ದೆಹಲಿ ವಿಧಾನಸಭೆ ಚುನಾವಣೆ: ಸೋತುಹೋದ ಎಎಪಿ ಘಟನಾಘಟಿ ನಾಯಕರು ಇವರು…

ನವದೆಹಲಿ: ದೆಹಲಿಯಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದ್ದು, ಒಟ್ಟು 70 ವಿದಾನಸಭಾ ಕ್ಷೇತ್ರಗಳಲ್ಲಿ 48ರಲ್ಲಿ ಬಿಜೆಪಿ ಜಯಗಳಿಸಿದೆ. ಕಳೆದ ಬಾರಿ 62 ಸ್ಥಾನಗಳಲ್ಲಿ ಜಯಗಳಿಸಿದ್ದು ಎಎಪಿ ಈ ಬಾರಿ ಕೇವಲ 22 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮುಗ್ಗರಿಸಿದೆ.
ಅರವಿಂದ ಕೇಜ್ರಿವಾಲ್‌ ಸೇರಿದಂತೆ ಎಎಪಿಯ ಘಟಾನುಘಟಿ ನಾಯಕರು ಸೋತುಹೋಗಿದ್ದಾರೆ. ಮನೀಶ ಸಿಸೋಡಿಯಾ ಮತ್ತು ಪ್ರಮುಖ ಸಚಿವ ಸೌರಭ ಭಾರದ್ವಾಜ ಸೇರಿದಂತೆಎಎಪಿಯ ಎಂಟು ಪ್ರಮುಖ ನಾಯಕರು ಪರಾಭವಗೊಂಡಿದ್ದು, ಮುಖ್ಯಮಂತ್ರಿ ಅತಿಶಿ ಅವರು ರಮೇಶ ಬಿದುರಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಎಎಪಿಯ ಮುಖ ಉಳಿಸಿದ್ದಾರೆ.
ಸೋತ ಎಎಪಿ ಪ್ರಮುಖರು…
ಅರವಿಂದ ಕೇಜ್ರಿವಾಲ್
ಎಎಪಿ ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ನವದೆಹಲಿ ಕ್ಷೇತ್ರದಿಂದ ಚುನಾವಣೆಯಲ್ಲಿ ಸೋತಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಪರ್ವೇಶ ವರ್ಮಾ ವಿರುದ್ಧ 4,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ವರ್ಮಾ 30,088 ಮತಗಳನ್ನು ಪಡೆದರೆ, ಕೇಜ್ರಿವಾಲ್ 25,999 ಮತಗಳನ್ನು ಪಡೆದರು.
ಮನೀಶ ಸಿಸೋಡಿಯಾ
ಮಾಜಿ ಉಪ ಮುಖ್ಯಮಂತ್ರಿ ಎಎಪಿಯ ನಂ.೨ ನಾಯಕ ಮನೀಶ ಸಿಸೋಡಿಯಾ ಜಂಗ್‌ಪುರ ಕ್ಷೇತ್ರದಿಂದ ಸೋತಿದ್ದಾರೆ. ಬಿಜೆಪಿಯ ತರ್ವಿಂದರ್ ಸಿಂಗ್ ಮರ್ವಾ ಅವರು ಸಿಸೋಡಿಯಾ ವಿರುದ್ಧ 675 ಮತಗಳ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸಿಸೋಡಿಯಾ 38,184 ಮತಗಳನ್ನು ಪಡೆದರೆ, ಮಾರ್ವಾ 38,859 ಮತಗಳನ್ನು ಪಡೆದರು.
ಆದರೆ, ಸಿಸೋಡಿಯಾ ಅವರೇ ಸೋಲು ಒಪ್ಪಿಕೊಂಡಿದ್ದರು. “ನಾನು ವಿಜೇತ ಅಭ್ಯರ್ಥಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಅವರು ಜಂಗ್ಪುರದ ಜನರ ಪ್ರಗತಿ ಮತ್ತು ಕಲ್ಯಾಣದತ್ತ ಗಮನ ಹರಿಸುತ್ತಾರೆ ಎಂದು ಭಾವಿಸುತ್ತೇನೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಛತ್ತೀಸ್‌ಗಡದಲ್ಲಿ 3 ತಿಂಗಳ ಪಡಿತರ ಒಂದೇ ಬಾರಿಗೆ ವಿತರಣೆ ; ಗೇಟ್‌ ಮುರಿದು ಒಳ ನುಗ್ಗಿದ ಜನ ಸಮೂಹ...!

ಸತ್ಯೇಂದ್ರ ಜೈನ
ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ ಅವರು ಶಕುರ್ ಬಸ್ತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕರ್ನೈಲ್ ಸಿಂಗ್ ವಿರುದ್ಧ ಸೋತಿದ್ದಾರೆ. ಬಿಜೆಪಿ ಅಭ್ಯರ್ಥಿಯು ಸತ್ಯೇಂದ್ರ ಜೈನ್‌ ವಿರುದ್ಧ 20,998 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ್ದ ಜೈನ್ ಅವರಿಗೆ ಈ ಬಾರಿ ಕ್ಷೇತ್ರದ ಮತದಾರರು ಆಘಾತ ನೀಡಿದ್ದಾರೆ.
ಸೌರಭ ಭಾರದ್ವಾಜ
ಎಎಪಿಯ ದೆಹಲಿ ಸಚಿವ ಹಾಗೂ ಎಎಪಿಯ ಪ್ರಮುಖ ನಾಯಕ ಸೌರಭ ಭಾರದ್ವಾಜ ಅವರು ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಇಲ್ಲಿಂದ ಗೆದ್ದಿದ್ದ ಭಾರದ್ವಾಜ್ ಅವರು ಶಿಖಾ ರಾಯ್‌ ವಿರುದ್ಧ ಸೋಲನುಭವಿಸಿದರು.
ಭಾರತೀಯ ಜನತಾ ಪಕ್ಷದ ಶಿಖಾ ರಾಯ್‌ ರೈ 3,188 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅವಧ್ ಓಜಾ
ಇತ್ತೀಚೆಗಷ್ಟೇ ಎಎಪಿಗೆ ಸೇರ್ಪಡೆಗೊಂಡ ಐಎಎಸ್‌ ಪರೀಕ್ಷೆಯ ಜನಪ್ರಿಯ ತರಬೇತುದಾರ ಅವಧ್ ಓಜಾ ಅವರು ಪಟ್ಪರ್ಗಂಜ್ ಕ್ಷೇತ್ರದಲ್ಲಿ ಸೋತಿದ್ದಾರೆ. ಎಎಪಿಯ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಬದಲಿಗೆ ಓಜಾ ಅವರನ್ನು ಈ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿತ್ತು.
ಪಟ್ಪರ್ಗಂಜ್ ಓಜಾಗೆ ‘ಸುರಕ್ಷಿತ ಸ್ಥಾನ’ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು. ಆದಾಗ್ಯೂ, ಫಲಿತಾಂಶಗಳು ಎಎಪಿಗೆ ಆಘಾತ ತಂದಿದೆ – ಬಿಜೆಪಿಯ ರವೀಂದರ್ ಸಿಂಗ್ ನೇಗಿ 28,072 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸೋಮನಾಥ ಭಾರ್ತಿ
ಎಎಪಿ ನಾಯಕ ಹಾಗೂ ಮಾಜಿ ಸಚಿವ ಸೋಮನಾಥ ಭಾರ್ತಿ ಮಾಳವೀಯ ನಗರ ಕ್ಷೇತ್ರದಲ್ಲಿ ಸೋತಿದ್ದಾರೆ. ಅವರು ಬಿಜೆಪಿಯ ಸತೀಶ ಉಪಾಧ್ಯಾಯ ಮತ್ತು ಕಾಂಗ್ರೆಸ್‌ನ ಜಿತೇಂದರ್ ಕುಮಾರ್ ಕೊಚಾರ್ ವಿರುದ್ಧ ಸ್ಪರ್ಧಿಸಿದ್ದರು. ಯೂಟ್ಯೂಬರ್ ನೇತಾ ಎಂದೇ ಖ್ಯಾತರಾಗಿರುವ ಸ್ವತಂತ್ರ ಅಭ್ಯರ್ಥಿ ಮೇಘನಾದ್ ಕೂಡ ಕಣದಲ್ಲಿದ್ದರು.
ಭಾರ್ತಿ ಅವರು ಬಿಜೆಪಿಯ ಸತೀಶ ಉಪಾಧ್ಯಾಯ ಅವರ ವಿರುದ್ಧ 2,000 ಮತಗಳಿಂದ ಸೋತರು. 2020 ರ ಚುನಾವಣೆಯಲ್ಲಿ, ಭಾರ್ತಿ ಅವರು ಬಿಜೆಪಿಯ ಶೈಲೇಂದರ್ ಸಿಂಗ್ ಅವರನ್ನು 18,144 ಮತಗಳ ಅಂತರದಿಂದ ಸೋಲಿಸಿದ್ದರು.
ದುರ್ಗೇಶ ಪಾಠಕ್‌
ಎಎಪಿಯ ಮತ್ತೊಬ್ಬ ಪ್ರಮುಖ ನಾಯಕ ದುರ್ಗೇಶ ಪಾಠಕ್‌ ಅವರು ಸಹ ಪರಾಭವಗೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಉಮಂಗ್ ಬಜಾಜ್ ವಿರುದ್ಧ ಪರಾಭವಗೊಂಡಿದ್ದಾರೆ. ಪಾಠಕ್ 2022 ರಲ್ಲಿ ಉಪಚುನಾವಣೆಯಲ್ಲಿ ಈ ಸ್ಥಾನದಲ್ಲಿ ಜಯಗಳಿಸಿದ್ದರು. ಅವರು ಈ ಬಾರಿ ಮತ್ತೆ ಸ್ಪರ್ಧಿಸಿದ್ದರು, ಆದರೆ ಈ ಬಾರಿ ಸೋತರು. ಉಮಂಗ್ ಬಜಾಜ್ 49811 ಮತಗಳನ್ನು ಪಡೆದರೆ ದುರ್ಗೇಶ ಪಾಠಕ್ 43756 ಮತಗಳನ್ನು ಪಡೆದರು.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement