ಜನಾರ್ದನ ರೆಡ್ಡಿ ಬಂಧನ, ಚಂಚಲಗೂಡ ಜೈಲಿಗೆ ಶಿಫ್ಟ್‌

ಹೈದರಾಬಾದ್‌: ದೇಶದ ಗಮನ ಸೆಳೆದಿದ್ದ ಆಂಧ್ರಪ್ರದೇಶದ ಓಬಳಾಪುರಂ ಮೈನಿಂಗ್‌ ಕಂಪನಿಯ (ಒಎಂಸಿ) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಗಂಗಾವತಿಯ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಬೆನ್ನಲ್ಲೆ ರೆಡ್ಡಿ ಅವರನ್ನ ಬಂಧಿಸಲಾಗಿದ್ದು, ಹೈದರಾಬಾದ್‌ನ ಚಂಚಲಗೂಡ ಜೈಲಿಗೆ ಶಿಫ್ಟ್‌ ಮಾಡಲಾಗಿದೆ.
ಮಂಗಳವಾರ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ಜನಾರ್ದನ ರೆಡ್ಡಿ ಅವರಿಗೆ ಏಳು ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡ ಹಾಗೂ ಒಎಂಸಿ ಗಣಿ ಕಂಪನಿಗೆ 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ರೆಡ್ಡಿ ಸೇರಿದಂತೆ ನಾಲ್ವರು ಅಪರಾಧಿಗಳೆಂದು ನಿರ್ಧರಿಸಿದ ನ್ಯಾಯಾಲಯ, ಭ್ರಷ್ಟಾಚಾರ ನಿಗ್ರಹ ಕಾಯಿದೆ ಹಾಗೂ ಐಪಿಸಿ ಸೆಕ್ಷನ್‌ 120 (ಬಿ), 420, 409, 468, 471 ಅಡಿಯಲ್ಲಿ ಶಿಕ್ಷೆ ಪ್ರಕಟಿಸಿದೆ.

ಹೈದರಾಬಾದ್‌ನ ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧ 13 ವರ್ಷಗಳ ಕಾಲ ವಿಚಾರಣೆ ನಡೆಸಿತ್ತು. ರೆಡ್ಡಿ ಹಾಗೂ ಒಎಂಸಿ ಕಪನಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ, ರೆಡ್ಡಿ ಆಪ್ತ ಎಂ.ಅಲಿಖಾನ್‌, ಗಣಿ ಇಲಾಖೆ ಮಾಜಿ ಅಧಿಕಾರಿ ವಿ.ಡಿ.ರಾಜಗೋಪಾಲ ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ . ಆರೋಪಿಗಳಾಗಿದ್ದ ಐಎಎಸ್‌ ಅಧಿಕಾರಿಗಳಾದ ಕೃಪಾನಂದನ್‌, ವೈ.ಶ್ರೀಲಕ್ಷ್ಮಿ ಅವರನ್ನು ಖುಲಾಸೆಗೊಳಿಸಿದೆ. ಆರೋಪಿಯಾಗಿದ್ದ ಗಣಿ ಇಲಾಖೆ ಮಾಜಿ ಸಹಾಯಕ ನಿರ್ದೇಶಕ ಆರ್‌.ಲಿಂಗಾರೆಡ್ಡಿ ವಿಚಾರಣೆ ವೇಳೆಯೇ ಮೃತಪಟ್ಟಿದ್ದರು.

ಪ್ರಮುಖ ಸುದ್ದಿ :-   ಸಚಿವೆ ಹೆಬ್ಬಾಳ್ಕರ ವಿರುದ್ಧ ಅಶ್ಲೀಲ ಪದ ಬಳಕೆ: ಬಿಜೆಪಿ ಶಾಸಕ ಸಿ ಟಿ ರವಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

ಮನವಿ ತಿರಸ್ಕರಿಸಿದ ನ್ಯಾಯಾಧೀಶರು
ತೀರ್ಪು ನೀಡುವ ವೇಳೆ ಕೋರ್ಟ್‌ನಲ್ಲಿ ಹಾಜರಿದ್ದ ಜನಾರ್ದನ ರೆಡ್ಡಿ ಅವರು ದೋಷಿ ಎಂದು ತೀರ್ಪು ಹೊರಬೀಳುತ್ತಿದ್ದಂತೆ ಕುಸಿದು ಬಿದ್ದರು. ಏಳು ವರ್ಷ ಶಿಕ್ಷೆ ಪ್ರಕಟಿಸಿದ ಬಳಿಕ ವಕೀಲರ ಮೂಲಕ ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು. ”ಈಗಾಗಲೇ ಮೂರುವರೆ ವರ್ಷ ಸೆರೆವಾಸ ಅನುಭವಿಸಿರುವೆ. ಪ್ರಕಟಿಸಿರುವ ಶಿಕ್ಷೆ ಕಡಿತಗೊಳಿಸಿ,” ಎಂದು ಮನವಿ ಮಾಡಿದರು. ಆದರೆ ಮನವಿ ತಿರಸ್ಕರಿದ ನ್ಯಾಯಾಧೀಶರು, ”ನೀವು ಮಾಡಿರುವ ಅಪರಾಧಕ್ಕೆ ಗರಿಷ್ಠ ಶಿಕ್ಷೆ ವಿಧಿಸುವ ಪ್ರಕರಣವಾಗಿದೆ. ಆದರೆ, ಸಾದಾ ಶಿಕ್ಷೆ ನೀಡಲಾಗಿದೆ. ಮೇಲಿನ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನೆ ಮಾಡಿ ” ಎಂದು ಹೇಳಿದ್ದಾರೆ.
ತಿಂಗಳ ಒಳಗೆ ಜನಾರ್ದನ ರೆಡ್ಡಿಗೆ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ. ಸಿಬಿಐ ನ್ಯಾಯಾಲಯ ನೀಡಿದ ತೀರ್ಪನ್ನು ಹೈಕೋರ್ಟ್‌ ತಡೆ ಹಿಡಿಯದಿದ್ದರೆ ಜನಾರ್ದನ ರೆಡ್ಡಿ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹಾಗೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಗುವ ಸಾಧ್ಯೆತೆಯೂ ಕಡಿಮೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement