ಚಂಡೀಗಢ: ಸರ್ಕಾರದ ಸುತ್ತೋಲೆಯ ಪ್ರಕಾರ ಭಾರತದ ಸ್ವಾತಂತ್ರ್ಯ ದಿನವಾದ ಈ ಆಗಸ್ಟ್ 15ರಿಂದ ಹರಿಯಾಣದ ಎಲ್ಲ ಶಾಲೆಗಳಲ್ಲಿ ‘ಗುಡ್ ಮಾರ್ನಿಂಗ್ (Good morning) ಬದಲಿಗೆ ‘ಜೈ ಹಿಂದ್’ ಎಂದು ಹೇಳಲು ನಿರ್ಧರಿಸಲಾಗಿದೆ.
ಹರಿಯಾಣ ಸರ್ಕಾರವು ಆರಂಭಿಸಿರುವ ಈ ಕ್ರಮವು ವಿದ್ಯಾರ್ಥಿಗಳಲ್ಲಿ ಬಲವಾದ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಮೂಡಿಸುವ ಗುರಿಯನ್ನು ಹೊಂದಿದೆ ಎಂದು ಶಾಲಾ ಶಿಕ್ಷಣ ನಿರ್ದೇಶನಾಲಯ ಗುರುವಾರ (ಆಗಸ್ಟ್ 8) ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.
‘ಜೈ ಹಿಂದ್’ ಅನ್ನು ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನೇತಾಜಿ ಸುಭಾಸಚಂದ್ರ ಬೋಸ್ ಅವರು ಚಾಲ್ತಿಗೆ ತಂದರು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಸಶಸ್ತ್ರ ಪಡೆಗಳಲ್ಲಿ ಜೈ ಹಿಂದ್ ಅನ್ನು ಸೆಲ್ಯೂಟ್ ಆಗಿ ಅಳವಡಿಸಿಕೊಳ್ಳಲಾಯಿತು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಶಾಲಾ ಶಿಕ್ಷಣ ನಿರ್ದೇಶನಾಲಯವು ಎಲ್ಲ ಜಿಲ್ಲಾ ಶಿಕ್ಷಣಾಧಿಕಾರಿಗಳು, ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿಗಳು, ಜಿಲ್ಲಾ ಬ್ಲಾಕ್ ಶಿಕ್ಷಣಾಧಿಕಾರಿಗಳು, ಬ್ಲಾಕ್ ಪ್ರಾಥಮಿಕ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು ಮತ್ತು ಮುಖ್ಯಾಧ್ಯಾಪಕರಿಗೆ ಸುತ್ತೋಲೆ ಕಳುಹಿಸಿದೆ.
ಸುತ್ತೋಲೆಯ ಪ್ರಕಾರ, ‘ಜೈ ಹಿಂದ್’ ಇನ್ಮುಂದೆ ಶಾಲೆಗಳಲ್ಲಿ ‘ಗುಡ್ ಮಾರ್ನಿಂಗ್’ ಬದಲಿಗೆ ಬಳಸಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ರಾಷ್ಟ್ರೀಯ ಏಕತೆ ಮತ್ತು ದೇಶದ ಶ್ರೀಮಂತ ಇತಿಹಾಸದ ಬಗ್ಗೆ ಗೌರವ, ಹಾಗೂ ಇದರಿಂದ ಪ್ರತಿದಿನ ಸ್ಫೂರ್ತಿ ಪಡೆಯಬಹುದು. ದೇಶಭಕ್ತಿಯ ಭಾವನೆ ಪ್ರೇರೇಪಿಸುವ ‘ಜೈ ಹಿಂದ್’ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗಗಳನ್ನು ಶ್ಲಾಘಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತದೆ ಎಂದು ಸುತ್ತೋಲೆ ಹೇಳಿದೆ.
‘ಜೈ ಹಿಂದ್’ ಬಗ್ಗೆ ಇನ್ನಷ್ಟು …
‘ಜೈ ಹಿಂದ್’ ಪ್ರಾದೇಶಿಕ, ಭಾಷಾ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಮೀರಿದೆ ಮತ್ತು ವೈವಿಧ್ಯಮಯ ಹಿನ್ನೆಲೆಯ ವಿದ್ಯಾರ್ಥಿಗಳ ನಡುವೆ ಏಕತೆಯನ್ನು ಉತ್ತೇಜಿಸುತ್ತದೆ ಎಂದು ಅದು ಹೇಳಿದೆ. ‘ಜೈ ಹಿಂದ್’ ನಂತಹ ಶುಭಾಶಯಗಳನ್ನು ನಿಯಮಿತವಾಗಿ ಬಳಸುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಏಕತೆಯ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
“ಈ ಶುಭಾಶಯವು ಸ್ಪೂರ್ತಿದಾಯಕ ಮತ್ತು ಪ್ರೇರಕವಾಗಿದೆ, ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ನೆನಪಿಸುತ್ತದೆ. ‘ಜೈ ಹಿಂದ್’ ಯುವ ಭಾರತೀಯರಿಗೆ ಸ್ಫೂರ್ತಿಯ ಮೂಲವಾಗಿದೆ, ಇದು ಭಾರತದ ಅಭಿವೃದ್ಧಿಗೆ ಧನಾತ್ಮಕ ಕೊಡುಗೆ ನೀಡಲು ಪ್ರೋತ್ಸಾಹಿಸುತ್ತದೆ,” ಎಂದು ಸುತ್ತೋಲೆ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ