ಪತಿ ಸಾವಿನ ಸುದ್ದಿ ತಿಳಿದ ನಂತರವೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಪತ್ನಿ

ಶಿವಮೊಗ್ಗ: ಪತಿ ನಿಧನರಾದ ಸುದ್ದಿ ತಿಳಿದ ನಂತರವೂ ಮಂಗಳವಾರ ಮತಕೇಂದ್ರಕ್ಕೆ ತೆರಳಿ ಪತ್ನಿ ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ. ಆ ಮೂಲಕ ಪ್ರಜಾಪ್ರಭುತ್ವದ ಬಲಪಡಿಸುವ ಆಶಯದಲ್ಲಿ ಅವರು ಪಾಲ್ಗೊಂಡಿದ್ದಾರೆ.
ತಾಲೂಕಿನ ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯ ಆಡುಗೋಡು ಗ್ರಾಮದ ಕಲಾವತಿ ಎಂಬ ಮಹಿಳೆ ತನ್ನ ಗಂಡನ ಕಳೆದುಕೊಂಡ ದುಃಖದ ನಡುವೆಯೂ ಮತಚಲಾಯಿಸಿದ್ದಾರೆ.
ನಾಲ್ಕೈದು ದಿನಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದ ವೆಂಕಟೇಶ (62) ಎಂಬವರು ನಿಧನರಾದರು. ಮಂಗಳವಾರ ಬೆಳಗ್ಗೆ ಪತಿಯ ನಿಧನದ ಸುದ್ದಿ ತಿಳಿದು ದುಃಖಕ್ಕೊಳಗಾದ ಪತ್ನಿ ಕಲಾವತಿ ಇದರ ನಡುವೆಯೂ ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಿ ಮಂಗಳೂರಿನತ್ತ ಪ್ರಯಾಣಿಸಿದರು ಎಂದು ಹೇಳಲಾಗಿದೆ.
ಅಡಕೆ ಗೊನೆ ಕೀಳುವ ಕೃಷಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವೆಂಕಟೇಶ ಏನೇ ಆದರೂ ಮತ ಚಲಾವಣೆ ಮಾಡಬೇಕು ಎಂದು ಹೇಳುತ್ತಿದ್ದರಂತೆ. ಹೀಗಾಗಿ ಪತಿಯ ಆಶಯದಂತೆ ಪತಿಯ ಸಾವಿನ ದುಃಖದಲ್ಲೂಮತ ಚಲಾಯಿಸಿದ್ದಾಗಿ ತಮ್ಮ ಗ್ರಾಮದವರ ಬಳಿ ಕಲಾವತಿ ಹೇಳಿಕೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement