ವಿಜಯಪುರ: ಜಿಲ್ಲೆಯ ಮನಗೂಳಿ ಕೆನರಾ ಬ್ಯಾಂಕಿನಿಂದ ಕಳ್ಳರು 59 ಕೆಜಿ ಚಿನ್ನವನ್ನು ದೋಚಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಬ್ಯಾಂಕಿನಿಂದ ಸಾಲ ಪಡೆದ ಜನರು ಚಿನ್ನವನ್ನು ಠೇವಣಿ ಇಟ್ಟಿದ್ದರು ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರ್ಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
59 ಕೆಜಿ ಚಿನ್ನ ಕಳುವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತೀರ್ಮಾನಕ್ಕೆ ಬಂದ ನಂತರ ಅವರು ಘಟನೆಯ ಬಗ್ಗೆ ವಿವರಿಸಿದರು.
ಅವರ ಪ್ರಕಾರ, ಮೇ 26 ರಂದು, ಕೆನರಾ ಬ್ಯಾಂಕ್ ಮನಗೂಳಿ ಶಾಖೆಯ ವ್ಯವಸ್ಥಾಪಕರು ದೂರು ದಾಖಲಿಸಿದ್ದರು.
ಸಿಬ್ಬಂದಿ ಮೇ 23 ರಂದು ಸಂಜೆ ಬ್ಯಾಂಕ್ ಬಂದ್ ಮಾಡಿ ಬೀಗ ಹಾಕಿ ಹೋಗಿದ್ದರು. ಮೇ 24 ಮತ್ತು 25 ರಂದು (ನಾಲ್ಕನೇ ಶನಿವಾರ ಮತ್ತು ಭಾನುವಾರ) ಬ್ಯಾಂಕ್ ಗೆ ರಜೆ ಇತ್ತು. ಮೇ 26 ರಂದು, ಬ್ಯಾಂಕ್ ಸ್ವಚ್ಛತಾ ಸಿಬ್ಬಂದಿ ಬ್ಯಾಂಕಿಗೆ ಬಂದಾಗ, ಬ್ಯಾಂಕಿನ ಶಟರ್ ಬೀಗಗಳನ್ನು ಕತ್ತರಿಸಿರುವುದನ್ನು ಅವರು ಗಮನಿಸಿದರು. ತಕ್ಷಣ, ಪೊಲೀಸರಿಗೆ ಮಾಹಿತಿ ನೀಡಲಾಯಿತು.
“ತಪಾಸಣೆಯ ನಂತರ, ಕಳ್ಳರು ಬ್ಯಾಂಕಿಗೆ ನುಸುಳಿ ಲೂಟಿ ಮಾಡಿರುವುದು ಕಂಡುಬಂದಿದೆ. ಬ್ಯಾಂಕ್ ಅಧಿಕಾರಿಗಳು ಲೂಟಿ ಮಾಡಿದ ಸೊತ್ತನ್ನು ಮೌಲ್ಯಮಾಪನ ಮಾಡಿದಾಗ 59 ಕೆಜಿ ಚಿನ್ನವನ್ನು ಕಳವು ಮಾಡಲಾಗಿದೆ ಎಂದು ಕಂಡುಬಂದಿದೆ. ಚಿನ್ನವನ್ನು ಚಿನ್ನದ ಸಾಲಕ್ಕೆ ಪ್ರತಿಯಾಗಿ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿತ್ತು” ಎಂದು ನಿಂಬರ್ಗಿ ಹೇಳಿದರು. ಪ್ರಕರಣದ ತನಿಖೆಗಾಗಿ ಎಂಟು ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಮೇ 24 ಮತ್ತು 25 ರ ಮಧ್ಯರಾತ್ರಿ ಕಳ್ಳತನ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. “ತನಿಖೆ ಪ್ರಗತಿಯಲ್ಲಿದೆ. ನಾವು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ” ಎಂದು ಪೊಲೀಸ್ ಅಧಿಕಾರಿ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ