ಪಾಲಕರು ತಮ್ಮ ಮಕ್ಕಳನ್ನು ಬೆಳೆಸಲು ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಅವರು ತಮ್ಮ ಮಕ್ಕಳ ಜೀವನದುದ್ದಕ್ಕೂ ಅವರ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಾರೆ, ಅವರ ಆಸೆ-ಆಕಾಂಕ್ಷೆಗಳನ್ನು ಈಡೇರಿಸುವುದರಲ್ಲಿ ತೃಪ್ತಿಯನ್ನು ಕಂಡುಕೊಳ್ಳುತ್ತಾರೆ.
ಆದರೆ, ಇಲ್ಲಿನ ಪ್ರಕರಣದಲ್ಲಿ ತನ್ನ ಮಕ್ಕಳನ್ನು ಬೆಳೆಸಲು ತನ್ನ ಜೀವನವನ್ನು ಮುಡಿಪಾಗಿಟ್ಟ ತಂದೆ ತನ್ನ ವೃದ್ಧಾಪ್ಯದಲ್ಲಿ ಮಕ್ಕಳಿಂದ ಪರಿತ್ಯಕ್ತನಾಗಿದ್ದು, ಮುಂಬೈನ ಬೀದಿಗಳಲ್ಲಿ ಅಸಾಯಕರಾಗಿ ಬದುಕುತ್ತಿರುವುದು ಕಂಡುಬಂದಿದೆ. ಮುಂಬೈನ ಧಾರಾವಿ ಬಳಿಯ ಬೀದಿಯಲ್ಲಿ ವೃದ್ಧರೊಬ್ಬರು ಜೀವನಾಧಾರವಿಲ್ಲದೆ ಅಸಹಾಯಕರಾಗಿ ಬಿದ್ದಿರುವುದನ್ನು ಗಮನಿಸಲಾಯಿತು.
ತನಗೆ ಇಬ್ಬರು ಗಂಡುಮಕ್ಕಳಿದ್ದರೂ ತನ್ನನ್ನು ರಸ್ತೆಯಲ್ಲೇ ಬಿಟ್ಟು ಹೋಗಿದ್ದಾರೆ ಎಂದು ವೃದ್ಧ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಒಬ್ಬ ಮಗ ಕಳೆದ ನಾಲ್ಕು ವರ್ಷಗಳಿಂದ ಲಂಡನ್ನಲ್ಲಿ ನೆಲೆಸಿದ್ದರೆ, ಇನ್ನೊಬ್ಬರು ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಇಬ್ಬರೂ ತನ್ನನ್ನು ನೋಡಿಕೊಳ್ಳಲು ನಿರಾಕರಿಸಿದ್ದರಿಂದ ತನಗೆ ಬೀದಿಗಳಲ್ಲಿ ವಾಸಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಅದೃಷ್ಟವಶಾತ್, ಈ ಬೀದಿಯಲ್ಲಿ ಅಸಹಾಯಕಾರಿ ಬಿದ್ದಿದ್ದ ವಯೋವೃದ್ಧ ಎನ್ಜಿಒ ಒಂದರ ಕಣ್ಣಿಗೆ ಬಿದ್ದ ನಂತರ ಅವರ ಪ್ರಕರಣ ಬೆಳಕಿಗೆ ಬಂತು. ಈಗ ಎನ್ಜಿಒ ಈ ವೃದ್ಧನ ಆರೈಕೆಯ ಜವಾಬ್ದಾರಿ ತೆಗೆದುಕೊಂಡಿದೆ.
ತರುಣ ಮಿಶ್ರಾ ಎಂಬವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ದುರ್ಬಲ, ವಯಸ್ಸಾದ ವ್ಯಕ್ತಿಯೊಬ್ಬರು ಬೀದಿಯಲ್ಲಿ ಮಲಗಿರುವುದು ಕಂಡುಬರುತ್ತದೆ. ಹಾಗೂ ಅವರು ಅಸ್ವಸ್ಥರಾಗಿದ್ದಾರೆ. ಅವರು ಎನ್ಜಿಒ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ, ಹೊಸ ಬಟ್ಟೆ ಕೊಡಿಸಿದೆ. ಹಾಗೂ ವೃದ್ಧನ ಆರೈಕೆಯ ಜವಾಬ್ದಾರಿಯನ್ನು ಹೊತ್ತಿದೆ.
ತನ್ನ ಜೀವನದ ಮುಸ್ಸಂಜೆಯಲ್ಲಿ ತನ್ನ ಮಕ್ಕಳಿಂದಲೇ ಪರಿತ್ಯಕ್ತನಾದ ವೃದ್ಧನ ಅವಸ್ಥೆಯನ್ನು ನೋಡಿದ ಮೇಲೆ ಅವರ ಸಹಾಯಕ್ಕೆ ಬಂದ ಎನ್ಜಿಒಗೆ ಕೃತಜ್ಞತೆ ಮಹಾಪೂರವೇ ಹರಿದುಬಂತು. ತಂದೆಗೆ ಇಂತಹ ದೌರ್ಜನ್ಯ ಎಸಗುವವರು ತಮ್ಮ ನಂತರದ ಜೀವನದಲ್ಲಿ ತಮ್ಮ ಸ್ವಂತ ಮಕ್ಕಳಿಂದಲೂ ಅದೇ ಗತಿಯನ್ನು ಎದುರಿಸಬೇಕಾಗುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ