ಶಬರಿಮಲೆ : ಶಬರಿಮಲೆಯ ಶ್ರೀ ಅಯ್ಯಪ್ಪನ (Sabarimala Temple) ದೇವಸ್ಥಾನದಲ್ಲಿ, ಸಾವಿರಾರು ಭಕ್ತರ ಮುಂದೆಯೇ ಕರ್ನಾಟಕದ ಭಕ್ತರೊಬ್ಬರು ಮಾಳಿಗೆಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಕರ್ನಾಟಕದ ಕನಕಪುರದ ನಿವಾಸಿ ಕುಮಾರಸ್ವಾಮಿ (40) ಎಂದು ಗುರುತಿಸಲಾಗಿದೆ.
ತುಪ್ಪದ ಅಭಿಷೇಕ ಕೌಂಟರ್ಗಳ ಮಂಟಪದ ಮೇಲಿನಿಂದ ಇವರು ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಶಬರಿಮಲೆಯಲ್ಲಿ ಎಲ್ಲರೂ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋಗುತ್ತಿರುವಾಗ ಅಯ್ಯಪ್ಪ ಸ್ವಾಮಿಯ ಭಕ್ತ ಕುಮಾರಸ್ವಾಮಿ ಶಬರಿಮಲೆಯ ತುಪ್ಪದ ಅಭಿಷೇಕ ಕೌಂಟರ್ಗಳ ಮಂಟಪದಿಂದ ಕೆಳಗೆ ಜಿಗಿದಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ಅಲ್ಲಿದ್ದವರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ನಂತರ ಕುಮಾರಸ್ವಾಮಿ ಅವರನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ ಖಿನ್ನತೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ