ಅಕ್ರಮ ಹಣ ವರ್ಗಾವಣೆ ಪ್ರಕರಣ ; ಎಎಪಿ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್‌ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್‌ ಅವರಿಗೆ ದೆಹಲಿ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಜಾರಿ ನಿರ್ದೇಶನಾಲಯವು ಜೈನ್‌ ಅವರನ್ನು ಮೇ 2022ರಂದು ಬಂಧಿಸಿತ್ತು. ಈ ನಡುವೆ ಜೈನ್‌ ಅವರು 2023ರ ಮೇ ಹಾಗೂ 2024ರ ಮಾರ್ಚ್‌ ನಡುವೆ ವೈದ್ಯಕೀಯ ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದರು.
ವಿಚಾರಣೆ ತಡವಾಗುತ್ತಿರುವುದನ್ನು ಹಾಗೂ 18 ತಿಂಗಳಿಂದ ಜೈನ್‌ ಜೈಲಿನಲ್ಲಿರುವ ಅಂಶವನ್ನು ಪರಿಗಣಿಸಿದ ದೆಹಲಿ ರೋಸ್‌ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ವಿಶಾಲ್‌ ಗೊಗ್ನೆ ಅವರು ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.

2022ರ ನವೆಂಬರ್‌ 17ರಂದು ವಿಚಾರಣಾಧೀನ ನ್ಯಾಯಾಲಯ ಮತ್ತು 2023ರ ಏಪ್ರಿಲ್‌ನಲ್ಲಿ ದೆಹಲಿ ಹೈಕೋರ್ಟ್‌ ಜೈನ್‌ ಜಾಮೀನು ಅರ್ಜಿ ತಿರಸ್ಕರಿಸಿದ್ದವು. 2023ರ ಮೇ 30ರಂದು ಸುಪ್ರೀಂ ಕೋರ್ಟ್‌ ಸತ್ಯೇಂದ್ರ ಜೈನ್‌ ಅವರಿಗೆ ಮಧ್ಯಂತರ ವೈದ್ಯಕೀಯ ಜಾಮೀನು ನೀಡಿತ್ತು.
ಜೈನ್‌ ಅವರು 2015 ಮತ್ತು 2017ರ ನಡುವೆ ಬೇನಾಮಿಯಾಗಿ ಚರ ಆಸ್ತಿ ಖರೀದಿಸಿದ್ದು, ಅದಕ್ಕೆ ಸೂಕ್ತ ದಾಖಲೆ ಒದಗಿಸಿಲ್ಲ ಎಂದು ಭ್ರಷ್ಟಾಚಾರ ನಿಷೇಧ ಕಾಯಿದೆ ಮತ್ತು ಕ್ರಿಮಿನಲ್‌ ದುರ್ನಡತೆ ಆರೋಪದ ಅಡಿ ಸಿಬಿಐ ಪ್ರಕರಣ ದಾಖಲಿಸಿತ್ತು. ಆನಂತರ ಜಾರಿ ನಿರ್ದೇಶನಾಲಯ (ಇ.ಡಿ.) ಪ್ರಕರಣ ದಾಖಲಿಸಿತ್ತು

ಪ್ರಮುಖ ಸುದ್ದಿ :-   ಗಂಟಲಲ್ಲಿ ಪಿಸ್ತಾ ಸಿಪ್ಪೆ ಸಿಲುಕಿ 2 ವರ್ಷದ ಮಗು ಸಾವು

ಜೈಲಿನಿಂದ ಬಿಡುಗಡೆ..
ಎರಡು ವರ್ಷಗಳ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ಯಿಂದ ಬಂಧಿಸಲ್ಪಟ್ಟಿದ್ದ ಸತ್ಯೇಂದ್ರ ಜೈನ್ ಅವರನ್ನು ಶುಕ್ರವಾರ ಸಂಜೆ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಅವರನ್ನು ದೆಹಲಿ ಮುಖ್ಯಮಂತ್ರಿ ಅತಿಶಿ ಇತರರು ಸ್ವಾಗತಿಸಿದರು.
ವೈದ್ಯಕೀಯ ಕಾರಣಗಳಿಗಾಗಿ ಮೇ 2023 ರಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಈ ವರ್ಷದ ಮಾರ್ಚ್‌ನಲ್ಲಿ ನಿಯಮಿತ ಜಾಮೀನು ಕೋರಿಕೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ ಅವರು ದೆಹಲಿಯ ತಿಹಾರ್ ಜೈಲಿಗೆ ಮರಳಿದ್ದರು.
ಜೈನ್ ಅವರು ಇತ್ತೀಚಿನ ದಿನಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಜಾಮೀನು ಪಡೆದ ಮೂರನೇ ಎಎಪಿ ನಾಯಕರಾಗಿದ್ದಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಕಳೆದ ತಿಂಗಳು ಜಾಮೀನು ನೀಡಲಾಯಿತು, ಮನೀಶ್ ಸಿಸೋಡಿಯಾ ಅವರಿಗೆ ಆಗಸ್ಟ್‌ನಲ್ಲಿ ಜಾಮೀನು ನೀಡಲಾಯಿತು. ದೆಹಲಿ ಹೊಸ ಮದ್ಯದ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಬಂಧಿಸಲಾಗಿತ್ತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement