ಉತ್ತರ ಪ್ರದೇಶದ ಸತ್ಸಂಗದಲ್ಲಿ ಕಾಲ್ತುಳಿತ: ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಲಕ್ನೋ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಮಂಗಳವಾರ ನಡೆದ ‘ಸತ್ಸಂಗ’ (ಧಾರ್ಮಿಕ ಕಾರ್ಯಕ್ರಮ)ದಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮೃತಪಟ್ಟವರ ಸಂಖ್ಯೆ 116ಕ್ಕೆ ಏರಿದೆ. ರಾಜ್ಯ ಸರ್ಕಾರ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ ಮತ್ತು ಮೂವರು ಸಚಿವರನ್ನು ಪರಿಹಾರ ಕಾರ್ಯಗಳ ಮೇಲ್ವಿಚಾರಣೆಗಾಗಿ ಸ್ಥಳಕ್ಕೆ ಕಳುಹಿಸಿದೆ.
ಈವರೆಗೆ 116 ಮಂದಿ ಸಾವಿಗೀಡಾಗಿದ್ದಾರೆ ಎಂದು ಇನ್ಸ್‌ಪೆಕ್ಟರ್ ಜನರಲ್ (ಅಲಿಗಢ) ಶಲಭ ಮಾಥುರ್ ಖಚಿತಪಡಿಸಿದ್ದಾರೆ. “ಕಾರ್ಯಕ್ರಮದಲ್ಲಿ ಅನುಮತಿಸಿದ್ದಕ್ಕಿಂತ ಹೆಚ್ಚು ಜನಸಂದಣಿ ಇದ್ದ ಕಾರಣ ಸತ್ಸಂಗದ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ. ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ” ಎಂದು ಅವರು ಹೇಳಿದರು.
ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜಕುಮಾರ ಸಿಂಗ್ ಅವರು, ಮೃತಪಟ್ಟವರಲ್ಲಿ 116 ಜನರಲ್ಲಿ 108 ಮಹಿಳೆಯರು, ಏಳು ಮಕ್ಕಳು ಸೇರಿದ್ದಾರೆ. ಈ ಪೈಕಿ ಇದುವರೆಗೆ 72 ಜನರನ್ನು ಗುರುತಿಸಲಾಗಿದೆ. ರಾಜ್ಯ ಸರ್ಕಾರದಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಕೂಡ ಅಷ್ಟೇ ಮೊತ್ತವನ್ನು ನೀಡಲಿದೆ ಎಂದು ತಿಳಿಸಿದರು.

ವಿಶ್ವ ಹರಿ ಸಾಕರ್‌ ಅಥವಾ ಭೋಲೆ ಬಾಬಾ ಎಂದು ಕರೆಯಲ್ಪಡುವ ಸ್ವಯಂ-ಘೋಷಿತ ದೇವಮಾನವ ನಾರಾಯಣ ಸಾಕರ್ ಹರಿಗಾಗಿ ಮಾನವ ಮಂಗಲ ಮಿಲನ ಸದ್ಭಾವನಾ ಸಮಾಗಮ ಸಮಿತಿಯು ಸತ್ಸಂಗವನ್ನು ಆಯೋಜಿಸಿತ್ತು. ಕಾಲ್ತುಳಿತ ಘಟನೆಯ ನಂತರ ನಾಪತ್ತೆಯಾದ ಭೋಲೆ ಬಾಬಾಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಇದು ಇತ್ತೀಚಿನ ವರ್ಷಗಳಲ್ಲಿ ಅಂತಹ ದೊಡ್ಡ ದುರಂತಗಳಲ್ಲಿ ಒಂದಾಗಿದೆ. ಗಾಯಾಳುಗಳನ್ನು ಜಿಲ್ಲೆಯ ಸಿಕಂದರ ರಾವ್ ಟ್ರಾಮಾ ಸೆಂಟರ್ ಮತ್ತು ಇಟಾಹ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳದ ವೀಡಿಯೊಗಳು ಮೃತಪಟ್ಟ ಅಥವಾ ಪ್ರಜ್ಞಾಹೀನರನ್ನು ಆಂಬ್ಯುಲೆನ್ಸ್‌ಗಳು, ಟ್ರಕ್‌ಗಳು ಮತ್ತು ಕಾರುಗಳಲ್ಲಿ ಸಿಕಂದರ ರಾವ್ ಟ್ರಾಮಾ ಸೆಂಟರ್‌ಗೆ ಕರೆತರುತ್ತಿರುವುದನ್ನು ತೋರಿಸಿದೆ.
ಸಿಕಂದರ ರಾವ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರವೇಂದ್ರಕುಮಾರ ಪ್ರಕಾರ, ಕಾರ್ಯಕ್ರಮದ ಕೊನೆಯಲ್ಲಿ ‘ಸತ್ಸಂಗ’ ನಡೆಸಿದ ಭೋಲೆ ಬಾಬಾರ ದರ್ಶನ ಪಡೆಯಲು ಭಕ್ತರು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ. ಅಲ್ಲಿದ್ದ ಜನರು ಬಾಬಾನ ಪಾದದ ಸುತ್ತಲಿನ ಸ್ವಲ್ಪ ಮಣ್ಣನ್ನು ಸಂಗ್ರಹಿಸಲು ಬಯಸಿದ್ದರು ಎಂದು ಅವರು ತಿಳಿಸಿದರು.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

ಈ ಕುರಿತು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, “ಈ ಘಟನೆ ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ… ಸ್ಥಳೀಯ ಸಂಘಟಕರು ‘ಭೋಲೆ ಬಾಬಾ’ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದ ನಂತರ, ಸತ್ಸಂಗದ ಪ್ರಚಾರಕರು ಬರುತ್ತಿದ್ದಾಗ ವೇದಿಕೆಯಲ್ಲಿ, ಇದ್ದಕ್ಕಿದ್ದಂತೆ ಭಕ್ತರ ಗುಂಪೊಂದು ಅವರನ್ನು ಸ್ಪರ್ಶಿಸಲು ಅವರ ಕಡೆಗೆ ಹೋಗಲಾರಂಭಿಸಿತು ಮತ್ತು ಅಲ್ಲಿದ್ದ ‘ಕಾರ್ಯಕರ್ತರು’ ಅವರನ್ನು ತಡೆದಾಗ ಕಾಲ್ತುಳಿತ ಸಂಭವಿಸಿತು.
ಈ ಸಂಪೂರ್ಣ ಪ್ರಕರಣದ ತನಿಖೆಗಾಗಿ, ನಾವು ಆಗ್ರಾ ಹೆಚ್ಚುವರಿ ಡಿಜಿ ಅವರ ಅಧ್ಯಕ್ಷತೆಯಲ್ಲಿ ತಂಡವನ್ನು ರಚಿಸಿದ್ದೇವೆ ಮತ್ತು ವಿವರವಾದ ವರದಿಯನ್ನು ನೀಡುವಂತೆ ಸೂಚಿದ್ದೇವೆ. ಘಟನೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅಲ್ಲಿ ಮೊಕ್ಕಾಂ ಹೂಡಿದ್ದಾರೆ. ಮೂವರು ಸಚಿವರಾದ ಚೌಧರಿ ಲಕ್ಷ್ಮಿ ನಾರಾಯಣ್, ಸಂದೀಪ ಸಿಂಗ್, ಅಸಿಮ್ ಅರುಣ ಸ್ಥಳದಲ್ಲಿದ್ದಾರೆ ಎಂದು ಅವರು ಹೇಳಿದರು.
ಈ ಭಯಾನಕ ಘಟನೆಯನ್ನು ನೆನಪಿಸಿಕೊಂಡ ಪ್ರತ್ಯಕ್ಷದರ್ಶಿಯೊಬ್ಬರು, “ನಾವು ಸತ್ಸಂಗಕ್ಕೆ ಬಂದಿದ್ದೆವು, ಅಲ್ಲಿ ದೊಡ್ಡ ಜನಸಂದಣಿ ಇತ್ತು, ಸತ್ಸಂಗ ಮುಗಿದ ನಂತರ ನಾವು ಹೊರಡಲು ಪ್ರಾರಂಭಿಸಿದೆವು, ನಿರ್ಗಮನವು ಕಿರಿದಾಗಿತ್ತು, ನಾವು ಮೈದಾನದ ಕಡೆಗೆ ಹೊರಡಲು ಪ್ರಯತ್ನಿಸಿದಾಗ, ಇದ್ದಕ್ಕಿದ್ದಂತೆ, ನೂಕು ನುಗ್ಗಲು ಪ್ರಾರಂಭವಾಯಿತು ಎಂದು ಹೇಳಿದರು. ಸತ್ಸಂಗ ಮುಗಿದ ನಂತರ ಎಲ್ಲರೂ ಹೊರಗೆ ಬಂದರು. ಹೊರಗೆ ಎತ್ತರದಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಕೆಳಗೆ ಚರಂಡಿ ನಿರ್ಮಿಸಲಾಗಿದೆ. ಒಬ್ಬರ ಹಿಂದೆ ಒಬ್ಬರು ಅದರಲ್ಲಿ ಬೀಳತೊಡಗಿದರು. ಕೆಲವರು ನಜ್ಜುಗುಜ್ಜಾದರು ಎಂದು ಇನ್ನೊಬ್ಬ ಪ್ರತ್ಯಕ್ಷದರ್ಶಿ ಹೇಳಿದರು.

ಪ್ರಮುಖ ಸುದ್ದಿ :-   ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement