ಮೈಸೂರು : ʼರೀ ಡೂʼ ವಿಚಾರದಲ್ಲಿ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಕೆಂಪಣ್ಣ ವರದಿ ಬಿಡುಗಡೆಯಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಂಚೆ, ಶರ್ಟು ಎಲ್ಲವಕ್ಕೂ ಮಸಿ ಮೆತ್ತುವುದು ಗ್ಯಾರಂಟಿ ಎಂದು ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಡಾ ಹಗರಣದ ಬಗ್ಗೆ ಮಾತನಾಡಿದ ಅವರು, ರೀಡು ವಿಚಾರದಲ್ಲಿ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ.
ಸಚಿವ ಬೈರತಿ ಸುರೇಶ ಹೆಲಿಕಾಪ್ಟರ್ನಲ್ಲಿ ಬಂದು ಎಲ್ಲ ಫೈಲ್ ತೆಗೆದುಕೊಂಡು ಹೋಗಿದ್ದಾರೆ. ಮುಡಾಗೆ ಇಷ್ಟೊಂದು ಭದ್ರತೆ ಯಾಕೆ? ಮುಡಾಗೆ ಪ್ರತಿ ತಿಂಗಳು 5 ಕೋಟಿ ಸಂಬಳ ಖರ್ಚು ವೆಚ್ಚಕ್ಕೆ ಬೇಕು. ಆದರೆ 2 ತಿಂಗಳಿಂದ 10 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.
ಮುಡಾದಿಂದ ಯಾವ ಕೆಲಸವೂ ನಡೆಯುತ್ತಿಲ್ಲ. ಮುಡಾ ಹಗರಣಕ್ಕಾಗಿ ಏಕ ವ್ಯಕ್ತಿ ಆಯೋಗ ನೇಮಕ ಮಾಡಲಾಗಿದೆ. ಈ ಆಯೋಗ ಕುಮಾರಕೃಪದಿಂದ ಕಾರ್ಯನಿರ್ವಹಿಸುತ್ತಿದೆ. ಈ ಆಯೋಗಕ್ಕೆ ಮೇಜು, ಕುರ್ಚಿ ಎಂದು 1.5 ಕೋಟಿ ಖರ್ಚು ಆಗಿದೆ.
3337 ಎಕರೆ ಗಣಿ ಭೂಮಿಯನ್ನ ಎಕರೆಗೆ ಕೇವಲ 1.15 ಲಕ್ಷ ರೂ.ಗಳಿಗೆ ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಮಾರಾಟ ಮಾಡಿದೆ. ಆ ಭೂಮಿಯಲ್ಲಿ ಬೆಲೆ ಬಾಳುವ ಕಬ್ಬಿಣದ ಅದಿರು, ಮಿನರಲ್ಸ್ ಇದೆ. ಇಂತಹ ಭೂಮಿಯನ್ನ ಜಿಂದಾಲ್ ಕಂಪನಿಗೆ ಏಕಪಕ್ಷೀಯವಾಗಿ ಮಾರಾಟ ಮಾಡಿದ್ದಾರೆ. ಈ ಭೂಮಿಗೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. 2017ರಲ್ಲಿ ಕಾನೂನು ಇಲಾಖೆ ಭೂಮಿಯ ಬೆಲೆಯನ್ನು ಅದಿರು ಪ್ರಮಾಣ ನೋಡಿ ಮಾರಾಟ ನಿಗದಿ ಮಾಡಬೇಕು ಎಂದು ವರದಿ ನೀಡಿತ್ತು. ಆದರೆ ಇಲ್ಲಿ ಅನುಕೂಲಕ್ಕೆ ತಕ್ಕಂತೆ ಸರ್ಕಾರದ ಭೂಮಿಯನ್ನು ಪರಭಾರೆ ಮಾಡಿದೆ ಎಂದು ಆರೋಪಿಸಿದರು.
ಸರ್ಕಾರದ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಮುಖ್ಯಮಂತ್ರಿಗಳು ತಮ್ಮ 14 ಸೈಟ್ಗೆ 62 ಕೋಟಿ ಕೇಳುತ್ತಾರೆ. ಈ ಭೂಮಿಯನ್ನು ಒಟ್ಟಾರೆ 52 ಕೋಟಿಗೆ ಮಾರಾಟ ಮಾಡಿದ್ದಾರೆ. ಇದ್ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ