ವಾಲ್ಮೀಕಿ ನಿಗಮ ಹಗರಣ: ಇ.ಡಿ. ಅಧಿಕಾರಿಗಳ ವಿರುದ್ಧದ ಎಫ್​ಐಆರ್​ ಗೆ ಹೈಕೋರ್ಟ್ ತಡೆ

ಬೆಂಗಳೂರು : ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ವಿಚಾರಣೆಯ ನೆಪದಲ್ಲಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಗಳಾಗಿರುವ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ಮಂಗಳವಾರ ತಡೆ ನೀಡಿದೆ.
ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಮನೋಜ ಮಿತ್ತಲ್‌ ಮತ್ತು ಸಹಾಯಕ ನಿರ್ದೇಶಕ ಮುರಳಿ ಕಣ್ಣನ್‌ ವಿರುದ್ಧದ ತನಿಖೆ ನಡೆಸುವುದಕ್ಕೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಡೆ ನೀಡಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧದ ತನಿಖೆಗೆ ತಡೆ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ವೇಳೆಗೆ ತನಿಖೆಗೆ ಸಂಬಂಧಿಸಿದ ಸಂಪೂರ್ಣ ದಾಖಲೆಯನ್ನು ಜಾರಿ ನಿರ್ದೇಶನಾಲಯ ಸಲ್ಲಿಸಬೇಕು. ರಾಜ್ಯ ಸರ್ಕಾರವು ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಆಗಸ್ಟ್‌ 21ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
ವರದಿ ಪ್ರಕಾರ, ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ ಕಾಮತ್‌ ಅವರು “ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಬಿ ಕಲ್ಲೇಶ ಮನೆಯಲ್ಲಿ ಜುಲೈ 18ರಂದು ಶೋಧ ನಡೆಸಿದಾಗ ಆರೋಪಕ್ಕೆ ಗುರಿಪಡಿಸುವಂತಹ ದಾಖಲೆಗಳು ಸಿಕ್ಕಿವೆ. ಇದರಲ್ಲಿ ಮೇಲಸ್ತರದಲ್ಲಿ ಇರುವವರು ಭಾಗಿಯಾಗಿರುವ ಸಾಧ್ಯತೆ ಇದೆ. ಜುಲೈ 16ರಂದು ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು” ಎಂದು ನ್ಯಾಯಾಲಯಕ್ಕೆ ತಿಳಿಸಿದರು.
“ನೀವು ನಮ್ಮ ವಿರುದ್ಧ ತನಿಖೆ ಮುಂದಾದರೆ ನಾವು ನಿಮ್ಮನ್ನು ಕ್ರಿಮಿನಲ್‌ ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ರಾಜ್ಯ ಸರ್ಕಾರ ಇ.ಡಿ. ಅಧಿಕಾರಿಗಳಿಗೆ ಹೇಳುತ್ತಿದೆ. ರಾಜ್ಯ ಸರ್ಕಾರದ ನಡೆ ಹೀಗೆ ಇರಬಹುದೇ? ನಮ್ಮಲ್ಲಿ ಪ್ರಮುಖ ಸಾಕ್ಷ್ಯಗಳಿವೆ. ದೂರುದಾರ ಕಲ್ಲೇಶ ಇ ಡಿ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಆದರೆ, ದೂರು ದಾಖಲಿಸುವಾಗ ಶಾಂತಿ ಭಂಗದ ಅಡಿ ಪ್ರಕರಣ ದಾಖಲಿಸಲಾಗಿದೆ. ಇಲ್ಲಿ ತಪ್ಪಾಗಿ ಸೆಕ್ಷನ್‌ ಅನ್ವಯಿಸಲಾಗಿದೆ. ದೂರುದಾರ ಕಲ್ಲೇಶ ಸುಶಿಕ್ಷಿತರಾಗಿದ್ದು ಮತ್ತು ಉನ್ನತ ಸ್ಥಾನದಲ್ಲಿದ್ದಾರೆ. ಅವರು ಆರು ದಿನಗಳ ಬಳಿಕ ಪ್ರಕರಣ ದಾಖಲಿಸಿದ್ದಾರೆ. ಬೆದರಿಕೆ ಹಾಕಿದ್ದರೆ ಅಂದು ಸಂಜೆಯೇ ವಿಲ್ಸನ್‌ ಗಾರ್ಡನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದಿತ್ತು. ಇದು ತನಿಖೆ ಹಾದಿ ತಪ್ಪಿಸಲು ರೂಪಿಸಿರುವ ದುಷ್ಟ ತಂತ್ರ” ಎಂದು ಆಪಾದಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಮೂವರು ಸಾವು

ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ ಅವರು “ಕಲ್ಲೇಶ ಅವರು ಜುಲೈ 18ರಂದು ದೂರು ದಾಖಲಿಸಿದ್ದಾರೆ. ಮ್ಯಾಜಿಸ್ಟ್ರೇಟ್‌ ಅನುಮತಿಸಲು ತಡವಾಗಿರುವುದರಿಂದ ದೂರು ದಾಖಲಿಸುವುದು ವಿಳಂಬವಾಗಿದೆ. ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಹೆಚ್ಚು ಕಡಿಮೆ ಪೂರ್ಣಗೊಳಿಸಿದೆ. ಈಗ ಸಿಬಿಐ ಬಂದಿದೆ. ಸಿಬಿಐ ತನಿಖೆ ಆರಂಭಿಸುವುದಕ್ಕೆ ಮೊದಲೇ ಇ.ಡಿ. ಬಂದಿದೆ. ಮುಖ್ಯಮಂತ್ರಿ ಹೆಸರು ಉಲ್ಲೇಖಿಸದೆ ಇದ್ದರೆ ನಾವು ನಿಮ್ಮನ್ನು ಬಿಡುವುದಿಲ್ಲ ಎಂದು ಇ ಡಿ ಅಧಿಕಾರಿಗಳು ಕಲ್ಲೇಶ ಅವರನ್ನು ಬೆದರಿಸಿದ್ದಾರೆ. ಕಲ್ಲೇಶ ವಿಚಾರಣೆಯ ಸಿಸಿಟಿವಿ ದಾಖಲೆಯನ್ನು ಇ.ಡಿ. ನ್ಯಾಯಾಲಯಕ್ಕೆ ಸಲ್ಲಿಸಲಿ. ಆದರೆ ತನಿಖೆಗೆ ತಡೆ ನೀಡಬಾರದು” ಎಂದು ವಾದಿಸಿದರು. ಇ ಡಿ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಪತ್ತೆ ಮಾಡಬೇಕಿದೆ. ಇದು ಸಂಜ್ಞೇಯರಹಿತ ಅಪರಾಧವಾಗಿದ್ದು, ಅವರನ್ನು ಬಂಧಿಸುವುದಿಲ್ಲ. ಆದರೆ, ತನಿಖೆ ನಡೆಯಲಿ. ತನಿಖಾಧಿಕಾರಿ ವಿಚಾರಣೆಯ ಸಂದರ್ಭದಲ್ಲಿ ಏನಾದರೂ ಮಾಡಬಹುದೇ? ಸಾರ್ವಜನಿಕರು ದೂರು ದಾಖಲಿಸುವ ಹಾಗೆ ಇಲ್ಲವೇ? ಪ್ರಕರಣ ದಾಖಲಾಗಲಿ, ಬಿಡಲಿ ತನಿಖಾಧಿಕಾರಿ ಸಾಕ್ಷಿಗೆ ಬೆದರಿಕೆ ಹಾಕುವಂತಿಲ್ಲ ಎಂದರು.

ಆಗ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಎಜಿ ಕುರಿತು “ಇ ಡಿ ಗೆ ತನಿಖೆ ನಡೆಸಲು ಸಿಬಿಐ ಅಥವಾ ಬೇರಾವುದೇ ಅನುಮತಿ ಬೇಕಿಲ್ಲ. ತನಿಖೆ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಪ್ರತಿಯೊಬ್ಬ ಅಧಿಕಾರಿಯು ತನ್ನ ಕರ್ತವ್ಯ ನಿಭಾಯಿಸಿದ್ದಾನೆಯೇ ಇಲ್ಲವೇ ಎಂದು ನೋಡುತ್ತಾ ಹೋದರೆ ಯಾರೂ ಸುರಕ್ಷಿತವಾಗಿ ಉಳಿಯುವುದಿಲ್ಲ. ವಿಚಾರಣೆಯಲ್ಲಿ ಭಾಗಿಯಾದ ಯಾವುದೇ ವ್ಯಕ್ತಿ ತನಗೆ ಬೆದರಿಕೆ ಹಾಕಲಾಗಿದೆ ಎಂದೇ ಹೇಳುತ್ತಾರೆ. ಇ ಡಿ ಅಧಿಕಾರಿಗಳು ವಿಚಾರಣೆಯ ಸಿಸಿಟಿವಿ ದಾಖಲೆ ಸಲ್ಲಿಸುವುದನ್ನು ನ್ಯಾಯಾಲಯ ಪರಿಶೀಲಿಸಲಿದೆ. ಪ್ರಕರಣ ದಾಖಲಿಸಿದ ಬಳಿಕ ಅಧಿಕಾರಿ ಕಲ್ಲೇಶ ಅವರನ್ನು ಇ ಡಿ ಅಧಿಕಾರಿಗಳು ಕಾಫಿ ಕುಡಿಯಲು ಕರೆದಿರಲಿಲ್ಲ. ಮುಖ್ಯಮಂತ್ರಿ ಹೆಸರು ಹೇಳದಿದ್ದರೆ ನಿಮ್ಮನ್ನು ಸಿಲುಕಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂಬುದು ಹೊಸ ಪರಿಕಲ್ಪನೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ವಾಯುಭಾರ ಕುಸಿತ : ಕರ್ನಾಟಕದಲ್ಲಿ ಮೇ 24ರ ವರೆಗೆ ಭಾರಿ ಮಳೆ ಮುನ್ನೆಚ್ಚರಿಕೆ ; 15 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ನಾಳೆ ಪ್ರತಿಯೊಬ್ಬರು ತನಗೆ ತನಿಖಾಧಿಕಾರಿ ಬೆದರಿಕೆ ಹಾಕಿದ್ದಾರೆ ಎಂದು ಏನು ಮಾಡುವುದು. ಈ ತರದ ಅನ್ವೇಷಿತ, ಸಿನಿಮಾ ಐಡಿಯಾಗಳಿಗೆ ಅನುಮತಿ ನೀಡಲಾಗದು. ಇ ಡಿ ಅಧಿಕಾರಿಗಳ ವಿರುದ್ಧ ಸರ್ಕಾರ ಏಕೆ ದೂರು ದಾಖಲಿಸುತ್ತಿದೆ? ತನಿಖೆ ನಡೆಸುವ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವುದು ಸರಿಯಲ್ಲ. ನಿಮಗೆ ಆಕ್ಷೇಪವಿದ್ದರೆ ಇಡೀ ಪ್ರಕ್ರಿಯೆ ಪ್ರಶ್ನಿಸಬಹುದಲ್ಲ ಎಂದರು. ಅಡ್ವೊಕೇಟ್‌ ಜನರಲ್‌ ಶಶಿಕಿರಣ ಶೆಟ್ಟಿ ಅವರ ವಾದಕ್ಕೆ ನ್ಯಾಯಮೂರ್ತಿ ನಾಗಪ್ರಸನ್ನ ಸಮ್ಮತಿಸಲಿಲ್ಲ. ಇಷ್ಟೆಲ್ಲ ಇದ್ದರೆ ಬಾಧಿತರು ಪ್ರತ್ಯೇಕವಾಗಿ ಇ.ಡಿ. ಪ್ರಕ್ರಿಯೆಯನ್ನು ಪ್ರಶ್ನಿಸಬಹುದು ಎಂದು ಇ.ಡಿ. ಅಧಿಕಾರಿಗಳ ವಿರುದ್ಧದ ತನಿಖೆಗೆ ತಡೆ ನೀಡಿದರು.

ಪ್ರಕರಣದ ಹಿನ್ನೆಲೆ: ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕಲ್ಲೇಶ್‌ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ವಿಚಾರಣೆಗಾಗಿ ಸಮನ್ಸ್‌ ಜಾರಿ ಮಾಡಿದ್ದ ಇ ಡಿ ಅಧಿಕಾರಿಗಳು ಪ್ರಕರಣದಲ್ಲಿ ಸಿಲುಕಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖ ಹೆಸರು ಹೇಳುವಂತೆ ಬೆದರಿಕೆ ಹಾಗೂ ಒತ್ತಡ ಹಾಕಿದ್ದಾರೆ ಎಂದು ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ಠಾಣೆಗೆ ಇ.ಡಿ.ಅಧಿಕಾರಿಗಳಾದ ಮನೋಜ ಮಿತ್ತಲ್‌ ಮತ್ತು ಮುರಳಿ ಕಣ್ಣನ್‌ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇ ಡಿ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 3(5), 351(2) ಮತ್ತು 352 ಅಡಿ ಪ್ರಕರಣ ದಾಖಲಿಸಲಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement