ಇತಿಹಾಸ-ಪುರಾಣ ಎರಡನ್ನೂ ಕಾವ್ಯವಾಗಿಸಿದ ಹಿರಿಮೆ ಆದಿ ಕವಿ ಪಂಪನದ್ದು ; ಪಾದೆಕಲ್ಲು ವಿಷ್ಣು ಭಟ್ಟ

ಬನವಾಸಿ : ಇತಿಹಾಸ ಹಾಗೂ ಪುರಾಣ ಎರಡನ್ನೂ ಕಾವ್ಯವಾಗಿಸಿದ ಹಿರಿಮೆ ಆದಿ ಕವಿ ಪಂಪನದ್ದು. ಸಾಹಿತ್ಯ ಲೋಕದಲ್ಲಿ ಪಂಪನ ಕಾವ್ಯ ಅದರ ಶ್ರೇಷ್ಠತೆಯ ಕಾರಣಕ್ಕೆ ಶತಮಾನಗಳಿಂದಲೂ ಗೌರವಿಸಲ್ಪಡುತ್ತ ಬಂದಿದೆ. ಪಂಪನ ಕಾವ್ಯ ಸೃಷ್ಟಿಯ ಶಕ್ತಿಯೇ ಅಷ್ಟು ಅದ್ಭುತ ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಕನ್ನಡ ವಿದ್ವಾಂಸ ಉಡುಪಿಯ ಪಾದೆಕಲ್ಲು ವಿಷ್ಣು ಭಟ್ಟ ಹೇಳಿದರು.
ಬನವಾಸಿಯ ಯಾತ್ರಿ ನಿವಾಸದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಶಿರಸಿ ಜಿಲ್ಲೆ ಹಾಗೂ ಬನವಾಸಿ ತಾಲೂಕು ಸಮಿತಿ ಹಮ್ಮಿಕೊಂಡಿದ್ದ  “ಪಂಪ ಕಂಡ ಭಾರತʼ  ರಾಜ್ಯಮಟ್ಟದ ಸಾಹಿತ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಂಪ ಎಂಬ ಎರಡಕ್ಷರದಲ್ಲಿಯೇ ವಿಶೇಷತೆಯಿದೆ. ಎಲ್ಲೋ ಜನಿಸಿ ಎಲ್ಲೋ ಬೆಳೆದ ಪಂಪ ಸಾಹಿತ್ಯದ ಮೂಲಕವೇ ಕನ್ನಡ ನಾಡಿನಲ್ಲಿ ಅಚ್ಚಳಿಯದೇ ಉಳಿದಿದ್ದಾನೆ. ತನ್ನ ಶ್ರೇಷ್ಠ ಕಾವ್ಯ ರಚನೆಯ ಮೂಲಕ ಆದಿಕವಿ ಎಂದು ಅನಿಸಿಕೊಂಡಿದ್ದಾನೆ ಎಂದು ಹೇಳಿದರು.
ತಾನು ರಚಿಸಿದ ಕಾವ್ಯಗಳಲ್ಲಿ ತನ್ನ ಎರಡು ಕಾವ್ಯಗಳು ಹೆಚ್ಚು ಶ್ರೇಷ್ಠವಾದದ್ದು ಎಂದು ಪಂಪ ಕಾವ್ಯದಲ್ಲಿ ಬರೆದಿದ್ದಾನೆ. ಬನವಾಸಿಗೂ ಪಂಪನಿಗೂ ಅವಿನಾಭಾವ ಸಂಬಂಧವಿದೆ. ಇದನ್ನು ಪಂಪ ತನ್ನ ಕಾವ್ಯದಲ್ಲಿ ಹೇಳಿದ್ದಾನೆ. ಅಂದಿನ ಬನವಾಸಿಯ ವೈಭವವನ್ನು ತನ್ನ ಕಾವ್ಯಗಳಲ್ಲಿ ವಿಪುಲವಾಗಿ ವರ್ಣಿಸಿರುವ ಪಂಪ ಬನವಾಸಿಯಲ್ಲಿ ಹರಿಯುವ ವರದಾ ನದಿಯನ್ನು ಪುಣ್ಯ ಜಲ ಎಂದು ಕರೆದಿದ್ದಾನೆ ಎಂದರು.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಕರ್ನಾಟಕದ ಉಪಾಧ್ಯಕ್ಷ ಎಸ್‌.ಜಿ.ಕೋಟಿ ಬಾಗಲಕೋಟೆ ಅವರು, ಪಂಪನಂತಹ ಶ್ರೇಷ್ಠ ವ್ಯಕ್ತಿ ನಮ್ಮ ನಾಡಿನಲ್ಲಿ ಜನಿಸಿದ್ದ ಎಂಬುದೇ ನಮಗೆ ಹೆಮ್ಮೆ ಹಾಗೂ ಸೌಭಾಗ್ಯದ ಸಂಗತಿ ಎಂದರು. ಬನವಾಸಿಯು ಅಲ್ಲಮಪ್ರಭು, ಅಕ್ಕಮಹಾದೇವಿ ಅವರನ್ನು ಬೆಳೆಸಿದ ನಾಡು. ಅಷ್ಟೇ ಅಲ್ಲ, ವಚನ ಸಾಹಿತಿ ಹರ್ಡೇಕರ ಮಂಜಪ್ಪ ಅವರು ಜನಿಸಿ, ಬೆಳೆದ ಸ್ಥಳವಾಗಿದೆ ಎಂದು ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಸಂಘಟನೆಯ ಮೂಲಕ ಸಾಹಿತ್ಯ ಅಭಿರುಚಿ ಬೆಳೆಸುವ ಕಾರ್ಯ ಮಾಡುತ್ತಿದೆ. ಬನವಾಸಿಯಲ್ಲಿ ರಾಜ್ಯಮಟ್ಟದ ಸಾಹಿತ್ಯ ಗೋಷ್ಠಿ ಆಯೋಜಿಸಿರುವುದು ನಿಜಕ್ಕೂ ಸಂತಸದ ವಿಚಾರ. ಈ ಸಾಹಿತ್ಯ ಗೋಷ್ಠಿಗಳು ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಪ್ರೇರಣೆಯಾಗಲಿ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಶಿರಸಿ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ ಕೊಳಗಿ ವೇದಿಕೆಯಲ್ಲಿದ್ದರು. ಅಭಾಸಾಪದ ನಾರಾಯಣ ಶೇವಿರೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಗೋಷ್ಠಿಗಳು ಭಾಷೆಗಳ ನಡುವೆ ಸುಮಧುರ ಸಂವಾದ ನಡೆಸುತ್ತವೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಕ್ಕೆ ಸಾಹಿತ್ಯದ ಮೂಲಕ ಹಿತ ನೀಡುವ ಕೆಲಸ ಮಾಡುತ್ತಿದೆ ಎಂದರು.

ನಂತರ ನಡೆದ ಬೆಳಗಿನ ಗೋ಼ಷ್ಠಿಗಳಲ್ಲಿ ಮೈಸೂರಿನ ಮಹಾರಾಣಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಜಗದೀಶ ತರಗನೂರು ಅವರಿಂದ ʼವಿಕ್ರಮಾರ್ಜುನ ವಿಜಯದ ಕರ್ಣʼ, ಸಾಹಿತ್ಯ ವಿಮರ್ಶಕ, ಧಾರವಾಡದ ಡಾ.ಶ್ರೀಧರ ಹೆಗಡೆ ಭದ್ರನ್‌ ಅವರು ʼಅರಿಕೇಸರಿ ಅರ್ಜುನನಾದ ಬಗೆʼ ಎಂಬುದರ ಕುರಿತು ವಿಷಯ ಮಂಡನೆ ಮಾಡಿದರು. ಶೃಂಗೇರಿಯ ರಾಷ್ಟ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ರಾಘವೇಂದ್ರ ಅವರು ಅವಲೋಕನ ಮಾಡಿದರು.
ಮಧ್ಯಾಹ್ನದ ಸಾಹಿತ್ಯ ಗೋಷ್ಠಿಯಲ್ಲಿ ಕುಮಟಾದ ಡಾ.ಎ.ವಿ.ಬಾಳಿಗಾ ಕಾಲೇಜಿನ ಪ್ರಾಧ್ಯಾಪಕ ಡಾ.ಟಿ.ಜಿ. ಭಟ್‌ ಹಾಸಣಗಿ ಅವರು ʼಪಂಪನ ನಾಯಕನಾಗಿ ಅರ್ಜುನʼ, ಹಾಗೂ ಆದಿ ಕವಿ ಪ್ರಶಸ್ತಿ ಪುರಸ್ಕೃತ ಪುಟ್ಟು ಕುಲಕರ್ಣಿ ಅವರು ʼಪಂಪನ ಕೃಷ್ಣʼ ಕುರಿತು ವಿಷಯ ಮಂಡನೆ ಮಾಡಿದರು. ಸಂಸ್ಕೃತ ವಿದ್ವಾಂಸ ತೀರ್ಥಹಳ್ಳಿಯ ಲೋಹಿತಾಶ್ವ ಅವರು ಅವಲೋಕನ ಮಾಡಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಂದ್ಯಾ ಹೆಗಡೆ ಪ್ರಾರ್ಥಿಸಿದರು. ದಿನೇಶ ಹೆಗಡೆ ನಿರೂಪಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement