಿಬ್ಬಂದಿ ಐಎಎಫ್ ಘಟಕಕ್ಕೆ ತೆರಳುತ್ತಿದ್ದಾಗ ಹೊಂಚುದಾಳಿ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಸೇನೆಯ ಮೇಲೆ ಸರಣಿ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿದ್ದ ಈ ಪ್ರದೇಶದಲ್ಲಿ ಈ ವರ್ಷ ಸಶಸ್ತ್ರ ಪಡೆಗಳ ಮೇಲೆ ನಡೆದ ಮೊದಲ ಪ್ರಮುಖ ದಾಳಿ ಇದಾಗಿದೆ. ದಾಳಿಯ ನಂತರದ ದೃಶ್ಯಗಳು ವಾಹನದ ವಿಂಡ್ಸ್ಕ್ರೀನ್ನಲ್ಲಿ ಕನಿಷ್ಠ ಒಂದು ಡಜನ್ ಬುಲೆಟ್ ರಂಧ್ರಗಳನ್ನು ತೋರಿಸಿದೆ.
ಪೂಂಚ್ ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದ ಭಾಗವಾಗಿದ್ದು, ಮೇ 25 ರಂದು ಆರನೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ