ಬೆಂಗಳೂರು : ನಟ ರಾಘವೇಂದ್ರ ರಾಜಕುಮಾರ ಪುತ್ರ ಯುವ ರಾಜಕುಮಾರ ತಮ್ಮ ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ನಟ ರಾಘವೇಂದ್ರ ರಾಜಕುಮಾರ ಅವರ ಪುತ್ರರಾಗಿರುವ ಯುವರಾಜಕುಮಾರ ಮತ್ತು ಶ್ರೀದೇವಿ ಪ್ರೀತಿಸಿ 2019ರ ಮೇ 25ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು. ಈಗ ಐದು ವರ್ಷದ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಕೋರಿ ಅವರು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ವಿಚ್ಛೇದನ ಪಡೆಯುವ ವಿಚಾರವಾಗಿ ಪತ್ನಿಗೆ ಯುವ ರಾಜಕುಮಾರ ಅವರು ಲೀಗಲ್ ನೋಟಿಸ್ ನೀಡಿದ್ದರು. ಅದಕ್ಕೆ ಶ್ರೀದೇವಿ ಉತ್ತರ ನೀಡಿದ್ದರು.
ಈಗ ವಿವಾಹ ರದ್ದತಿ ಕೋರಿ ಹಿಂದೂ ವಿವಾಹ ಕಾಯಿದೆ ಸೆಕ್ಷನ್ 13(1)(ಐಎ) ಅಡಿಯಲ್ಲಿ ಯುವ ರಾಜಕುಮಾರ ಅವರು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ 2024ರ ಜೂನ್ 6ರಂದು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಬೆಂಗಳೂರಿನ 1ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಶ್ರೀದೇವಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಶ್ರೀದೇವಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ