ಬೆಳಗಾವಿ: ತನಗೆ ಮರಾಠಿಯಲ್ಲಿ ಮಾತನಾಡಲು ಬರುವುದಿಲ್ಲ, ಕನ್ನಡದಲ್ಲಿ ಹೇಳಿ ಎಂದಿದ್ದಕ್ಕೆ ಜನರನ್ನು ಕರೆಸಿ ರಾಜ್ಯ ಸಾರಿಗೆ ಸಂಸ್ಥೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಬಾಳೆಕುಂದ್ರಿ ಕೆ.ಎಚ್.ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಬಸ್ ಕಂಡಕ್ಟರ್ ಮಹದೇವ ಹಲ್ಲೆಗೊಳಗಾದವರು. ಇವರಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಡುಗಿಯೊಬ್ಬಳು ಹುಡುಗನ ಜತೆ ಕುಳಿತಿದ್ದು, ಎರಡು ಟಿಕೆಟ್ ಕೇಳಿದ್ದರು. ಕಂಡಕ್ಟರ್ ಮಹದೇವಗೆ ಟಿಕೆಟ್ ಕೊಡುವಂತೆ ಯುವತಿ ಮರಾಠಿಯಲ್ಲಿ ಹೇಳಿದ್ದಾಳೆ. ಯುವತಿ ಜೊತೆ ಯುವಕ ಪ್ರಯಾಣ ಮಾಡುತ್ತಿದ್ದರಿಂದ 2 ಟಿಕೆಟ್ ಕೇಳಿದ್ದಳು. ಅಲ್ಲದೆ, ಫ್ರೀ ಟಿಕೆಟ್ ಮಹಿಳೆಯರಿಗೆ ಮಾತ್ರ, ಹುಡುಗನಿಗೆ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಕಂಡಕ್ಟರ್ ಹೇಳಿದ್ದು, ಆಗ ಮರಾಠಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಆಗ, ನನಗೆ ಮರಾಠಿ ಅರ್ಥವಾಗುವುದಿಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಕಂಡಕ್ಟರ್ ಮಹದೇವ ಹೇಳಿದ್ದಾರೆ.
ಇದಕ್ಕೆ ಕೋಪಗೊಂಡ ಯುವಕ ಜನರನ್ನು ಕರೆಯಿಸಿ, ಬಸ್ ತಡೆದು ಮಹದೇವ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಮಹದೇವ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಡಿಸಿಪಿ ರೋಹನ್ ಜಗದೀಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಸ್ ನಿರ್ವಾಹಕ ಮಹದೇವ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ