ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ಜೊಲ್ಲೆ ಕುಟುಂಬದ ಮೇಲೆ ಇದೀಗ ವಕ್ಫ್ ಕಾಡಲಾರಂಭಿಸಿದೆ. ನಿಪ್ಪಾಣಿ ಬಿಜೆಪಿ ಶಾಸಕಿ ಹಾಗೂ ಮಾಜಿ ಸಚಿವರು ಆಗಿರುವ ಶಶಿಕಲಾ ಜೊಲ್ಲೆ ಮತ್ತು ಚಿಕ್ಕೋಡಿಯ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ದಂಪತಿಯ ಮಗ ಬಸವ ಪ್ರಭು ಜೊಲ್ಲೆ ಹೆಸರಿನಲ್ಲಿರುವ ಜಮೀನು ಈಗ ವಕ್ಫ್ ಹೆಸರಲ್ಲಿ ನೋಂದಣಿಯಾಗಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಕುಟುಂಬದ ಹಲವರ ಜಮೀನಿನ ಹೆಸರು ವಕ್ಫ್ ಹೆಸರಲ್ಲಿ ನಮೂದಾಗಿದೆ. ಬಸವಪ್ರಭು ಜೊಲ್ಲೆ ಅವರಿಗೆ ಸೇರಿದ 2 ಎಕರೆ 13 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ಹೆಸರು ಸೇರ್ಪಡೆಯಾಗಿದೆ ಎಂದು ಹೇಳಲಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಈವರೆಗೆ ವಕ್ಫ್ ಬೋರ್ಡ್ನಿಂದ ಬಸವಪ್ರಭು ಅವರಿಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ ಎನ್ನಲಾಗಿದೆ. ಯಕ್ಸಂಬಾದ ರೈತರ ಹಲವು ಜಮೀನುಗಳು ವಕ್ಫ್ ಹೆಸರಿನಲ್ಲಿ ಪತ್ತೆಯಾಗಿವೆ ಎಂಬ ಮಾಹಿತಿ ದೊರಕಿದೆ.
ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ವಕ್ಫ್ ಆಸ್ತಿ ಸಂಬಂಧ ನೋಟಿಸ್ ನೀಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಕ್ಷೇತ್ರದ ಹೊನವಾಡ ಗ್ರಾಮದ 15 ರೈತರಿಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ನಲ್ಲಿ ನಿಮ್ಮ ಜಮೀನು ವಕ್ಫ್ ಆಸ್ತಿಯಾಗಿದ್ದು, ಪಹಣಿ ಪತ್ರದಲ್ಲಿ ಕಾಲಂ ನಂ 11 ಹಾಗೂ 9ರಲ್ಲಿ ಉಲ್ಲೇಖಿಸಿ, 2 ದಿನದಲ್ಲಿ ತಕರಾರು ಸಲ್ಲಿಸಲು ಸೂಚನೆ ನೀಡಲಾಗಿತ್ತು. ನಂತರ ವಿವಾದ ಭುಗಿಲೆದ್ದು ರೈತರು ಪ್ರತಿಭಟನೆ ನಡೆಸಿದ್ದರು. ಕರಾಳ ದೀಪಾವಳಿ ಆಚರಿಸುವುದಾಗಿ ಹೇಳಿದ್ದರು. ಬಳಿಕ ರೈತರಿಗೆ ನೀಡಿದ್ದ ನೋಟಿಸ್ನ್ನು ಜಿಲ್ಲಾಡಳಿತ ಹಿಂಪಡೆದಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ