ಮಾಸ್ಕೊ: ಬಾಂಬ್, ಗನ್ ಮತ್ತು ಬುಲೆಟ್ಗಳ ನಡುವೆ ಶಾಂತಿ ಮಾತುಕತೆ ಸಫಲವಾಗುವುದಿಲ್ಲ. ಯುದ್ಧ ಭೂಮಿಯಲ್ಲಿ ಯಾವುದೇ ಸಂಘರ್ಷಕ್ಕೆ ಪರಿಹಾರ ದೊರಕುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದ ಕುರಿತಂತೆ ಉಭಯ ನಾಯಕರು ಮಂಗಳವಾರ ಮಾತುಕತೆ ನಡೆಸಿದ್ದಾರೆ.
‘ಮಾನವೀಯತೆ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರಿಗೂ ಜೀವಗಳ ಹಾನಿಯಾದಾಗ ನೋವಾಗುತ್ತದೆ. ಅದನ್ನೂ ಮಿರಿ, ಮುಗ್ಧ ಮಕ್ಕಳ ಹತ್ಯೆಯಾದಾಗ, ಅದು ಅತ್ಯಂತ ಹೃದಯ ವಿದ್ರಾವಕ ಮತ್ತು ಅತ್ಯಂತ ನೋವಿನ ಸಂಗತಿ’ ಎಂದು ಹೇಳಿರುವ ಮೋದಿ, ನವ ಪೀಳಿಗೆಗೆ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಶಾಂತಿ ಅತ್ಯಗತ್ಯ. ಬಾಂಬ್, ಗನ್ ಮತ್ತು ಬುಲೆಟ್ಗಳ ನಡುವೆ ಶಾಂತಿ ಮಾತುಕತೆ ಸಫಲವಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಪುತಿನ್ ಜೊತೆಗಿನ ಅನೌಪಚಾರಿಕ ಸಭೆ ಬಗ್ಗೆ ಉಲ್ಲೇಖಿಸಿದ ಮೋದಿ, ಅವರ ಮಾತು ಭರವಸೆ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ದೂರದರ್ಶನದಲ್ಲಿ ಪ್ರಸಾರವಾದ ಹೇಳಿಕೆಯಲ್ಲಿ ಪುತಿನ್ ಜೊತೆಗಿನ ಮಾತುಕತೆ ಬಗ್ಗೆ ಮೋದಿ ಹೇಳಿದ್ದಾರೆ. ಭಾರತವು ಶಾಂತಿ ಪರವಾಗಿದೆ. ಉಕ್ರೇನ್ ಜೊತೆಗಿನ ಸಂಘರ್ಷ ಅಂತ್ಯಗೊಳಿಸುವ ಪರವಾಗಿ ಭಾರತ ಇದೆ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.
ಭಾರತ-ರಷ್ಯಾ ಬಾಂಧವ್ಯ ಮತ್ತಷ್ಟು ಬಲಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ತಮ್ಮ ಮೂರನೇ ಅವಧಿಯ ಮೊದಲ ದ್ವಿಪಕ್ಷೀಯ ಭೇಟಿಯಲ್ಲಿ, ಇಂಧನ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಸಹಕಾರವು ಜಗತ್ತಿಗೆ ಸಹಾಯ ಮಾಡಿದೆ ಎಂದು ಹೇಳಿದರು.
“ನಿಮ್ಮ ಸಹಕಾರದಿಂದಾಗಿ ನಾವು ಭಾರತದಲ್ಲಿನ ಸಾಮಾನ್ಯ ನಾಗರಿಕರನ್ನು ಇಂಧನ ಲಭ್ಯತೆಯ ತೊಂದರೆಗಳಿಂದ ರಕ್ಷಿಸಬಹುದು. ಅಷ್ಟೇ ಅಲ್ಲ, ಭಾರತ-ರಷ್ಯಾ ಇಂಧನ ಒಪ್ಪಂದವು ಪರೋಕ್ಷವಾಗಿ ಜಾಗತಿಕ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಸಹಾಯ ಮಾಡಿದೆ ಎಂಬುದನ್ನು ಜಗತ್ತು ಒಪ್ಪಿಕೊಳ್ಳಬೇಕು” ಎಂದು ಅವರು ಪುತಿನ್ ಅವರಿಗೆ ಹೇಳಿದರು.
ದೇಶವು ಸುಮಾರು 40 ವರ್ಷಗಳಿಂದ ಭಯೋತ್ಪಾದನೆಯ ಸವಾಲನ್ನು ಎದುರಿಸುತ್ತಿದೆ ಎಂದು ಹೇಳಿದರು. “ನಾನು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಖಂಡಿಸುತ್ತೇನೆ” ಎಂದು ಅವರು ಹೇಳಿದರು.ಕಳೆದ ಐದು ವರ್ಷಗಳಲ್ಲಿ ಜಗತ್ತು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು, ಮೊದಲು ಕೋವಿಡ್ -19 ಮತ್ತು ನಂತರ ವಿವಿಧ ಸಂಘರ್ಷಗಳಿಂದಾಗಿ, “ಜಗತ್ತು ಆಹಾರ, ಇಂಧನ ಮತ್ತು ರಸಗೊಬ್ಬರಗಳ ಕೊರತೆಯನ್ನು ಎದುರಿಸಿದಾಗ ನಾವು ಅದನ್ನು ಎದುರಿಸಿದ್ದೇವೆ. ನಮ್ಮ ರೈತರು ಸಮಸ್ಯೆಗಳನ್ನು ಎದುರಿಸಲು ಬಿಡುವುದಿಲ್ಲ ಮತ್ತು ಇದನ್ನು ಬಗೆಹರಿಸಲು ರಷ್ಯಾ ಜೊತೆಗಿನ ನಮ್ಮ ಸ್ನೇಹ ಪ್ರಮುಖ ಪಾತ್ರ ವಹಿಸಿತು ಎಂದು ಮೋದಿ ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ