ನವದೆಹಲಿ: ಕಾಂಗ್ರೆಸ್ನ ರಾಜ್ಯಸಭಾ ಸಂಸದರೊಬ್ಬರ ಸೀಟಿನಡಿ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಸದನದಲ್ಲಿ ತೀವ್ರ ಗದ್ದಲ ಸೃಷ್ಟಿಯಾಗಿದೆ. ರಾಜ್ಯಸಭಾ ಸಂಸದರ ಸೀಟಿನ ಸಂಖ್ಯೆ 222 ರ ಅಡಿಯಲ್ಲಿ 500 ರೂ ನೋಟುಗಳ ಬಂಡಲ್ ಪತ್ತೆಯಾಗಿದೆ.
ತೆಲಂಗಾಣದಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿರುವ ಅಭಿಷೇಕ್ ಮನುಸಿಂಘ್ವಿ ಅವರು ಕುಳಿತುಕೊಳ್ಳುವ ಸೀಟಿನಲ್ಲಿ ಹಣವಿತ್ತು ಎಂದು ಹೇಳಲಾಗಿದೆ. ಸಭಾಪತಿ ಜಗದೀಪ ಧನಕರ ಅವರ ಈ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಗುರುವಾರ ಸದನವನ್ನು ಮುಂದೂಡಿದ ನಂತರ ಭದ್ರತಾ ಅಧಿಕಾರಿಗಳು ನಗದು ಪತ್ತೆ ಮಾಡಿದ್ದಾರೆ ಎಂದು ರಾಜ್ಯಸಭೆಯ ಅಧ್ಯಕ್ಷರೂ ಆದ ಉಪಾಧ್ಯಕ್ಷ ಜಗದೀಪ ಧನಕರ ಸಂಸದರಿಗೆ ತಿಳಿಸಿದರು.
ತೆಲಂಗಾಣದಿಂದ ಚುನಾಯಿತರಾಗಿರುವ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನೀಡಿರುವ ಸೀಟ್ ನಂಬರ್ 222 ರಿಂದ ಭದ್ರತಾ ಅಧಿಕಾರಿಗಳು ಚಲಾವಣೆಯಲ್ಲಿರುವ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಉಪರಾಷ್ಟ್ರಪತಿ ಧನಕರ ಹೇಳಿದ್ದಾರೆ.
ತನಿಖೆಗೆ ಮುನ್ನ ಹೆಸರು ಹೇಳಬಾರದು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ತನಿಖೆಗೆ ತಮ್ಮ ಅಭ್ಯಂತರವಿಲ್ಲ, ಆದರೆ ತನಿಖೆ ನಡೆಯುತ್ತಿರುವುದರಿಂದ ಅಧ್ಯಕ್ಷರು ಸಂಸದರನ್ನು ಹೆಸರಿಸಬಾರದು ಎಂದು ಹೇಳಿದರು.
ಅಭಿಷೇಕಮನು ಸಿಂಘ್ವಿ ಆರೋಪವನ್ನು ಅಲ್ಲಗಳೆದಿದ್ದಾರೆ. ರಾಜ್ಯಸಭೆಗೆ ಹೋದಾಗಲೆಲ್ಲ 500 ರೂಪಾಯಿ ನೋಟು ಹಿಡಿದು ಬರುತ್ತೇನೆ ಎಂದ ಅವರು, ಈ ಬಗ್ಗೆ ಕೇಳಿದ್ದು ಇದೇ ಮೊದಲು. ಮಧ್ಯಾಹ್ನ 12.57ಕ್ಕೆ ಸದನ ತಲುಪಿ 1 ಗಂಟೆಗೆ ಸದನದಿಂದ ಎದ್ದು ಹೋಗಿದ್ದೆ ಎಂದರು.
ಸದನವನ್ನು ಮುಂದೂಡಿದ ಬಳಿಕ ದಿನನಿತ್ಯದ ತಪಾಸಣೆ ಸಮಯದಲ್ಲಿ ಭದ್ರತಾ ಅಧಿಕಾರಿಗಳಿಗೆ ನೋಟುಗಳ ಬಂಡಲ್ ಸಿಕ್ಕಿತ್ತು.
ಇಂತಹ ಘಟನೆಯನ್ನು ತಾನು ಮೊದಲ ಬಾರಿಗೆ ಕೇಳಿದ್ದೇನೆ ಎಂದು ಹೇಳಿದ ಸಿಂಘ್ವಿ, ರಾಜ್ಯಸಭೆಗೆ ಕೇವಲ ₹ 500 ಕೊಂಡೊಯ್ಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಿನ್ನೆ ಸದನದಲ್ಲಿ ಒಟ್ಟು 3 ನಿಮಿಷ ಹಾಗೂ ಕ್ಯಾಂಟೀನ್ನಲ್ಲಿ ಇನ್ನೂ 30 ನಿಮಿಷ ಕಳೆದಿದ್ದೇನೆ ಎಂದ ಅವರು, ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡುವುದು ವಿಪರ್ಯಾಸ ಎಂದು ಹೇಳಿದ್ದಾರೆ.
ಈ ವಿಷಯ ಆಡಳಿತ ಬೆಂಚ್ ಮತ್ತು ವಿಪಕ್ಷಗಳ ವಾಗ್ಯುದ್ಧಕ್ಕೆ ಕಾರಣವಾಯಿತು. ಬಿಜೆಪಿ ಮುಖ್ಯಸ್ಥ, ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಜೆಪಿ ನಡ್ಡಾ, ಇದು ರಾಜ್ಯಸಭೆಯ ಸಮಗ್ರತೆಗೆ “ಅಪಮಾನ” ಎಂದು ಬಣ್ಣಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ