ಹೈದರಾಬಾದ್: ಹೈದರಾಬಾದ್ನಲ್ಲಿ ಡಿಸೆಂಬರ್ 4 ರಂದು ‘ಪುಷ್ಪ- 2’ ಚಿತ್ರದ ಪ್ರಥಮ ಪ್ರದರ್ಶನದ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ತೆಲುಗು ಚಲನಚಿತ್ರ ನಟ ಅಲ್ಲು ಅರ್ಜುನ್ಗೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಶುಕ್ರವಾರ ಬೆಳಿಗ್ಗೆ ಬಂಧಿಸಿದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಅಲ್ಲು ಅರ್ಜುನ್ ಪರ ವಕೀಲರು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಜುವ್ವಾಡಿ ಶ್ರೀದೇವಿ ಅವರು, ಅರ್ಜುನ್ ಅವರು ಅಗತ್ಯ ಅನುಮತಿ ಪಡೆದು ಸಿನಿಮಾದ ಪ್ರಥಮ ಪ್ರದರ್ಶನಕ್ಕೆ ಹೋಗಿರುವುದರಿಂದ ಘಟನೆಗೆ ಪ್ರಾಥಮಿಕ ಹೊಣೆಗಾರರಾಗಲು ಸಾಧ್ಯವಿಲ್ಲ ಎಂದು ಹೇಳಿ ಮಧ್ಯಂತರ ಜಾಮೀನು ಮಂಜೂರು ಮಾಡಿದರು.
ಚಿತ್ರದ ಪೂರ್ವಭಾವಿ ಪ್ರದರ್ಶನಕ್ಕೆ ಹೋದರೆ ಇಂತಹ ಅಹಿತಕರ ಘಟನೆ ಸಂಭವಿಸಬಹುದು ಎಂಬ ಅರಿವು ಅಲ್ಲು ಅರ್ಜುನ್ಗೆ ಇತ್ತು ಎಂಬ ರಾಜ್ಯ ಸರ್ಕಾರದ ಪರ ವಕೀಲರ ವಾದವನ್ನೂ ಸಹ ನ್ಯಾಯಾಲಯ ತಳ್ಳಿಹಾಕಿತು. “ಘಟಿಸಿದ ದುರಂತಕ್ಕೆ ಅವರು ಜವಾಬ್ದಾರರೇ? ಅವರಿಗೆ ಅದರ ಅರಿವು ಹೇಗಿರಲು ಸಾಧ್ಯ? ಅವರು ಅನುಮತಿ ಪಡೆದು ಪಾಲ್ಗೊಂಡಿದ್ದಾರೆ, ಎಂದು ಕೋರ್ಟ್ ಆದೇಶದ ವೇಳೆ ಅಭಿಪ್ರಾಯಪಟ್ಟಿತು. “ಅವರು ಕೇವಲ ನಟರಾದ ಮಾತ್ರಕ್ಕೆ ಅವರ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಈ ನೆಲದ ಪ್ರಜೆಯಾಗಿ ಅವರಿಗೂ ಬದುಕಿನ ಮತ್ತು ಸ್ವಾತಂತ್ರ್ಯದ ಹಕ್ಕಿದೆ” ಎಂದು ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ವೇಳೆ ಹೇಳಿತು.
ಸಿಕಂದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ಡಿಸೆಂಬರ್ 11ರಂದು ನಡೆದ ಪುಷ್ಪ-2 ಚಿತ್ರದ ಪ್ರಥಮ ಪ್ರದರ್ಶನದ ವೇಳೆ ಆಗಮಿಸಿದ್ದ ನಟ ಅಲ್ಲು ಅರ್ಜುನ್ ಅವರನ್ನು ನೋಡಲೆಂದು ಉಂಟಾದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದರು. ಸಿಕಂದರಾಬಾದ್ನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾಲ್ತುಳಿತದ ಸಂದರ್ಭದಲ್ಲಿ ಅರ್ಜುನ್ ಕೂಡ ಥಿಯೇಟರ್ನಲ್ಲಿ ಹಾಜರಿದ್ದರು.
ಘಟನೆಗೆ ಸಂಬಂಧಿಸಿದಂತೆ ಚಿಕ್ಕಡಪಲ್ಲಿ ಠಾಣೆಯಲ್ಲಿ ಮೃತ ಮಹಿಳೆ ಎಂ ರೇವತಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ಸೆಕ್ಷನ್ 105 (ಕೊಲೆಗೆ ಸಮನಾದ ನರಹತ್ಯೆಯ ಅಪರಾಧ) ಮತ್ತು ಸೆಕ್ಷನ್ 118(1), 3 3(1) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ