ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಸ್ವರ್ಣ ವಲ್ಲೀ ಕೃಷಿ ಪ್ರತಿಷ್ಠಾನದ ಸಹಯೋಗದಲ್ಲಿ ಶ್ರೀ ಲಕ್ಷ್ಮಿನೃಸಿಂಹ ರಥೋತ್ಸವದ ಸಂದರ್ಭದಲ್ಲಿ 16ನೇ ವರ್ಷದ ಕೃಷಿ ಜಯಂತಿ ಯನ್ನು ಮೇ 10 ಮತ್ತು 11ರಂದು ಎರಡು ದಿನಗಳ ಕಾಲ ನಡೆಸ ಲಾಗುವುದು ಎಂದು ಅಧ್ಯಕ್ಷ ವಿ.ಎನ್. ಹೆಗಡೆ ಹೇಳಿದರು.
ಶನಿವಾರ ನಗರದ ಯೋಗ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವ ಈ ಕಾಲಘಟ್ಟದಲ್ಲಿ ಕೃಷಿ ಕ್ಷೇತ್ರಕ್ಕೆ ಪುನಶ್ವೇತನ ಕೊಡುವ ನಿಟ್ಟಿನಲ್ಲಿ ಅನ್ನದಾತಾ ಸುಖೀಭವ ಎನ್ನುವ ಉದ್ದೇಶದೊಂದಿಗೆ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ಶ್ರೀ ಆನಂದಭೋದೆಂದ್ರ ಸರಸ್ವತೀ ಸ್ವಾಮೀಜಿ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಕೃಷಿ ಜಯಂತಿ ಜಾಗೃತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೇ 6 ರಂದು ಮಾರಕ ಎಲೆ ಚುಕ್ಕಿ ರೋಗದ ಕುರಿತು ವಿಶೇಷ ಸಂವಾದ ಕಾರ್ಯಕ್ರಮವನ್ನು ಶಿರಸಿಯ ಟಿಎಂಸ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಘಟ್ಟದ ಮೇಲಿನ ಸೇವಾ ಸಹಕಾರಿ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ರೈತರ ಸಹಭಾಗಿತ್ವದಲ್ಲಿ ನಡೆಯುವ ಸಂವಾದ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ವಹಿಸಲಿದ್ದಾರೆ.
ಅಭ್ಯಾಗತರಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ.ಪಾಟೀಲ, ಶಾಸಕ ಭೀಮಣ್ಣ ನಾಯ್ಕ ಆಗಮಿಸಲಿದ್ದಾರೆ. ಟಿಎಸ್ ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗೂ ಟಿಎಂಎಸ್ ನ ಅಧ್ಯಕ್ಷ ಜಿ ಟಿ ಹೆಗಡೆ ತಟ್ಟಿಸರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮೇ 10ರಿಂದ ಸೋಂದಾ ಸ್ವರ್ಣವಲ್ಲೀ ಮಠದ ಸುಧರ್ಮಾ ಸಭಾಂಗಣದಲ್ಲಿ ನಡೆಯಲಿರುವ ಕೃಷಿ ಜಯಂತಿಯನ್ನು ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ನಂದಭೋದೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಚಂದ್ರಶೇಖರ ಜೋಶಿ ಅವರು ಸ್ವರ್ಣವಲ್ಲೀ ಪ್ರಭಾ ಕೃಷಿ ವಿಶೇಷಾಂಕ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಪಾಲ್ಗೊಳ್ಳಲಿದ್ದಾರೆ.
ಮೇ 10 ರ ಸಂಜೆ 4 ಗಂಟೆಗೆ ಬಾಗಲಕೋಟ ತೋಟಗಾರಿಕೆ ವಿ.ವಿಯ ನಿವೃತ್ತ ವಿಸ್ತರಣಾ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಹೆಗಡೆ ಅಧ್ಯಕ್ಷತೆಯಲ್ಲಿ ” ನಮ್ಮ ಭೂಮಿ ನಮ್ಮ- ಮಣ್ಣು ಎಂಬ ವಿಷಯದ ಕುರಿತು ಗೋಷ್ಠಿ ನಡೆಯಲಿದೆ. ಕಾಸರಗೋಡಿನ ಸಿ ಪಿ ಸಿ ಆರ್ ಐ ನ ಪ್ರಧಾನ ವಿಜ್ಞಾನಿಗಳಾದ ಡಾ.ವಿನಾಯಕ ಹೆಗಡೆ ಹಾಗೂ ಡಾ. ರವಿ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮೇ 11ರ ಬೆಳಗ್ಗೆ 10: 30 ಗಂಟೆಗೆ “ಸೊಪ್ಪಿನ ಬೆಟ್ಟ ಸಂರಕ್ಷಣೆ ಹಾಗೂ ಅಭಿವೃದ್ಧಿ ” ವಿಷಯವಾಗಿ ಎರಡನೇ ಗೋಷ್ಠಿ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ನ್ಯಾಯವಾದಿಗಳಾದ ಆರ್ ಕೆ ಭಟ್ ಯಲ್ಲಾಪುರ ಮತ್ತು ಪರಿಸರವಾದಿ ನರೇಂದ್ರ ಹೆಗಡೆ ಹೊಂಡಗಾಶಿ ಭಾಗವಹಿಸಲಿದ್ದಾರೆ. ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಜಿ ಆರ್ ಹೆಗಡೆ ಬೆಳ್ಳಿಕೇರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ವಿವಿಧ ಸ್ಪರ್ಧೆಗಳು :
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಕಾರದಲ್ಲಿ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲಾ ಮಟ್ಟದಲ್ಲಿ ಆನ್ಲೈನ್ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕೃಷಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದ್ದು ಮೇ 4 ರಂದು ಬೆಳಿಗ್ಗೆ 11 ಗಂಟೆಗೆ ಸ್ವರ್ಣವಲ್ಲಿಯಲ್ಲಿ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಉದ್ಘಾಟನೆಯಾಗಲಿದೆ. ಇದರಲ್ಲಿ ಪಾಲ್ಗೊಂಡ ಮಕ್ಕಳಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಅಂಕಗಳಿಸಿದ ಹತ್ತು ವಿದ್ಯಾರ್ಥಿಗಳನ್ನು ನೇರ ಸುತ್ತಿಗೆ ಆಯ್ಕೆ ಮಾಡಿ ಮೇ 10ರಂದು ಸ್ವರ್ಣವಲ್ಲಿಯಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಸಲಾಗುತ್ತದೆ. ಅಂಗನವಾಡಿ ಮಕ್ಕಳಿಗೆ ತರಕಾರಿ ಗುರುತಿಸುವ ಸ್ಪರ್ಧೆ, 1ರಿಂದ 4ನೇ ತರಗತಿ ಮಕ್ಕಳಿಗೆ ಕೃಷಿ ಆಧಾರಿತ ಚಿತ್ರಕಲಾ ಸ್ಪರ್ಧೆ, 5 ರಿಂದ 7ನೇ ವರ್ಗದ ಮಕ್ಕಳಿಗೆ ಸಸ್ಯ ಎಲೆಗಳನ್ನು ಗುರುತಿಸುವ ಸ್ಪರ್ಧೆ, ಕೇಂದ್ರ ಮಾತೃಮಂಡಳದವರ ಸಹಕಾರದಲ್ಲಿ ಮಾತೆಯರಿಗಾಗಿ ಭಗವದ್ಗೀತೆ 9ನೇ ಅಧ್ಯಾಯದ ಅರ್ಥ ಸಹಿತ ಶ್ಲೋಕಗಳ ಸ್ಪರ್ಧೆ ಹಾಗೂ ಹೂವಿನ ರಂಗೋಲಿ ಸ್ಪರ್ಧೆ, ಹೂಬತ್ತಿ ಹೊಸೆ ಯುವ ಸ್ಪರ್ಧೆ ನಡೆಯಲಿದೆ.ಮೇ 11ರಂದು ಬೆಳಗ್ಗೆ 10 ಗಂಟೆಯಿಂದ ಸೋಂದಾದ ಶ್ರೀರಾಜರಾಜೇಶ್ವರಿ ಯುವಕ ಮಂಡಲ ಹಾಗೂ ಶ್ರೀ ರಾಜರಾಜೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಹಕಾರದಲ್ಲಿ ಪುರುಷರಿಗೆ ಮಾತೆಯರಿಗೆ ಕೃಷಿ ಪದ ಬಂಧ ಸ್ಪರ್ಧೆ, ಚಾಲಿ ಸುಲಿಯುವ ಸ್ಪರ್ಧೆ, ಪುರುಷರಿಗಾಗಿ ತೆಂಗಿನಕಾಯಿ ಸುಲಿಯುವಸ್ಪರ್ಧೆ, ಹಾಗೂ ಶಂಖನಾದ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುರೇಶ ಹಕ್ಕಿಮನೆ, ಆರ್.ಎನ್. ಹೆಗಡೆ ಉಪಸ್ಥಿತರಿದ್ದರು.
ಸ್ವರ್ಣವಲ್ಲಿ ಕೃಷಿ ಪ್ರಶಸ್ತಿ ಪುರಸ್ಕೃತರು
ಉತ್ತಮ ಕೃಷಿಕ(ಕೃಷಿ ಕಂಠೀರವ)- ಮಹೇಶ ಚಂದ್ರಶೇಖರ ಹೆಗಡೆ ಅರಗಿನಮನೆ, ಸಾಧಕ ಕೃಷಿ ಮಹಿಳೆ-ವೀಣಾ ಮಹಾಬಲೇಶ್ವರ ಹೆಗಡೆ ಹೆಬ್ಳೆಮನೆ, ಉತ್ತಮ ಕೃಷಿ ಅವಿಭಕ್ತ ಕುಟುಂಬ-ಸುಬ್ರಾಯ ವಾಸುದೇವ ದಾನಗೇರಿ, ಸಾಧಕ ಕೃಷಿ ಪೂರಕ ಸಂಸ್ಥೆ- ಪ್ರಗತಿ ಮಿತ್ರ ರೈತ ಉತ್ಪಾದಕ ಕಂಪನಿ, ಬಾಳೆಗದ್ದೆ, ಸಾಧಕ ಕೃಷಿ ಕುಶಲಕರ್ಮಿ-ಗಣಪತಿ ಭೈರವೇಶ್ವರ ಭಟ್ಟ ಕಲ್ಲೇಮನೆ, ಅಚವೆ, ಮಹಾಬಲೇಶ್ವರ ಅನಂತ ಹೆಗಡೆ ಮೆಣಸೇಮನೆ, ವಾನಳ್ಳಿ, ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿಪುರಸ್ಕೃತರು ಪ್ರಥಮ- ಗಣಪತಿ ವೆಂಕಟರಮಣ ಹೆಗಡೆ ಎಮ್ಮೆನಹೋಂಡಾ, ದ್ವಿತೀಯ- ಬಿ.ಜಿ.ಹೆಗಡೆ ಹೆಗಡೆ ಮತ್ತು ಎನ್.ಜಿ.ಹೆಗಡೆ ಗೇರಾಳ, ದ್ವಿತೀಯ-ಸುಬ್ರಾಯ ಗಜಾನನ ಹೆಗಡೆ ಊರತೋಟ
ನಿಮ್ಮ ಕಾಮೆಂಟ್ ಬರೆಯಿರಿ