ದರ್ಶನ್ ಪ್ರಕರಣ : ತೀವ್ರ ಆಘಾತ-ರಕ್ತಸ್ರಾವದಿಂದ ರೇಣುಕಾಸ್ವಾಮಿ ಸಾವು ಎಂದ ಮರಣೋತ್ತರ ಪರೀಕ್ಷೆ ವರದಿ

ಬೆಂಗಳೂರು: ನಟ ದರ್ಶನ್‌ ಹಾಗೂ ಗ್ಯಾಂಗ್‌ ಮಾಡಿದ್ದಾರೆ ಎಂದು ಆರೋಪಿಸಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರೇಣುಕಾಸ್ವಾಮಿ ಆಘಾತ, ಚಿತ್ರಹಿಂಸೆ ಮತ್ತು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ವರದಿ ತಿಳಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಶವಪರೀಕ್ಷೆಯಲ್ಲಿ ರೇಣುಕಾ ಸ್ವಾಮಿ ಅವರ ದೇಹದ ಮೇಲೆ 15 ಗಾಯಗಳು ಕಂಡುಬಂದಿವೆ. ರೇಣುಕಾಸ್ವಾಮಿ ಅವರನ್ನು ನಟ ದರ್ಶನ್‌ ತಂಡದವರು ಹೊಡೆದು ಸಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ದರ್ಶನ್‌ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ, ಫೋಟೊಗಳನ್ನು ಕಳುಹಿಸುತ್ತಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡಿ ಬೆಂಗಳೂರಿಗೆ ತಂದು ಶೆಡ್‌ ವೊಂದರಲ್ಲಿ ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ.

ಮೃತ ರೇಣುಕಾಸ್ವಾಮಿ ಅವರ ದೇಹದ ತಲೆ, ಹೊಟ್ಟೆ, ಎದೆ ಮತ್ತು ಇತರ ಭಾಗಗಳಲ್ಲಿ ಗಾಯಗಳು ಮತ್ತು ಗುರುತುಗಳಿವೆ. ಶವಪರೀಕ್ಷೆ ವರದಿಯಲ್ಲಿ ಆತನ ತಲೆಯನ್ನು ಬೆಂಗಳೂರಿನ ಶೆಡ್‌ನಲ್ಲಿ ನಿಂತಿದ್ದ ಮಿನಿ ಟ್ರಕ್‌ಗೆ ಗುದ್ದಿಸಲಾಗಿದೆ ಎಂದು ಸೂಚಿಸಲಾಗಿದೆ. ಈಗ ಈ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ನೀಡಲು ಬಳಸಿದ ದೊಣ್ಣೆಗಳು, ಚರ್ಮದ ಬೆಲ್ಟ್ ಮತ್ತು ಹಗ್ಗವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಮಧ್ಯೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ದಿದ್ದ ಚಾಲಕ ರವಿ ಎಂಬಾತ ಪೊಲೀಸರ ಮುಂದೆ ಶರಣಾಗಿದ್ದಾನೆ. ಮತ್ತೊಬ್ಬ ಆರೋಪಿ ರಘು ಅಲಿಯಾಸ್ ರಾಘವೇಂದ್ರ ಇತರರೊಂದಿಗೆ ಸೇರಿ ರವಿಯ ಟ್ಯಾಕ್ಸಿ ವ್ಯವಸ್ಥೆ ಮಾಡಿ ಚಿತ್ರದುರ್ಗ ನಗರದಿಂದ ಕಳುಹಿಸಿದ್ದ ಎಂದು ಆರೋಪಿಸಲಾಗಿದೆ.
ರಘು ಚಿತ್ರದುರ್ಗದಲ್ಲಿ ದರ್ಶನ ಅಭಿಮಾನಿಗಳ ಸಂಘ ನಡೆಸುತ್ತಿದ್ದರು. ರೇಣುಕಾಸ್ವಾಮಿ ಬಗ್ಗೆ ಮಾಹಿತಿ ಸಂಗ್ರಹಿಸಲು ದರ್ಶನ್‌ ಈತನನ್ನು ನೇಮಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರೇಣುಕಾ ಸ್ವಾಮಿ ಅವರನ್ನು ತಮ್ಮ ಮನೆಯ ಸಮೀಪದಿಂದ ಕಿಡ್ನಾಪ್ ಮಾಡಲಾಗಿದೆ ಎಂದು ಪತ್ನಿ ರೇಣುಕಾ ಸ್ವಾಮಿ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement