ನವದೆಹಲಿ: ಮಂಗಳವಾರ ನಿವೃತ್ತಿ ಹೊಂದಿದ ರಾಜೀವಕುಮಾರ ಅವರ ಬದಲಿಗೆ ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕಗೊಂಡಿದ್ದ ಜ್ಞಾನೇಶಕುಮಾರ ಬುಧವಾರ ಅಧಿಕಾರ ವಹಿಸಿಕೊಂಡರು.
ಹರಿಯಾಣ ಕೇಡರ್ನ ಮಾಜಿ ಐಎಎಸ್ ಅಧಿಕಾರಿ ವಿವೇಕ ಸಿಂಗ್ ಜೋಶಿ ಅವರು ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.
ಮಾರ್ಚ್ 2024 ರಿಂದ ಚುನಾವಣಾ ಆಯುಕ್ತರಾಗಿದ್ದ ಜ್ಞಾನೇಶಕುಮಾರ ಅವರಿಗೆ ಸೋಮವಾರ ಮುಖ್ಯ ಚುನಾವಣಾ ಆಯುಕ್ತರಾಗಿ ಬಡ್ತಿ ನೀಡಲಾಗಿದೆ.
ಕೇರಳ ಕೇಡರ್ನ 1988-ಬ್ಯಾಚ್ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ (IAS) ಅಧಿಕಾರಿ, 61 ವರ್ಷದ ಜ್ಞಾನೇಶಕುಮಾರ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ಉನ್ನತ ಮತ್ತು ಸೂಕ್ಷ್ಮ ಸ್ಥಾನಗಳನ್ನು ನಿರ್ವಹಿಸಿದ್ದಾರೆ.
ಕಳೆದ ವರ್ಷ ಚುನಾವಣಾ ಆಯೋಗದ ಆಯುಕ್ತರಾಗಿ ನೇಮಕವಾಗುವ ಮೊದಲು, ಅವರು ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತರಾದರು.
ಜ್ಞಾನೇಶಕುಮಾರ ಅವರ “ತರಾತುರಿ” ನೇಮಕ “ಸಂವಿಧಾನದ ಮೂಲ ಮನೋಭಾವ”ದ ಉಲ್ಲಂಘನೆ ಮತ್ತು “ನ್ಯಾಯಾಂಗ ನಿಂದನೆ” ಎಂದು ಕಾಂಗ್ರೆಸ್ ಟೀಕಿಸಿದೆ.
2023 ರ ಕಾನೂನಿನಡಿಯಲ್ಲಿ ಸಿಇಸಿ ಮತ್ತು ಚುನಾವಣಾ ಆಯುಕ್ತರ (ಇಸಿ) ನೇಮಕಾತಿಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸಲಿದೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಮತ್ತು 2026ರಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡು ಚುನಾವಣೆಗಳು ಸೇರಿದಂತೆ ನಿರ್ಣಾಯಕ ಚುನಾವಣೆಗಳಿಗೆ ಮುನ್ನ ಜ್ಞಾನೇಶಕುಮಾರ ಅವರ ನೇಮಕವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ