ಪ್ರಕಾಶ ರೈ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದ ನಕಲಿ ಫೋಟೊ ವೈರಲ್‌; ಪ್ರಶಾಂತ್ ಸಂಬರಗಿ ವಿರುದ್ಧ ದೂರು ದಾಖಲಿಸಿದ ನಟ

ಮೈಸೂರು: ಮಹಾ ಕುಂಭಮೇಳದಲ್ಲಿ ಪ್ರಕಾಶ ರೈ ಅವರು ಪವಿತ್ರ ಸ್ನಾನ ಮಾಡುವ ರೀತಿಯಲ್ಲಿ ತಂತ್ರಜ್ಞಾನ ಬಳಸಿ ನಕಲಿ ಫೋಟೋ ರಚಿಸಿ ವೈರಲ್‌ ಮಾಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ವಿರುದ್ಧ ಬಹುಭಾಷಾ ನಟ ಪ್ರಕಾಶ ರೈ ನಗರದ ಲಕ್ಷ್ಮೀಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಶಾಂತ್ ಸಂಬರಗಿ ಅವರು ನನ್ನ ಖ್ಯಾತಿಗೆ ಧಕ್ಕೆ ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಫೇಸ್‌ಬುಕ್‌ನಲ್ಲಿ ನನ್ನ ಹೆಸರು ಬಳಸಿ ಕೃತಕ ಬುದ್ಧಿಮತ್ತೆ ಮೂಲಕ ಸೃಷ್ಟಿಸಿದ ಭಾವಚಿತ್ರ ಬಳಸಿದ್ದು, ಸುಳ್ಳು ಶೀರ್ಷಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಶಾಂತ್ ಸಂಬರಗಿ ಅವರಿಗೆ ಇ ಮೇಲ್ ಮೂಲಕ ನೋಟಿಸ್ ಕಳುಹಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ದೂರಿನ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಪ್ರಶಾಂತ ಸಂಬರಗಿ ಯಾರೆಂದೇ ನನಗೆ ಗೊತ್ತಿಲ್ಲ. ಎಐ ತಂತ್ರಜ್ಞಾನ ಬಳಸಿ ನನ್ನ ನಕಲಿ ಫೋಟೋ ರಚಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ, ಪೊಲೀಸ್‌ ದೂರು ನೀಡಿ ಎಫ್.ಐ.ಆರ್‌ ದಾಖಲು ಮಾಡಿಸಿದ್ದೇನೆ ಎಂದು ಅವರು ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

ನಾನು ಎಂದಾದರೂ ಧರ್ಮದ ಬಗ್ಗೆ ಮಾತನಾಡಿದ್ದೀನೆಯೇ ?. ಇವರು ಧರ್ಮ-ಧರ್ಮದ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದೇ ಅವರ ಕೆಲಸವಾಗಿದೆ ಎಂದು ಹೇಳಿದ ಅವರು,
ಮಹಾ ಕುಂಭಮೇಳ ಹಿಂದು ಧರ್ಮದವರಿಗೆ ಹಾಗೂ ದೇವರನ್ನು ನಂಬುವವರಿಗೆ ಒಂದು ಪುಣ್ಯ ಸ್ಥಳ. ಆದರೆ ಅಂಥ ಪುಣ್ಯ ಕ್ಷೇತ್ರದಲ್ಲಿ ರಾಜಕಾರಣ ನಡೆಯುತ್ತಿದೆ. ಅಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ನನ್ನ ನಕಲಿ ಫೋಟೋ ವೈರಲ್ ಮಾಡುತ್ತಿದ್ದಾರೆ. ಇಂತಹವರು ಮೊದಲಿನಿಂದಲೂ ಪ್ರಕಾಶ ರೈ​ ಹಿಂದು ವಿರೋಧಿ ಎಂದು ಸುಳ್ಳು ಸುದ್ದಿ ಹಬ್ಬಿಸಿಕೊಂಡು ಬಂದಿದ್ದಾರೆ ಎಂದು ಟೀಕಿಸಿದರು.
ಪ್ರಶಾಂತ ಸಂಬರಗಿ ಎಂಬವರು ಪ್ರಖ್ಯಾತರೋ, ಕುಖ್ಯಾತರೋ ನನಗೆ ಗೊತ್ತಿಲ್ಲ. ಆದ್ರೆ ನನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಇವರು ನಿಜವಾಗಿಯೂ ಧರ್ಮವನ್ನು ಅನುಸರಿಸುವವರಲ್ಲ ಎಂದರು.

ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಕೇಸ್ ಹಾಕಿ ಗೆದ್ದಿದ್ದೇನೆ ಕೂಡಾ. ಇದೀಗ ಪ್ರಶಾಂತ್​​ ಸಂಬರಗಿ ವಿರುದ್ಧ ದೂರು ನೀಡಿ ಎಫ್.ಐ.ಆರ್ ‌ಮಾಡಿಸಿದ್ದೇನೆ. 15 ದಿನಗಳಲ್ಲಿ ಆ ವ್ಯಕ್ತಿ ಠಾಣೆಗೆ ಬಂದು ಉತ್ತರ ನೀಡಬೇಕು. ಈ ನಕಲಿ ಫೋಟೋದ ಸತ್ಯಾನುಸತ್ಯತೆ ಎಲ್ಲರಿಗೂ ತಿಳಿಯಬೇಕು. ಸುಳ್ಳು ಸುದ್ದಿ ಹರಡುವವರಿಗೆ ಇದೊಂದು ಪಾಠ ಆಗಬೇಕು ಎಂದು ಹೇಳಿದರು.
ಕುಂಭಮೇಳ ಪುಣ್ಯ ಸ್ನಾನ ಮಾಡುವುದರಲ್ಲಿ ತಪ್ಪೇನಿದೆ? ಅದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಇದರ ಬಗ್ಗೆ ನಾನೇನು ಮಾತನಾಡುವುದಿಲ್ಲ. ನನಗೆ ದೇವರ ಮೇಲೆ ನಂಬಿಕೆ ಇಲ್ಲ. ನನಗೆ ಮನುಷ್ಯರ ಮೇಲೆ ನಂಬಿಕೆ. ದೇವರಿಲ್ಲದೆಯೂ ಬದುಕಬಹುದು, ಆದರೆ ಮನುಷ್ಯರಿಲ್ಲದೇ ಬದುಕಲು ಸಾಧ್ಯವಿಲ್ಲ. ಆದರೆ ನಾನು ವ್ಯಕ್ತಿಗಳ ನಂಬಿಕೆಯನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ನಂಬಿಕೆಯ ವಿಚಾರಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ತಪ್ಪು, ಹಾಗೆ ಮಾಡಬಾರದು ಎಂದು ಹೇಳುತ್ತೇನೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement