ಮುಂಬೈ: ಶನಿವಾರ ಪ್ರಕಟವಾದ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ವಿಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿ ಭಾರೀ ಸೋಲು ಕಂಡ ನಂತರ ಮಹಾರಾಷ್ಟ್ರದಲ್ಲಿ ವಿಪಕ್ಷಗಳ ವಲಯದಲ್ಲಿ ಕ್ಷಿಪ್ರ ಬೆಳವಣಿಗೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದ 103 ಸ್ಥಾನಗಳಲ್ಲಿ ಕೇವಲ 16 ಸ್ಥಾನಗಳನ್ನು ಗೆದ್ದ ನಂತರ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನಾನಾ ಪಟೋಲೆ ಅವರು ಕೇವಲ 208 ಮತಗಳ ಅಂತರದಿಂದ ಸಕೋಲಿಯಲ್ಲಿ ಸೋಲನುಭವಿಸಿದ್ದಾರೆ.
ಬಾಳಾಸಾಹೇಬ್ ಥೋರಟ್ ಅವರ ನಂತರ ಮಾಜಿ ಸಂಸದರಾದ ಪಟೋಲೆ ಅವರು 2021 ರಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ನ ಮುಖ್ಯಸ್ಥರಾದರು. ಅವರ ನಾಯಕತ್ವದಲ್ಲಿ, ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅದ್ಭುತ ಪ್ರದರ್ಶನವನ್ನು ನೀಡಿತು. ಅದು ಸ್ಪರ್ಧಿಸಿದ 17 ರಲ್ಲಿ 13 ಸ್ಥಾನಗಳನ್ನು ಗೆದ್ದುಕೊಂಡಿತು.
ಈ ಕಾರಣಕ್ಕಾಗಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಮಿತ್ರಪಕ್ಷಗಳಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲು ಪಟೋಲೆ ನೇತೃತ್ವದ ಕಾಂಗ್ರೆಸ್ ಸೀಟು ಹಂಚಿಕೆಯ ಮಾತುಕತೆಯ ಸಮಯದಲ್ಲಿ ಪಟ್ಟು ಹಿಡಿಯಿತು. ಇದು ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ಹಾಗೂ ಎನ್ಸಿಪಿ (ಶರದ್ ಪವಾರ್) ನಡುವೆ ಘರ್ಷಣೆಗೆ ಕಾರಣವಾಯಿತು. ಒಂದು ಹಂತದಲ್ಲಿ ಪಟೋಲೆ ಭಾಗಿಯಾದರೆ ಸೀಟು ಹಂಚಿಕೆ ಮಾತುಕತೆ ನಡೆಸಲು ಉದ್ಧವ್ ಠಾಕ್ರೆ ಬಣದ ಶಿವಸೇನೆ ನಿರಾಕರಿಸಿತ್ತು ಎಂಬ ವರದಿಗಳಿದ್ದವು. ಆದರೂ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಿತು.
ಆದರೆ ಫಲಿತಾಂಶ ಪ್ರಕಟವಾದಾಗ ಒಟ್ಟು ೨೮೮ ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 232 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಹಾಗೂ ಮಹಾ ವಿಕಾಸ ಅಘಾಡಿ 50 ಸ್ಥಾನಗಳಿಗೆ ಕುಸಿದಿದೆ. ಕಾಂಗ್ರೆಸ್ ತನ್ನ ಅತ್ಯಂತ ಕೆಟ್ಟ ಪ್ರದರ್ಶನ ನೀಡಿತು. ಕಳೆದ ಚುನಾವಣೆಯಲ್ಲಿ 44 ಸ್ಥಾನ ಗೆದ್ದಿದ್ದ ಈ ಬಾರಿ 16 ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ.
ನಿಮ್ಮ ಕಾಮೆಂಟ್ ಬರೆಯಿರಿ