ಸರ್ಕಾರ ಎಲ್ಲ ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ : ಖಾಸಗಿ ಆಸ್ತಿಯ ಮೇಲೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು : ಸರ್ವರ ಒಳಿತಿಗಾಗಿ ವಿತರಿಸಲು ಖಾಸಗಿ ಒಡೆತನದ ಎಲ್ಲ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಂವಿಧಾನದ ಅಡಿಯಲ್ಲಿ ರಾಜ್ಯಗಳಿಗೆ ಅಧಿಕಾರವಿಲ್ಲ. ಸಂವಿಧಾನದ ಪರಿಚ್ಛೇದ 39(ಬಿ) ಅಡಿಯಲ್ಲಿ ಎಲ್ಲಾ ಖಾಸಗಿ ಆಸ್ತಿಗಳನ್ನು “ಸಮುದಾಯದ ಭೌತಿಕ ಸಂಪನ್ಮೂಲಗಳು” ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪಿನಲ್ಲಿ ಹೇಳಿದೆ
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ನೇತೃತ್ವದ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠವು 8-1 ಬಹುಮತದೊಂದಿಗೆ ಈ ವಿವಾದದ ಬಗ್ಗೆ ತೀರ್ಪು ನೀಡಿತು. ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಹೃಷಿಕೇಶ ರಾಯ್, ಬಿ.ವಿ. ನಾಗರತ್ನ, ಸುಧಾಂಶು ಧುಲಿಯಾ, ಜೆ ಬಿ ಪರ್ದಿವಾಲಾ, ಮನೋಜ ಮಿಶ್ರಾ, ರಾಜೇಶ ಬಿಂದಾಲ್, ಸತೀಶಚಂದ್ರ ಶರ್ಮಾ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.

ಖಾಸಗಿ ಆಸ್ತಿಯು ಸಮುದಾಯದ ಭೌತಿಕ ಸಂಪನ್ಮೂಲಗಳ ಭಾಗವಾಗಿರಬಹುದು. ಆದರೆ ವ್ಯಕ್ತಿಯ ಒಡೆತನದ ಪ್ರತಿಯೊಂದು ಸಂಪನ್ಮೂಲವು ಸಮುದಾಯದ ಭೌತಿಕ ಸಂಪನ್ಮೂಲಗಳ ಭಾಗವಾಗಿರುವುದು ಅನಿವಾರ್ಯವಲ್ಲ ಎಂದು ಪೀಠವು ಮೂರು ಭಾಗಗಳ ತೀರ್ಪಿನಲ್ಲಿ ಹೇಳಿದೆ. ಸಿಜೆಐ ಚಂದ್ರಚೂಡ, ಆರು ಇತರ ನ್ಯಾಯಮೂರ್ತಿಗಳೊಂದಿಗೆ ಸೇರಿ ಬಹುಮತದ ತೀರ್ಪು ನೀಡಿದರೆ, ನ್ಯಾ. ನಾಗರತ್ನ ಅವರು ಬಹುಮತಕ್ಕೆ ಭಾಗಶಃ ಒಪ್ಪಿಗೆ ನೀಡಿದ ತೀರ್ಪು ಬರೆದಿದ್ದಾರೆ. ಆದರೆ ನ್ಯಾ. ಧುಲಿಯಾ ಅವರು ಭಿನ್ನ ತೀರ್ಪು ನೀಡಿದ್ದಾರೆ.
ಸಂವಿಧಾನದ ಪರಿಚ್ಛೇದ 39(ಬಿ) ಅಡಿಯಲ್ಲಿ ಖಾಸಗಿ ಒಡೆತನದ ಎಲ್ಲ ಸಂಪನ್ಮೂಲಗಳನ್ನು ಸಾರ್ವಜನಿಕರ ಒಳಿತಿಗಾಗಿ ವಿತರಣೆ ಮಾಡಲು ರಾಜ್ಯಗಳು ಸ್ವಾಧೀನಪಡಿಸಿಕೊಳ್ಳಬಹುದು ಎಂಬ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ಪೀಠದ ಹಿಂದಿನ ತೀರ್ಪನ್ನು ಈ ತೀರ್ಪು ತಳ್ಳಿಹಾಕಿದೆ.
“ಭೌತಿಕ ಅಗತ್ಯತೆಗಳ ಅರ್ಹತೆ ಈಡೇರಿಸಿದ ಮಾತ್ರಕ್ಕೆ ಒಬ್ಬ ವ್ಯಕ್ತಿಯ ಒಡೆತನದ ಪ್ರತಿಯೊಂದು ಸಂಪನ್ಮೂಲವನ್ನು ಸಮುದಾಯದ ಭೌತಿಕ ಸಂಪನ್ಮೂಲ ಎಂದು ಕರೆಯಲಾಗದು. ಖಾಸಗಿ ಒಡೆತನದ ಆಸ್ತಿಯು ಸಮುದಾಯದ ಭೌತಿಕ ಸಂಪನ್ಮೂಲವಾಗಿ ಅರ್ಹತೆ ಪಡೆಯಲು, ಅದು ಮೊದಲು ಕೆಲವು ಪರೀಕ್ಷೆಗಳಲ್ಲಿ ಉತ್ತೀರ್ಣವಾಗಬೇಕು” ಎಂದು ಸಿಜೆಐ ಚಂದ್ರಚೂಡ ನೇತೃತ್ವದ ಬಹುಮತದ ತೀರ್ಪು ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಲ್ಲಿ ಬಿಜೆಪಿ ಶಾಸಕನ ಜೊತೆ ತನ್ನ ಸೀಟು ಬದಲಾಯಿಸಿಕೊಳ್ಳಲು ಒಪ್ಪದ ಪ್ರಯಾಣಿಕನ ಮೇಲೆ ಹಲ್ಲೆ

39(ಬಿ) ಅಡಿಯಲ್ಲಿ ಖಾಸಗಿ ಆಸ್ತಿಗಳನ್ನು ಸಮುದಾಯದ ಸಂಪನ್ಮೂಲಗಳು ಎಂದು ಪರಿಗಣಿಸಬಹುದೇ ಮತ್ತು ರಾಜ್ಯಗಳ ಅಧಿಕಾರಿಗಳು ಅವುಗಳನ್ನು ಸಾರ್ವಜನಿಕರಿಗೆ ಹಂಚಿಕೆಗಾಗಿ ಸ್ವಾಧೀನಪಡಿಸಿಕೊಳ್ಳಬಹುದೇ ಎಂಬ ಕಾನೂನಾತ್ಮಕ ಪ್ರಶ್ನೆಯ ಬಗ್ಗೆ ಡಿವೈ ಚಂದ್ರಚೂಡ ನೇತೃತ್ವದ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠ ನಿರ್ಧರಿಸಿದೆ.
ಸಂವಿಧಾನದ 39(ಬಿ) ಅಡಿ ಬರುವ ಆಕ್ಷೇಪಿತ ಸಂಪನ್ಮೂಲದ ಪರಿಶೀಲನೆಯು ಸ್ಪರ್ಧಾನಿಷ್ಠವಾಗಿದ್ದು, ಕೆಲ ನಿರ್ದಿಷ್ಟ ಅಂಶಗಳ ಗಣನೆಗೆ ಒಳಪಟ್ಟಿರಬೇಕು. ಉದಾಹರಣೆಗೆ, ಸಂಪನ್ಮೂಲದ ಸ್ವರೂಪ, ಅದರ ಗುಣ, ಸಮುದಾಯದ ಹಿತದ ಮೇಲೆ ಅದರ ಪರಿಣಾಮ, ಆ ನಿರ್ದಿಷ್ಟ ಸಂಪನ್ಮೂಲದ ಕೊರತೆ ಮತ್ತು ಅಂತಹ ಸಂಪನ್ಮೂಲವು ಕೆಲವೇ ಖಾಸಗಿ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗುವುದರಿಂದ ಉಂಟಾಗುವ ಪರಿಣಾಮ ಮುಂತಾದವುಗಳನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಸಮುದಾಯದ ಭೌತಿಕ ಆಸ್ತಿಯ ವ್ಯಾಪ್ತಿಗೆ ಒಳಪಡುವ ಸಂಪನ್ಮೂಲಗಳನ್ನು ಗುರುತಿಸಲು ಈ ನ್ಯಾಯಾಲಯವು ವಿಕಸಿತಗೊಳಿಸಿರುವ ಸಾರ್ವಜನಿಕ ವಿಶ್ವಸ್ತ ಸಿದ್ಧಾಂತವು ಸಹಾಯಕವಾಗಬಹುದು ಎಂದು ನ್ಯಾಯಾಲಯವು ಹೇಳಿದೆ.

ತಮ್ಮ ನಿರ್ಧಾರವನ್ನು ಓದುವಾಗ, ನ್ಯಾಯಮೂರ್ತಿ ನಾಗರತ್ನ ಅವರು ಕೆಲವು ವಿಷಯಗಳ ಬಗ್ಗೆ ಸಿಜೆಐ ನೇತೃತ್ವದ ಬಹುಮತದ ತೀರ್ಪನ್ನು ಸಮ್ಮತಿಸಿದರೂ ನ್ಯಾ. ಧುಲಿಯಾ ಅವರ ತೀರ್ಪಿಗೆ ಪ್ರತಿಕ್ರಿಯೆಯಾಗಿ ಕೆಲ ಅಭಿಪ್ರಾಯ ಬರೆದಿರುವುದಾಗಿ ತಿಳಿಸಿದರು.”ಖಾಸಗಿ ಒಡೆತನದ ಭೌತಿಕ ಸಂಪನ್ಮೂಲಗಳ ಮಾಲೀಕತ್ವ ಮತ್ತು ನಿಯಂತ್ರಣವು ಸಾಮಾನ್ಯ ಒಳಿತಿಗಾಗಿ ಸೇವೆ ಸಲ್ಲಿಸಲು ಸಮುದಾಯದ ಭೌತಿಕ ಸಂಪನ್ಮೂಲಗಳಾಗಿ ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದು ನನ್ನ ತೀರ್ಪಿನ ತಿರುಳು” ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.
ಭೌತಿಕ ಸಂಪನ್ಮೂಲಗಳನ್ನು ಹೇಗೆ ನಿಯಂತ್ರಿಸಬೇಕು ಮತ್ತು ವಿತರಿಸಬೇಕು ಎಂಬುದನ್ನು ಗಮನಿಸುವುದು ಸಂಸತ್ತಿನ ವಿಶೇಷ ಹಕ್ಕು ಎಂದು ನ್ಯಾಯಮೂರ್ತಿ ಧುಲಿಯಾ ತಮ್ಮ ಭಿನ್ನ ತೀರ್ಪಿನಲ್ಲಿ ಹೇಳಿದ್ದಾರೆ. ಸುಪ್ರಸಿದ್ಧ ಕೇಶವಾನಂದ ಭಾರತಿ ಪ್ರಕರಣದಲ್ಲಿ ಎತ್ತಿ ಹಿಡಿದಿರುವ 31 ಸಿ ವಿಧಿ ಜಾರಿಯಲ್ಲಿದೆ ಎಂದು ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ತೀರ್ಪು ನೀಡಿದೆ .

ಪ್ರಮುಖ ಸುದ್ದಿ :-   ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ...!

ಈ ತೀರ್ಪಿನೊಂದಿಗೆ, ಎಲ್ಲಾ ಖಾಸಗಿ ಆಸ್ತಿಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬಹುದು ಎಂದು ಹೇಳಿದ್ದ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ 1978 ರ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.
1978ರಲ್ಲಿ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ತೀರ್ಪು, ಖಾಸಗಿ ವ್ಯಕ್ತಿಗಳ ಎಲ್ಲಾ ಆಸ್ತಿಗಳನ್ನು ಸಮುದಾಯದ ಆಸ್ತಿ ಎಂದು ಕರೆಯಬಹುದು ಎಂದು ಅಭಿಪ್ರಾಯಪಟ್ಟಿತ್ತು.
ಪ್ರಸ್ತುತ ಪ್ರಕರಣದ ಪ್ರಮುಖ ಅರ್ಜಿಯನ್ನು ಮುಂಬೈ ಮೂಲದ ಆಸ್ತಿ ಮಾಲೀಕರ ಸಂಘ (POA) 1992ರಲ್ಲಿ ಸಲ್ಲಿಸಿತ್ತು. ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (MHADA) ಕಾಯಿದೆಯ VIII-A ಅಧ್ಯಾಯವನ್ನು ಸಂಘ ವಿರೋಧಿಸಿತ್ತು. 70% ನಿವಾಸಿಗಳು ಪುನಃಸ್ಥಾಪನೆ ಉದ್ದೇಶಗಳಿಗಾಗಿ ಅಂತಹ ವಿನಂತಿಯನ್ನು ಮಾಡಿದರೆ, ಸೆಸ್ಡ್ ಕಟ್ಟಡಗಳು ಮತ್ತು ಅವುಗಳನ್ನು ನಿರ್ಮಿಸಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರದ ಅಧಿಕಾರಿಗಳಿಗೆ ಕಾಯಿದೆ ಅವಕಾಶ ಕಲ್ಪಿಸಿತ್ತು.

 

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement