ರೈತರಿಗೆ ಸಿಹಿ ಸುದ್ದಿ ; 14 ಬೆಳೆಗಳ ಕನಿಷ್ಠ ಬೆಂಬಲ ಹೆಚ್ಚಳಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

ನವದೆಹಲಿ: ಕೃಷಿ ಮತ್ತು ಮೂಲಸೌಕರ್ಯದ ಮೇಲೆ ಪರಿಣಾಮ ಬೀರುವ ಹಲವಾರು ಮಹತ್ವದ ಕ್ರಮಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ, ಇದರಲ್ಲಿ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳಲ್ಲಿ (MSP) ಹೆಚ್ಚಳ, ರೈತರಿಗೆ ಬಡ್ಡಿ ಸಬ್ಸಿಡಿ ಯೋಜನೆಯ ಮುಂದುವರಿಕೆ ಮತ್ತು ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಾದ್ಯಂತ ಪ್ರಮುಖ ರಸ್ತೆ ಮತ್ತು ರೈಲು ಯೋಜನೆಗಳಿಗೆ ಹಸಿರು ನಿಶಾನೆ ನೀಡಲಾಗಿದೆ.
ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (CACP) ಶಿಫಾರಸುಗಳ ಆಧಾರದ ಮೇಲೆ 2025–26 ರ ಋತುವಿನಲ್ಲಿ ಖಾರಿಫ್ ಬೆಳೆಗಳಿಗೆ ನಿಷ್ಠ ಬೆಂಬಲ ಬೆಲೆಯಲ್ಲಿ ಹೆಚ್ಚಳ ಮಾಡುವುದನ್ನು ಸಂಪುಟ ಅನುಮೋದಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಭತ್ತ, ರಾಗಿ ಸೇರಿದಂತೆ ಖಾರಿಫ್‌ ಋತುವಿನ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಅನುಮೋದನೆ ನೀಡಿದೆ.

ಸರ್ಕಾರವು ರೈತರಿಂದ ಕನಿಷ್ಠ ಇಷ್ಟು ಬೆಲೆಗೆ ಬೆಳೆ ಖರೀದಿಸುತ್ತೇವೆ ಅಂತ ಗ್ಯಾರಂಟಿ ಕೊಡುವುದನ್ನು ಕನಿಷ್ಠ ಬೆಂಬಲ ಬೆಲೆ ಎನ್ನಲಾಗುತ್ತದೆ. ಮಾರುಕಟ್ಟೆಯಲ್ಲಿ ಬೆಲೆಗಳು ಏರಿಳಿತ ಕಾಣುತ್ತವೆ. ಬೆಳೆ ಜಾಸ್ತಿ ಬಂದರೆ ಬೆಲೆ ಕಡಿಮೆಯಾಗುತ್ತದೆ. ಇದರಿಂದ ರೈತರಿಗಾಗುವ ನಷ್ಟವನ್ನು ಸರಿದೂಗಿಸಲು ಕೇಂದ್ರ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ವಿವಿಧ ಬೆಳೆಗಳಿಗೆ ಪ್ರತಿ ವರ್ಷ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗುತ್ತದೆ.
ಯಾವುದಕ್ಕೆ ಎಷ್ಟು ಬೆಲೆ?
ʼʼ2025-26ರ ಮಾರುಕಟ್ಟೆ ಋತುವಿನಲ್ಲಿ ಎ ಗ್ರೇಡ್‌ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು 69 ರೂ. ಹೆಚ್ಚಿಸಲಾಗಿದ್ದು, ಹೀಗಾಗಿ ಇದು ಕ್ವಿಂಟಾಲ್‌ಗೆ 2,389 ರೂ.ಗಳಿಗೆ ತಲುಪಿದೆ. ರಾಗಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 596 ರೂ. ಹೆಚ್ಚಿಸಲಾಗಿದೆʼʼ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ ತಿಳಿಸಿದ್ದಾರೆ.
ಗರಿಷ್ಠ ಬೆಂಬಲ ಬೆಲೆ ಏರಿಕೆ ಕಂಡ ಬೆಳೆಗಳಲ್ಲಿ, ನೈಜರ್ ಬೀಜ(ಗುರೆಳ್ಳು)ಕ್ಕೆ ಕ್ವಿಂಟಲ್‌ಗೆ ₹820 ರಷ್ಟು ಹೆಚ್ಚಳ ಮಾಡಲಾಗಿದೆ, ಹತ್ತಿ ಕ್ವಿಂಟಲ್‌ಗೆ ₹589 ಮತ್ತು ಎಳ್ಳು ಕ್ವಿಂಟಲ್‌ಗೆ ₹579 ರಷ್ಟು ಏರಿಕೆ ಮಾಡಲಾಗಿದೆ. ದ್ವಿದಳ ಧಾನ್ಯಗಳ ವಿಭಾಗದಲ್ಲಿ, ಪ್ರತಿ ಕ್ವಿಂಟಲ್‌ಗೆ ತೊಗರಿ (ಅರ್ಹಾರ್) ₹450, ಹೆಸರುಕಾಳು ₹86 ಮತ್ತು ಉದ್ದಿನ ಬೇಳೆ ₹400 ರಷ್ಟು ಏರಿಕೆಯಾಗಿದೆ. ಎಣ್ಣೆಬೀಜಗಳಲ್ಲಿ, ಶೇಂಗಾ, ಸೂರ್ಯಕಾಂತಿ ಬೀಜ ಮತ್ತು ಸೋಯಾಬೀನ್‌ಗಳ ಬೆಂಬಲ ಬೆಲೆಗಳನ್ನು ಕ್ರಮವಾಗಿ ₹480, ₹441 ಮತ್ತು ₹436 ರಷ್ಟು ಹೆಚ್ಚಿಸಲಾಗಿದೆ.

ಶೇಂಗಾಕ್ಕೆ ಪ್ರತಿ ಕ್ವಿಂಟಾಲ್‌ ಶೇ. 7.1ರಷ್ಟು ಹೆಚ್ಚಿಸಿದ್ದು, 7,263 ರೂ.ಗೆ ತಲುಪಿದ್ದರೆ, ಸೋಯಾಬೀನ್ (ಹಳದಿ) ಅನ್ನು ಶೇ. 8.9ರಷ್ಟು ಏರಿಸಿದ್ದು, 5,328 ರೂ. ಗಡಿ ದಾಟಿದೆ. ತೊಗರಿಗೆ ಶೇ. 6ರಷ್ಟು ವೃದ್ಧಿಸಿದ್ದು, ಕ್ವಿಂಟಾಲ್‌ಗೆ 8,000 ರೂ. ಆಗಿದೆ. ಉದ್ದಿನ ಬೇಳೆ ಕ್ವಿಂಟಾಲ್‌ಗೆ 7,800 ರೂ. ತಲುಪಿದ್ದು, ಇದಕ್ಕೆ ಶೇ. 5.4ರಷ್ಟು ಹೆಚ್ಚಾಗಿದೆ.
ಈ ಪೈಕಿ ರಾಗಿಗೆ ಅತಿ ಹೆಚ್ಚು ಶೇಕಡವಾರು ಕನಿಷ್ಠ ಬೆಂಬಲ ಬೆಲೆ ಸಿಕ್ಕಿದೆ. ಇದರ ಎಂಎಸ್‌ಪಿಯನ್ನು ಶೇ. 14ರಷ್ಟು ಹೆಚ್ಚಿಸಲಾಗಿದ್ದು, ಕ್ವಿಂಟಾಲ್‌ಗೆ 4,886 ರೂ. ತಲುಪಿದೆ. ಕಳೆದ ಸೀಸನ್‌ನಲ್ಲಿ ಶೇ. 11.5ರಷ್ಟು ಹೆಚ್ಚಿಸಲಾಗಿತ್ತು. ಸೂರ್ಯಕಾಂತಿ ಬೀಜದ ಎಂಎಸ್‌ಪಿ ಶೇ. 6.1ರಷ್ಟು ಹೆಚ್ಚಿಸಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 7,721 ರೂ.ಗೆ ತಲುಪಿದೆ. ಎಳ್ಳು ಬೀಜಕ್ಕೆ ಶೇ. 6.2ರಷ್ಟು ಹೆಚ್ಚಿಸಲಾಗಿದ್ದು, 9,846 ರೂ.ಗೆ, ನೈಗರ್ ಬೀಜಕ್ಕೆ ಶೇ. 9.4 ರಷ್ಟು ಹೆಚ್ಚಿಸಲಾಗಿದ್ದು, 9,537 ರೂ.ಗೆ ತಲುಪಿದೆ. ವಾಣಿಜ್ಯ ಬೆಳೆಗಳಲ್ಲಿ ಹತ್ತಿಯ ಎಂಎಸ್‌ಪಿ ಅನ್ನು ಶೇ. 8.3ರಷ್ಟು ಹೆಚ್ಚಿಸಲಾಗಿದ್ದು 7,710 ರೂ. ಮತ್ತು 8,110 ರೂ.ಗೆ ತಲುಪಿದೆ.
ಈ ಬಾರಿಯ 2.07 ಲಕ್ಷ ಕೋಟಿ ರೂ.ಗಳ ಎಂಎಸ್‌ಪಿ ನಿಧಿ ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಐಎಸ್‌ಐ ಪರ ಬೇಹುಗಾರಿಕೆ, ಪಾಕಿಸ್ತಾನಕ್ಕೆ 7 ಬಾರಿ ಭೇಟಿ : ಸರ್ಕಾರಿ ನೌಕರನ ಬಂಧನ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement