ನವದೆಹಲಿ: ಈ ವಾರದಲ್ಲಿ ಅಯೋಧ್ಯೆ ರಾಮಮಂದಿರ ಮತ್ತು ಕೆನಡಾದಲ್ಲಿನ ಹಲವು ಹಿಂದೂ ದೇಗುಲಗಳ ಮೇಲೆ ದಾಳಿ ನಡೆಸುವುದಾಗಿ ‘ಸಿಖ್ ಫಾರ್ ಜಸ್ಟಿಸ್’ ಸಂಘಟನೆಯ ನಾಯಕ, ಘೋಷಿತ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನೂನ್ ಬೆದರಿಕೆ ಹಾಕಿದ್ದಾನೆ.
ಅಲ್ಲದೆ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರಿಗೂ ಎಚ್ಚರಿಸಿದ್ದಾನೆ. ಖಲಿಸ್ತಾನಿ ಉಗ್ರರ ವಿಷಯ ಭಾರತ- ಕೆನಡಾ ಮತ್ತು ಭಾರತ- ಅಮೆರಿಕ ನಡುವೆ ಬಿಕ್ಕಟ್ಟಿಗೆ ಕಾರಣವಾಗಿರುವ ನಡುವೆಯೇ ಸದ್ಯ ಅಮೆರಿಕದಲ್ಲಿ ಆಶ್ರಯ ಪಡೆದಿರುವ ಪನ್ನೂನ್ ಈ ಬೆದರಿಕೆ ಹಾಕಿದ್ದಾನೆ.
‘ಹಿಂದುತ್ವದ ಹಿಂಸಾಚಾರ ಸಿದ್ಧಾಂತದ ಜನ್ಮಸ್ಥಳವಾದ ಅಯೋಧ್ಯೆಯ ತಳಪಾಯವನ್ನು ನಾವು ಅಲುಗಾಡಿಸುತ್ತೇವೆ. ಕೆನಡಾದಲ್ಲಿ ಭಾರತೀಯ ಉಗ್ರ ರಾಜತಾಂತ್ರಿಕರ ಮುಂದಿನ ಸವಾಲು ನ.16 ಮತ್ತು 17ರಂದು ಇರಲಿದೆ. ಅಂದು ನಾವು ಅಯೋಧ್ಯೆ ರಾಮಮಂದಿರ, ಕೆನಡಾದ ಕಾಲಿಬರಿ ಮಂದಿರ, ತ್ರಿವೇಣಿ ಮಂದಿರದ ಮೇಲೆ ದಾಳಿ ನಡೆಸಲಿದ್ದೇವೆ. ಹೀಗಾಗಿ ಅಂದು ಕೆನಡಾದಲ್ಲಿನ ಭಾರತೀಯರು ಈ ದೇಗುಲದಿಂದ ದೂರ ಇರಬೇಕು ಎಂದು ಪನ್ನೂ ಎಚ್ಚರಿಸಿದ್ದಾನೆ. ಅಲ್ಲದೆ, ಆತನ ವಿಡಿಯೋದಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ ಮೋದಿ ದೇಗುಲದಲ್ಲಿ ಪ್ರಾರ್ಥನೆ ಮಾಡುತ್ತಿರುವ ದೃಶ್ಯಗಳೂ ಇವೆ.
1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ ಹತ್ಯಾಕಾಂಡಕ್ಕೆ ಇದೀಗ 40 ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಅದೇ ಅವಧಿಯಲ್ಲಿ ದಾಳಿಯ ಎಚ್ಚರಿಕೆಯನ್ನು ಖಲಿಸ್ತಾನಿ ಉಗ್ರ ನೀಡಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ