ಚಿಕ್ಕಮಗಳೂರು : ಜಿಲ್ಲೆಯ ಎನ್. ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ಶ್ರೀ ರಂಭಾಪುರಿ ಮಠಕ್ಕೆ ಬಾಲಿವುಡ್ ಖ್ಯಾತ ತಾರೆ ಶಿಲ್ಪಾ ಶೆಟ್ಟಿ ದಂಪತಿ ರೋಬೋಟಿಕ್ ಆನೆಯೊಂದನ್ನು ನೀಡಿದ್ದಾರೆ.
ಈ ರೋಬೋಟಿಕ್ ಆನೆ ನೋಡಲು ನೈಜ ಆನೆಯಂತೆಯೇ ಕಾಣಿಸುತ್ತದೆ. ಯಾವಾಗಲೂ ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನು ಅಲ್ಲಾಡಿಸುತ್ತದೆ. ವೀರಭದ್ರ ಎಂದು ಕರೆಯಲಾಗುವ ಈ ರೋಬೋಟಿಕ್ ಆನೆಯನ್ನು ಅನಾವರಣಗೊಳಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ರಂಭಾಪುರಿ ಮಠದ ನಿರ್ಧಾರವನ್ನು ಶ್ಲಾಘಿಸಿದರು. ಆನೆಯನ್ನು ನೀಡುವಂತೆ ಅನೇಕ ದೇವಾಲಯಗಳು ಮತ್ತು ಮಠಗಳು ಕೇಳಿವೆ. ಆದರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ, ಯಾವುದೇ ದೇವಾಲಯಕ್ಕೂ ಆನೆಗಳನ್ನು ಕೊಡುಗೆಯಾಗಿ ನೀಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ರೋಬೋಟಿಕ್ ನಂತಹ ತಂತ್ರಜ್ಞಾನ ಬಂದಿದ್ದು, ಶಿಲ್ಪಾಶೆಟ್ಟಿ ಅವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಇಂಧನ ಸಚಿವ ಕೆಜೆ ಜಾರ್ಜ್, ಶಾಸಕ ಟಿ.ಡಿ. ರಾಜೇಗೌಡ ಮತ್ತಿತರರು ಪಾಲ್ಗೊಂಡಿದ್ದರು. ಮತ್ತಷ್ಟು ದೇವಾಲಯ ಹಾಗೂ ಮಠಗಳಲ್ಲಿ ರೋಬೋಟಿಕ್ ಆನೆಗಳನ್ನು ಇಡಲು ನಾವು ಪ್ರೋತ್ಸಾಹಿಸುತ್ತೇವೆ ಎಂದು ರಂಭಾಪುರಿ ಸ್ವಾಮೀಜಿ ಹೇಳಿದರು.
ದೇಶದ ಪಂಚಪೀಠಗಳಲ್ಲೇ ರಂಭಾಪುರಿ ಮಠವು ಮೊದಲ ಪೀಠವಾಗಿದೆ. ಈ ಮಠದ ಭಕ್ತರಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿ ಆಗಾಗ್ಗೆ ಮಠಕ್ಕೆ ಭೇಟಿ ನೀಡುತ್ತಿರುತ್ತಾರೆ. ಅವರು ಆನೆ ನೀಡಲು ಸಂಕಲ್ಪ ಮಾಡಿದ್ದರಂತೆ. ಆದರೆ ಅದಕ್ಕೆ ಕಾನೂನು ತೊಡಕು ಇರುವುದರಿಂದ ಈಗ ಮಠಕ್ಕೆ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ನೂರಾರು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ