ಕರ್ನಲ್ ಸೋಫಿಯಾ ಬಗ್ಗೆ ಸಚಿವ ವಿಜಯ ಶಾ ಹೇಳಿಕೆ | ಎಸ್ಐಟಿ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ ; ಬಂಧನಕ್ಕೆ ತಡೆ

ನವದೆಹಲಿ: ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ನಡೆಸಲಾದ ಸೇನಾ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ’ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಕುರೇಷಿ ಅವರನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರದ ಸಚಿವ ಕುವರ ವಿಜಯ ಶಾ ನೀಡಿದ ಹೇಳಿಕೆಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.
ಮಂಗಳವಾರದೊಳಗೆ ಮಧ್ಯಪ್ರದೇಶ ಕೇಡರ್‌ನ ಆದರೆ ರಾಜ್ಯದ ಹೊರಗೆ ಕಾರ್ಯ ನಿರ್ವಹಿಸುತ್ತಿರುವ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನ್ಯಾಯಮೂರ್ತಿಗಳಾದ ಸೂರ್ಯ ಕಾಂತ ಮತ್ತು ಎನ್‌.ಕೋಟೀಶ್ವರ ಸಿಂಗ್‌ ಅವರಿದ್ದ ಪೀಠ ಆದೇಶಿಸಿದೆ. ಈ ಹಿರಿಯ ಅಧಿಕಾರಿಗಳಲ್ಲಿ ಒಬ್ಬರು ಐಜಿ ಅಥವಾ ಡಿಜಿಪಿ ಶ್ರೇಣಿಯ ಅಧಿಕಾರಿ ಇರಬೇಕು ಎಂದು ಅದು ತಿಳಿಸಿದೆ.

ಇದೊಂದು ಅಗ್ನಿ ಪರೀಕ್ಷೆ ಎಂದಿರುವ ನ್ಯಾಯಾಲಯ ರಾಜ್ಯ ಸರ್ಕಾರ ಎಸ್‌ಐಟಿ ವರದಿಯನ್ನು ತನಗೆ ಸಲ್ಲಿಸಬೇಕು ಎಂದು ಸೂಚಿಸಿದೆ. ವಿಜಯ ಶಾ ಕೋರಿದ್ದ ಕ್ಷಮಾಪಣೆಯನ್ನು ತಿರಸ್ಕರಿಸಿದ ನ್ಯಾಯಾಲಯ ತನಿಖೆ ಎದುರಿಸುವಂತೆ ಸೂಚಿಸಿತು. ಕ್ಷಮಾಪಣೆ ಕೋರಲು ಅವರು ನ್ಯಾಯಾಂಗ ನಿಂದನೆ ಮಾಡಿಲ್ಲ ಎಂದ ನ್ಯಾಯಾಲಯ ಸ್ವಲ್ಪವೂ ಯೋಚಿಸದೆ ಈ ರೀತಿಯ ಹೇಳಿಕೆ ನೀಡಿದ್ದೀರಿ, ನಮಗೆ ನಿಮ್ಮ ಕ್ಷಮೆಯಾಚನೆಯ ಅಗತ್ಯವಿಲ್ಲ. ಕ್ಷಮೆಯಾಚಿಸುವುದು ಮುಂದಿನ ಕ್ರಮಗಳಿಂದ ತಪ್ಪಿಸಿಕೊಳ್ಳುವ ಯತ್ನ ಎಂದು ನ್ಯಾಯಾಲಯ ತರಾಟೆಗೆ ತೆಗದುಕೊಂಡಿತು. ಇದೇ ವೇಳೆ ಅವರನ್ನು ಬಂಧಿಸುವುದಕ್ಕೆ ತಡೆ ನೀಡಿತು.

ಪ್ರಮುಖ ಸುದ್ದಿ :-   ಪಾಕಿಸ್ತಾನದಿಂದ ಪರಮಾಣು ಬೆದರಿಕೆ ಇಲ್ಲ ; ಅಮೆರಿಕ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿಲ್ಲ : ವಿದೇಶಾಂಗ ಕಾರ್ಯದರ್ಶಿ

ಸಚಿವ ವಿಜಯ ಶಾ ಅವರ ಕೃತ್ಯಗಳು ಸಾರ್ವಜನಿಕವಾಗಿ ಬಹಿರಂಗಗೊಂಡಿದ್ದು, ಅವರು ತಮ್ಮ ಕೃತ್ಯಗಳನ್ನು ಒಪ್ಪಿಕೊಳ್ಳುವಷ್ಟು ವಿವೇಕ ತೋರಬೇಕು ಎಂದು ನ್ಯಾಯಾಲಯ ಹೇಳಿತು..
ಪಾಕಿಸ್ತಾನದ ವಿರುದ್ಧ ಭಾರತ ಇತ್ತೀಚೆಗೆ ನಡೆಸಿದ ಗಡಿಯಾಚೆಗಿನ ಸೇನಾ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ’ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸೇನಾ ಅಧಿಕಾರಿಗಳಲ್ಲಿ ಕರ್ನಲ್ ಕುರೇಷಿ ಒಬ್ಬರು. ಅವರನ್ನು ಭಯೋತ್ಪಾದಕರ ಸಹೋದರಿ ಎಂಬರ್ಥ ಬರುವ ರೀತಿಯಲ್ಲಿ ಶಾ ಹೇಳಿದ್ದರು.
ನಿಮ್ಮ ಹೇಳಿಕೆಯಿಂದ ಇಡೀ ದೇಶವೇ ನಾಚಿಕೆಪಡುತ್ತಿದೆ, ನಿಮ್ಮನ್ನು ನೀವು ಹೇಗೆ ಸುಧಾರಿಸಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ.ನಮಗೆ ಕ್ಷಮೆಯಾಚನೆ ಅಗತ್ಯವಿಲ್ಲ. ನೀವು ಏನನ್ನಾದರೂ ಮಾಡಿ ಬಂದು ನಂತರ ನ್ಯಾಯಾಲಯದ ಕ್ಷಮೆ ಕೋರುತ್ತೀರಿ. ಇದು ನಡೆದುಕೊಳ್ಳುವ ರೀತಿಯೇ ಎಂದು ಪ್ರಶ್ನಿಸಿತು.

‘ಕ್ಷಮೆಯಾಚನೆ’ ಎಂಬ ಪದಕ್ಕೆ ಸ್ವಲ್ಪ ಅರ್ಥವಿದೆ. ಕೆಲವೊಮ್ಮೆ ಜನು ತುಂಬಾ ಸೌಮ್ಯ ಭಾಷೆಯಲ್ಲಿ, ಪರಿಣಾಮಗಳಿಂದ ಹೊರಬರಲು ಬಹಳ ಕೃತಕ ರೀತಿಯ ಕ್ಷಮೆಯಾಚಿಸುತ್ತಾರೆ. ಕೆಲವೊಮ್ಮೆ ಜನ ಮೊಸಳೆ ಕಣ್ಣೀರು ಸುರಿಸುತ್ತಾರೆ. ನೀವು ಸಾರ್ವಜನಿಕ ವ್ಯಕ್ತಿ. ನೀವು ಮಾತನಾಡುವಾಗ ಸ್ವಲ್ಪ ವಿಚಾರ ಮಾಡಿ ಮಾತನಾಡಬೇಕಿತ್ತು. ನೀವು ಬಹಳ ನಿಂದನೀಯ ಭಾಷೆ ಬಳಸಿದ್ದೀರಿ. ಹೇಳಿಕೆಗಳು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಕೋರ್ಟ್‌ ಹೇಳಿತು.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಅಮೃತಸರದ ಗೋಲ್ಡನ್​ ಟೆಂಪಲ್ ಮೇಲೆ ದಾಳಿಗೆ ಯತ್ನಿಸಿದ್ದ ಪಾಕಿಸ್ತಾನ; ದಾಳಿ ವಿಫಲಗೊಳಿಸಿದ ಭಾರತೀಯ ಸೇನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement