ಅಷ್ಟೊಂದು ಹಣ ಬೇಕಾದ್ರೆ ಆಕೆ ದುಡಿದು ಸಂಪಾದಿಸಲಿ : ಗಂಡನಿಂದ ಪ್ರತಿತಿಂಗಳು 6 ಲಕ್ಷ ರೂ.ಜೀವನಾಂಶ ಕೇಳಿದ ಪತ್ನಿಗೆ ಹೈಕೋರ್ಟ್ ತೀವ್ರ ತರಾಟೆ

ಬೆಂಗಳೂರು: ತನ್ನಿಂದ ದೂರವಿರುವ ಪತಿಯಿಂದ ಪ್ರತಿ ತಿಂಗಳು 6 ಲಕ್ಷ ರೂ. ಜೀವನಾಂಶ ಕೋರಿದ ಪತ್ನಿಯ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್ ಆಕೆ ಇಷ್ಟು ಹಣವನ್ನು ಖರ್ಚು ಮಾಡಬೇಕೆಂದು ಬಯಸಿದರೆ ತಾನೇ ದುಡಿದು ಸಂಪಾದಿಸಲಿ ಎಂದು ತರಾಟೆಗೆ ತೆಗೆದುಕೊಂಡಿದೆ.
ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿರುವ ಜೀವನಾಂಶ ಹೆಚ್ಚಳ ಮಾಡುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಲಲಿತಾ ಕನ್ನೆಘಂಟಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ನ್ಯಾಯಾಲಯದ ಪ್ರಕ್ರಿಯೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ಅರ್ಜಿದಾರಳಿಗೆ ಎಚ್ಚರಿಸಿರುವ ನ್ಯಾಯಾಲಯವು ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದುಕೊಳ್ಳುವವರಿಗೆ ಸ್ಪಷ್ಟವಾದ ಸಂದೇಶವನ್ನು ಹಾಲಿ ಪ್ರಕರಣದ ಮೂಲಕ ಹೊರಡಿಸಲಾಗುವುದು ಎಂದು ಕಟುವಾಗಿ ಹೇಳಿದೆ.
“ಪ್ರತಿ ತಿಂಗಳ ಖರ್ಚಿಗೆ ಅರ್ಜಿದಾರಳಿಗೆ ₹6,16,300 ಬೇಕೆ? ಪತಿ ಎಷ್ಟು ಸಂಪಾದನೆ ಮಾಡುತ್ತಿದ್ದಾರೆ ಎಂಬುದನ್ನು ಆಧರಿಸಿ ಪತ್ನಿಗೆ ಜೀವನಾಂಶ ನೀಡಲಾಗದು? ಒಬ್ಬ ಮಹಿಳೆ ತನಗಾಗಿ ತಿಂಗಳಿಗೆ ಇಷ್ಟು ಖರ್ಚು ಮಾಡುತ್ತಾರೆಯೇ, ಹಾಗಾದರೆ ಅವರು ಸಂಪಾದಿಸಲಿ” ಎಂದು ಪೀಠ ಹೇಳಿತು.

ಕೌಟುಂಬಿಕ ನ್ಯಾಯಾಲಯವು ಪತ್ನಿಗೆ ಮಾಸಿಕ ₹50,000 ಜೀವನಾಂಶ ನಿಗದಿಪಡಿಸಿದೆ. ಆದರೆ ತನಗೆ ತಿಂಗಳ ₹6 ಲಕ್ಷ ರೂ.ಖರ್ಚಾಗುತ್ತಿದ್ದು, ಕನಿಷ್ಠ ₹5 ಲಕ್ಷ ಮಾಸಿಕ ಜೀವನಾಂಶ ಪಾವತಿಸಲು ಆದೇಶಿಸಿಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಪತ್ನಿಯ ಪರ ವಕೀಲರು “ಅರ್ಜಿದಾರೆಗೆ ಪೌಷ್ಠಿಕಾಂಶಯುಕ್ತ ಆಹಾರಬೇಕಿದೆ. ಈಗ ಅವರು ಹೊರಗಡೆ ಊಟ ಮಾಡುವಂತಾಗಿದೆ. ಊಟಕ್ಕೆ ತಿಂಗಳಿಗೆ ₹40,000 ಬೇಕಿದೆ. ತನ್ನನ್ನು ತೊರೆದಿರುವ ಪತಿಯು ಪ್ರತಿದಿನ ಬ್ರಾಂಡೆಡ್‌ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಈ ಶರ್ಟಿನ ಬೆಲೆ ₹10,000 ಇದೆ. ಆದರೆ ತಾನು ಹಳೆಯ ಬಟ್ಟೆ ಧರಿಸಬೇಕಿದೆ. ಬಟ್ಟೆಬರೆಗಾಗಿ 50,000 ರೂ. ಹಾಗೂ ಸೌಂದರ್ಯವರ್ಧಕ ಔಷಧಿ ವೆಚ್ಚ ಮತ್ತು ಇತರೆ ವಸ್ತುಗಳ ಖರೀದಿಗೆ ₹60,000 ಬೇಕಿದೆ” ಎಂದರು.
ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, “ದಾವೆದಾರರು ಚೌಕಾಸಿ ನಡೆಸಲು ನ್ಯಾಯಾಲಯ ಮಾರುಕಟ್ಟೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.. ನಿಮ್ಮ ಕಕ್ಷಿದಾರರಿಗೆ ಅರ್ಥವಾಗುತ್ತಿಲ್ಲ. ಆದರೆ, ನೀವು ಅರ್ಥ ಮಾಡಿಕೊಂಡು ಆಕೆಗೆ ಸಲಹೆ ನೀಡಬೇಕು. ಆಕೆಯ ವಾಸ್ತವಿಕ ಖರ್ಚುವೆಚ್ಚಗಳನ್ನು ನ್ಯಾಯಾಲಯಕ್ಕೆ ತಿಳಿಸಬೇಕು. ನ್ಯಾಯಯುತವಾಗಿ ನಡೆದುಕೊಳ್ಳಲು ನಿಮಗೆ ಕೊನೆಯ ಅವಕಾಶ ನೀಡಲಾಗುತ್ತಿದೆ” ಎಂದರು.

ಪ್ರಮುಖ ಸುದ್ದಿ :-   ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಮೂವರು ಸಾವು

ನಿರೀಕ್ಷಿತ ವೆಚ್ಚಗಳನ್ನು ಆಧರಿಸಿ ಜೀವನಾಂಶ ಕೋರಲು ಕಾನೂನಿನಲ್ಲಿ ಅವಕಾಶವಿಲ್ಲ. ಪತ್ನಿ ತನ್ನ ಮಾಸಿಕ ಖರ್ಚು ವೆಚ್ಚ ಎಂದು ವೈಯಕ್ತಿಕ ಖರ್ಚಿನ ವಿವರ ನೀಡಿದ್ದಾರೆ. ಇದರಲ್ಲಿ ಮಕ್ಕಳು ಮತ್ತು ಇತರೆ ಹೊಣೆಗಾರಿಕೆಯ ವಿಚಾರ ಪ್ರಸ್ತಾಪಿಸಿಲ್ಲ. ತಮ್ಮ ಮಾಸಿಕ ವೈಯಕ್ತಿಕ ಖರ್ಚಿಗೆ ₹6,16,300 ಬೇಕು ಎಂದು ಹೇಳಿದ್ದಾರೆ. ವಾಸ್ತವಿಕ ವೆಚ್ಚಗಳನ್ನು ಒಳಗೊಂಡ ಅಫಿಡವಿಟ್ ಸಲ್ಲಿಸಲು ಪತ್ನಿಗೆ ಕೊನೆಯ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿತು.
ಪತಿಯ ಪರ ವಕೀಲ ಆದಿನಾಥ ನರ್ದೆ ಅವರು ಆಕೆಯ ಬ್ಯಾಂಕ್‌ ದಾಖಲಾತಿಗಳ ಪ್ರಕಾರ ವಿವಿಧ ಕಡೆ ₹63 ಲಕ್ಷ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನುವುದನ್ನು ಗಮನಿಸಿತು. ಇದಕ್ಕೆ ಪತ್ನಿ ಪರ ವಕೀಲ ಆಕ್ಷೇಪಿಸಿದ್ದು, ಜೀವನಾಂಶ ಕೋರಿಕೆಯು ತನ್ನ ವಾಸ್ತವಿಕ ಖರ್ಚು ವೆಚ್ಚವಲ್ಲ, ಅದು ನಿರೀಕ್ಷಾತ್ಮಕ ವೆಚ್ಚವಾಗಿದೆ ಎಂದರು.
ಆಗ ಪೀಠವು ನಿರೀಕ್ಷಾತ್ಮಕ ವೆಚ್ಚಗಳನ್ನು ಆಧರಿಸಿ ಜೀವನಾಂಶ ಕೋರಲು ಕಾನೂನಿನಲ್ಲಿ ಅವಕಾಶವಿಲ್ಲ. ಪತ್ನಿ ತನ್ನ ಮಾಸಿಕ ಖರ್ಚು ವೆಚ್ಚ ಎಂದು ವೈಯಕ್ತಿಕ ಖರ್ಚಿನ ವಿವರ ನೀಡಿದ್ದಾರೆ. ಇದರಲ್ಲಿ ಮಕ್ಕಳು ಮತ್ತು ಇತರೆ ಹೊಣೆಗಾರಿಕೆ ವಿಚಾರ ಪ್ರಸ್ತಾಪಿಸಿಲ್ಲ. ವಾಸ್ತವಿಕ ವೆಚ್ಚಗಳನ್ನು ಒಳಗೊಂಡ ಅಫಿಡವಿಟ್‌ ಸಲ್ಲಿಸಲು ಪತ್ನಿಗೆ ಕೊನೆಯ ಅವಕಾಶ ಕಲ್ಪಿಸಲಾಗಿದೆ” ಎಂದು ಆದೇಶಿಸಿತು. ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 9ಕ್ಕೆ ಮುಂದೂಡಿದೆ.

ಪ್ರಮುಖ ಸುದ್ದಿ :-   ವಾಯುಭಾರ ಕುಸಿತ : ಕರ್ನಾಟಕದಲ್ಲಿ ಮೇ 24ರ ವರೆಗೆ ಭಾರಿ ಮಳೆ ಮುನ್ನೆಚ್ಚರಿಕೆ ; 15 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement