ಪ್ರಜ್ವಲ್‌ ರೇವಣ್ಣ ಪ್ರಕರಣ : ದೇವೇಗೌಡ, ಎಚ್‌ಡಿಕೆಯನ್ನು ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಸಾರ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ

ಬೆಂಗಳೂರು : ಜೆಡಿಎಸ್‌ನಿಂದ ಅಮಾನತುಗೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರ ಆರೋಪಿತ ಲೈಂಗಿಕ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧ ನಕಲಿ ಸುದ್ದಿ, ಚಿತ್ರ ಅಥವಾ ವೀಡಿಯೋ ತಿರುಚಿ ಪ್ರಸಾರ/ ಪ್ರಕಟ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಬೆಂಗಳೂರಿನ ಸತ್ರ ನ್ಯಾಯಾಲಯವು ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.
ಇದರಲ್ಲಿ ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳೂ ಸೇರಿವೆ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್‌ ಡಿ ಕುಮಾರಸ್ವಾಮಿ ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆಯನ್ನು ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಹಾಗೂ ರಜಾಕಾಲೀನ ಪೀಠದ ನ್ಯಾಯಾಧೀಶರಾದ ಎಚ್‌.ಎ. ಮೋಹನ ನಡೆಸಿ ಮುಂದಿನ ವಿಚಾರಣೆಯವರೆಗೆ ಸಾಕ್ಷ್ಯದ ಕೊರತೆಯ ನಡುವೆ ಫಿರ್ಯಾದಿಗಳನ್ನು ಫೋಟೊಗಳನ್ನು ತಿರುಚಿ, ಉದ್ದೇಶಪೂರ್ವಕವಾಗಿ ಅವರ ವರ್ಚಸ್ಸು ಮತ್ತು ಘನತೆಗೆ ಹಾನಿಯಾಗುವಂಥ ಸುಳ್ಳು ಸುದ್ದಿಗಳನ್ನು ಪ್ರಕಟಿಸದಂತೆ ಪ್ರತಿವಾದಿ ಮಾಧ್ಯಮ ಸಂಸ್ಥೆಗಳ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದ್ದಾರೆ.

ಆದಾಗ್ಯೂ, “ಪ್ರತಿವಾದಿ ಮಾಧ್ಯಮಗಳ ಬಳಿ ಪ್ರಬಲವಾದ ಸಾಕ್ಷ್ಯವಿದ್ದರೆ ಅವರಿಗೆ ಸುದ್ದಿ ಪ್ರಸಾರ/ಪ್ರಕಟ ಮಾಡದಂತೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿಲ್ಲ” ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ಮೇ 29ಕ್ಕೆ ವಿಚಾರಣೆ ಮುಂದೂಡಲಾಗಿದ್ದು, ರಜಾಕಾಲೀನ ಅವಧಿ ಮುಗಿದ ಬಳಿಕ ವ್ಯಾಪ್ತಿ ಹೊಂದಿದ ನ್ಯಾಯಾಲಯಕ್ಕೆ ಕಚೇರಿಯು ಎಲ್ಲಾ ದಾಖಲೆಗಳನ್ನು ಕಳುಹಿಸಿಕೊಡಬೇಕು ಎಂದು ಆದೇಶಿಸಿದೆ.
ಪ್ರಜ್ವಲ್‌ ರೇವಣ್ಣ ಅವರ ಆಕ್ಷೇಪಾರ್ಹವಾದ ವೀಡಿಯೊ ಮತ್ತು ದೂರಿನಲ್ಲಿ ತಮ್ಮ ವಿರುದ್ಧ ಯಾವುದೇ ಆರೋಪವಿಲ್ಲ. ಆದರೆ, ತಮ್ಮ ಚಿತ್ರಗಳನ್ನು ತಿರುಚಿ ಪ್ರಕಟಿಸಲಾಗುತ್ತಿದೆ. ತಾವು ಪ್ರಜ್ವಲ್‌ ರೇವಣ್ಣ ಅವರ ಸಂಬಂಧಿಗಳಾಗಿರುವುದರಿಂದ ಅವರ ಜೊತೆಗಿರುವ ಚಿತ್ರಗಳನ್ನು ಮಾಧ್ಯಮಗಳು ಪ್ರಕಟಿಸದಂತೆ ನಿರ್ಬಂಧಿಸಲಾಗದು. ಆದರೆ, ಅನಗತ್ಯವಾಗಿ ತಮ್ಮ ಚಿತ್ರಗಳ ಬಳಕೆ ಮತ್ತು ಉಲ್ಲೇಖ ಮಾಡದಂತೆ ಕೋರಲಾಗಿದೆ.
ಹೀಗಾಗಿ, ಫಿರ್ಯಾದಿಗಳು ನೀಡುವ ಹೇಳಿಕೆ ಹೊರತುಪಡಿಸಿ ಫಿರ್ಯಾದಿಗಳ ವಿರುದ್ಧ ಸೂಕ್ತ ದಾಖಲೆಗಳಿಲ್ಲದೆ ಅವರ ಚಿತ್ರಗಳ ಬಳಕೆ, ವೀಡಿಯೊಗಳ ಬಳಕೆ ಅಥವಾ ಅವುಗಳನ್ನು ತಿರುಚಿ ಪ್ರಕಟಿಸುವುದರಿಂದ ಅವರ ವರ್ಚಸ್ಸಿಗೆ ಹಾನಿಯಾಗುತ್ತದೆ. ಈ ವಿಚಾರಕ್ಕೆ ಒಳಪಟ್ಟು ಮಧ್ಯಂತರ ಆದೇಶ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement