ಪುಣೆ: ಪುಣೆಯ ಕಂಪನಿಯ ಪಾರ್ಕಿಂಗ್ ಸ್ಥಳದಲ್ಲಿ 28 ವರ್ಷದ ಮಹಿಳೆಯ ಮೇಲೆ ಸಹೋದ್ಯೋಗಿಯೊಬ್ಬರು ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.ಭೀಕರ ದಾಳಿಯನ್ನು ಹಲವಾರು ಜನರು ನೋಡುತ್ತಿದ್ದರೂ ಯಾರೂ ಅದನ್ನು ತಡೆಯಲು ಪ್ರಯತ್ನಿಸಲಿಲ್ಲ ಎಂದು ಹೇಳಲಾಗಿದ್ದು, ಗಾಯಗೊಂಡ ಮಹಿಳೆ ಸಾವಿಗೀಡಾಗಿದ್ದಾಳೆ. ಸುಳ್ಳು ಹೇಳಿ ತನ್ನಿಂದ ಸಾಲ ಪಡೆದಿದ್ದಕ್ಕೆ ಕೋಪಗೊಂಡು ಈ ತರಹ ಮಾಡಿರುವುದು ಕೊಲೆ ಆರೋಪಿ ತಿಳಿಸಿದ್ದಾನೆ ಎನ್ನಲಾಗಿದೆ.
ತನ್ನ ತಂದೆ ಅಸ್ವಸ್ಥರಾಗಿದ್ದಾರೆ ಮತ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿ ತನ್ನ ಸಹೋದ್ಯೋಗಿ ಶುಭದಾ ಕೊಡರೆ ತನ್ನಿಂದ ಹಲವಾರು ಬಾರಿ ಸಾಲ ಪಡೆದಿದ್ದಾರೆ. ಹಣ ವಾಪಸ್ ಕೇಳಿದಾಗ ತಂದೆಯ ಸ್ಥಿತಿಯ ಕಾರಣ ನೀಡಿ ಹಣ ಕೊಟ್ಟಿಲ್ಲ. ನಂತರ ತಾನು ಆಕೆ ಹೇಳಿದ್ದನ್ನು ದೃಢಪಡಿಸಿಕೊಳ್ಳಲು ಶುಭದಾ ಕೊಡರೆ ಮನೆಗೆ ಹೋಗಿದ್ದೆ. ಮತ್ತು ಅಲ್ಲಿ ಆಕೆಯ ತಂದೆಯು ಆರೋಗ್ಯವಾಗಿದ್ದಾರೆ ಮತ್ತು ಯಾವುದೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿಲ್ಲ ಎಂಬುದನ್ನು ಕಂಡುಕೊಂಡೆ ಎಂದು ಹೇಳಿದ್ದಾನೆ.
ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ, ಕನೋಜಾ ಕೊಡಾರೆಯನ್ನು ತಮ್ಮ ಕಚೇರಿಯ ಪಾರ್ಕಿಂಗ್ ಸ್ಥಳಕ್ಕೆ ಕರೆದು ಆಕೆಗೆ ತನ್ನ ಹಣ ಹಿಂತಿರುಗಿಸುವಂತೆ ಕೇಳಿದೆ. ಆಕೆ ನಿರಾಕರಿಸಿದ್ದರಿಂದ ವಾಗ್ವಾದ ನಡೆಯಿತು. ನಂತರ ಮಚ್ಚಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾಗಿ ಯರವಾಡದ ಹೊರಗುತ್ತಿಗೆ (ಬಿಪಿಒ) ಕಂಪನಿಯಾದ ಡಬ್ಲ್ಯುಎನ್ಎಸ್ ಗ್ಲೋಬಲ್ನಲ್ಲಿ ಅಕೌಂಟೆಂಟ್ ಆಗಿರುವ ಕೃಷ್ಣ ಕನೋಜ (30) ಪೊಲೀಸರಿಗೆ ತಿಳಿಸಿದ್ದಾನೆ.
ಪಾರ್ಕಿಂಗ್ ಲಾಟ್ನಲ್ಲಿದ್ದ ಹಲವಾರು ಜನರು ಹಲ್ಲೆ ನಡೆಸುವುದನ್ನು ನೋಡುತ್ತಿದ್ದರೂ ಆತನನ್ನು ತಡೆಯಲು ಪ್ರಯತ್ನಿಸಲಿಲ್ಲ. ಅವರಲ್ಲಿ ಕೆಲವರು ಈ ಕೃತ್ಯವನ್ನು ಸೆರೆ ಹಿಡಿದಿದ್ದಾರೆ. ಮಹಿಳೆ ನೆಲದ ಮೇಲೆ ಒದ್ದಾಡುತ್ತಿದ್ದಾಗ ಮತ್ತು ಕನೋಜ ಆಯುಧವನ್ನು ಎಸೆದ ನಂತರ ಗುಂಪೊಂದು ಆತನನ್ನು ಸುತ್ತುವರೆದು ಥಳಿಸಿತು ಎಂದು ವರದಿಯಾಗಿದೆ.
“ಮೊಣಕೈಗೆ ತೀವ್ರವಾದ ಗಾಯವಾದ ಕೊಡಾರೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಪ್ರಕರಣ ದಾಖಲಿಸಲಾಗಿದೆ ಮತ್ತು ಕನೋಜನನ್ನು ಬಂಧಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ