ಸವದತ್ತಿ : ರಥದ ಕಳಸ ಬಿದ್ದು ಬಾಲಕ ಸಾವು

ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕು ಚಚಡಿ ಗ್ರಾಮದಲ್ಲಿ ಸೋಮವಾರ ನಡೆದ ಸಂಗಮೇಶ್ವರ ದೇವರ ರಥೋತ್ಸವದ ಸಂದರ್ಭದಲ್ಲಿ ರಥದ ಮೇಲಿನ ಬೆಳ್ಳಿಯ ನವಿಲು ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಶಿವಾನಂದ ರಾಜಕುಮಾರ ಸಾವಳಗಿ (13 ವರ್ಷ) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಶ್ರಾವಣ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಂಗಮೇಶ್ವರ ದೇವರ ರಥೋತ್ಸವಕ್ಕೆ ಸಿದ್ಧತೆ ನಡೆದಿತ್ತು. 30 ಅಡಿ ಎತ್ತರದ ರಥದ ಮೇಲಿನ ಕಳಸದ ಮೇಲಿನ 5 ಕೆಜಿ ಭಾರವಿರುವ ಬೆಳ್ಳಿಯ ನವಿಲು ಪ್ರತಿಷ್ಠಾಪನೆ ಮಾಡಲಾಗಿತ್ತು. ನೂರಾರು ವರ್ಷಗಳ ಇತಿಹಾಸವುಳ್ಳ ಈ ಜಾತ್ರೆಯಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಬೆಳ್ಳಿಯ ನವಿಲನ್ನು ಅಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು.

ದೇವಸ್ಥಾನದಿಂದ ರಥವನ್ನು ತುಸು ದೂರ ಎಳೆದುಕೊಂಡು ಹೋದ ಬಳಿಕ ರಥದ ಚಕ್ರಗಳು ತಗ್ಗಿನಲ್ಲಿ ಸಿಲುಕಿವೆ. ಜನ ಜೋರಾಗಿ ರಥ ಎಳೆದಾಗ ಅಲ್ಲಾಡಿದೆ. ಆಗ ರಥದ ಮೇಲಿನ ಬೆಳ್ಳಿಯ ನವಿಲು ಕಿತ್ತು ಬಂದು ಕೆಳಗಡೆ ಇದ್ದ ಬಾಲಕನ ಮೇಲೆ ಬಿದ್ದಿದೆ. ಅದು ಏಕಾಏಕಿ ಬಾಲಕನ ತಲೆಯ ಮೇಲೆ ಬಿದ್ದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ. ತಕ್ಷಣ ರಥೋತ್ಸವವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ.
ಚಚಡಿ ಗ್ರಾಮದ ಶ್ರೀ ಸಂಗಮೇಶ್ವರ ದೇವರ ಜಾತ್ರೆ ಪ್ರಯುಕ್ತ ಸೋಮವಾರ ಸಂಜೆ 4 ಗಂಟೆಗೆ ಮಹಾ ರಥೋತ್ಸವ ಏರ್ಪಡಾಗಿತ್ತು. ಈ ಸಲ ಗ್ರಾಮದ ಯುವಕರು ಹಣ ಕೂಡಿಸಿ ರಥದ ಕಳಸದ ಮೇಲೆ ಬೆಳ್ಳಿಯ ನವಿಲು ಮಾಡಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಪ್ರಮುಖ ಸುದ್ದಿ :-   ಶಿರಸಿ-ಕುಮಟಾ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement