ಹಾವೇರಿ : ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಆತನ ಮೃತದೇಹವನ್ನು ಊರಿಗೆ ಕರೆತರುವ ಹಾದಿಯಲ್ಲಿ ಆತ ಬದುಕಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ಈ ಘಟನೆ ನಡೆದಿದ್ದು, ಆಂಬುಲೆನ್ಸ್ನಲ್ಲಿ ದೇಹದ ಪಕ್ಕದಲ್ಲೇ ಕುಳಿತು ಗೋಳಾಡುತ್ತಿದ್ದ ಪತ್ನಿ, ಡಾಬಾ ಬಂತು ನೋಡು ಊಟ ಮಾಡುತ್ತೀಯಾ?’ ಎಂದು ಹೇಳಿ ಕಣ್ಣೀರಿಟ್ಟಿದ್ದಾಳೆ. ಈ ವೇಳೆ ಮೃತ ಗಂಡ ಉಸಿರಾಡಿದ್ದು ಗಮನಕ್ಕೆ ಬಂದಿದೆ. ಈಗ ಈತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
45 ವರ್ಷದ ಬಿಷ್ಣಪ್ಪ ಅಶೋಕ ಗುಡಿಮನಿ ಅಲಿಯಾಸ್ ಮಾಸ್ತರ್ ಸತ್ತು ಬದುಕಿದ ವ್ಯಕ್ತಿ. ಬಿಷ್ಣಪ್ಪ ಬಂಕಾಪುರದ ಮಂಜುನಾಥ ನಗರದ ನಿವಾಸಿ.
ಮೂರ್ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಧಾರವಾಡ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆತನಿಗೆ ಉಸಿರು ಇಲ್ಲದೇ ಇರುವ ಲಕ್ಷಣ ಕಂಡುಬಂದ ನಂತರ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ ಆತನ ದೇಹವವನ್ನು ಬಂಕಾಪುರಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಬಂಕಾಪುರ ಹತ್ತಿರ ಬರುತ್ತಿದ್ದಂತೆ ಆತನ ದೇಹದ ಪಕ್ಕದಲ್ಲಿದ್ದ ಪತ್ನಿ “ಡಾಬಾ ಬಂತು ನೋಡು ಊಟ ಮಾಡುತ್ತೀಯಾ?’ ಎಂದು ಗೋಳಾಡಿದಲು. ಆಗ ಆತ ಉಸಿರಾಡಿದ್ದು ಅವರ ಗಮನಕ್ಕೆ ಬಂದಿದೆ.
ತಕ್ಷಣವೇ ಪತ್ನಿ ಹಾಗೂ ಸಂಬಂಧಿಕರು ಬಿಷ್ಣಪ್ಪನನ್ನು ಶಿಗ್ಗಾಂವಿ ಆಸ್ಪತ್ರೆಗೆ ಒಯ್ದಿದ್ದಾರೆ. ವೈದ್ಯರು ತಪಾಸಣೆ ಮಾಡಿದಾಗ ವ್ಯಕ್ತಿ ಬದುಕಿರುವುದನ್ನು ಅವರು ದೃಢಪಡಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಅದೇ ಅಂಬುಲೆನ್ಸ್ನಲ್ಲಿಯೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ವೈದ್ಯರು ಕಳುಹಿಸಿಕೊಟ್ಟಿದ್ದಾರೆ. ಸದ್ಯ ಕಿಮ್ಸ್ ನ ತುರ್ತು ಚಿಕಿತ್ಸಾ ಘಟಕದಲ್ಲಿ ಈತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಏತನ್ಮಧ್ಯೆ ಬಂದ ಮಾಹಿತಿಯ ಮೇರೆಗೆ ಊರಿನಲ್ಲಿ ಅವರ ಅಂತ್ಯಸಂಸ್ಕಾರಕ್ಕಾಗಿ ಕುಟುಂಬಸ್ಥರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಅವರ ಸ್ನೇಹಿತರು ಶೋಕದ ಬ್ಯಾನರ್ಗಳನ್ನು ದಾರಿಯುದ್ದಕ್ಕೂ ಹಾಕಿದ್ದರು. ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿಯೂ ಸತ್ತ ಸುದ್ದಿ ಪ್ರಚಾರವಾಗಿತ್ತು. ಈಗ ಬಂಕಾಪುರ ಪಟ್ಟಣದಲ್ಲಿ ಹಾಕಲಾಗಿದ್ದ ಬ್ಯಾನರ್ಗಳನ್ನು ತೆಗೆಯಲಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಬಿಷ್ಣಪ್ಪಗೆ ಚಿಕಿತ್ಸೆ ಮುಂದುವರಿದಿದೆ..
ನಿಮ್ಮ ಕಾಮೆಂಟ್ ಬರೆಯಿರಿ