ಹೈದರಾಬಾದ್ : ಇನ್ಸ್ಟಂಟ್ (ತ್ವರಿತ) ಲೋನ್ ಆ್ಯಪ್ನಿಂದ ಕೇವಲ ₹ 2,000 ಸಾಲ ತೆಗೆದುಕೊಂಡ ನಂತರ ನಿರಂತರವಾಗಿ ಕಿರುಕುಳ ಎದುರಿಸುತ್ತಿದ್ದ 27 ವರ್ಷದ ಯುವಕ ವಿವಾಹವಾದ 47 ದಿನಗಳ ನಂತರ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಜೀವನೋಪಾಯಕ್ಕಾಗಿ ಮೀನು ಹಿಡಿಯುತ್ತಿದ್ದ ನರೇಂದ್ರ ಎಂಬವರು ಪ್ರತಿಕೂಲ ಹವಾಮಾನದ ಕಾರಣದಿಂದ ಕೆಲವು ತಿಂಗಳ ಹಿಂದೆ ಮೀನುಗಾರಿಕೆಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ತ್ವರಿತ ಸಾಲದ ಅಪ್ಲಿಕೇಶನ್ನಿಂದ ₹ 2,000 ಸಾಲ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನರೇಂದ್ರ ಅವರು ಅಸಲು ಮೊತ್ತವನ್ನು ಮರುಪಾವತಿಸಿದ್ದರೂ ಸಾಲದ ಕಂಪನಿಯವರು ಅವರಿಗೆ ಇನ್ನೂ ನೀವು ದೊಡ್ಡ ಮೊತ್ತದ ಬಡ್ಡಿ ಹಣ ನೀಡಬೇಕಿದೆ ಎಂದು ಪೀಡಿಸಿದ್ದಾರೆ ಎನ್ನಲಾಗಿದೆ.
ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ ಎಂದು ಅವರು ಹೇಳಿದಾಗ ಕಂಪನಿಯ ಜನರು ಕಿರುಕುಳ ನೀಡಿ ನಿಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅಕ್ಟೋಬರ್ 20 ರಂದು ಮದುವೆಯಾಗಿದ್ದ ಆತನಿಗೆ ಹಾಗೂ ಆತನ ಪತ್ನಿಗೆ ಬ್ಲ್ಯಾಕ್ ಮೇಲ್ ಮಾಡಿ ನಗ್ನ ಫೋಟೋವನ್ನು ಮಾರ್ಫಿಂಗ್ ಮಾಡಿ ವಾಟ್ಸಾಪ್ ನಲ್ಲಿ ಶೇರ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಕಿರುಕುಳದ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳುವುದು ನರೇಂದ್ರ ಅವರಿಗೆ ಕಷ್ಟಕರವಾಗಿತ್ತು ಮತ್ತು ಇದು ಖಿನ್ನತೆಗೆ ಕಾರಣವಾಯಿತು. ನಿರಂತರ ಕಿರುಕುಳ ಮತ್ತು ಆಘಾತವನ್ನು ತಾಳಲಾರದೆ ನರೇಂದ್ರ ಶನಿವಾರ ನೇಣು ಬಿಗಿದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗ ಅವರ ಕುಟುಂಬಸ್ಥರು ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿಗೆ ಈ ಸಂಬಂಧ ದೂರು ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ