ಬೆಂಗಳೂರು: ಬುಧವಾರ (ಜೂನ್ 4) ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು, ಗುರುವಾರ ತಮ್ಮ ಸರ್ಕಾರವು ಉನ್ನತ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಶನರ್ ಮತ್ತು ಉಪ ಆಯುಕ್ತರನ್ನು ಅಮಾನತುಗೊಳಿಸಲಾಗಿದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ, ಹೆಚ್ಚುವರಿ ಆಯುಕ್ತ (ಪಶ್ಚಿಮ) ವಿಕಾಸಕುಮಾರ, ಕೇಂದ್ರ ಬೆಂಗಳೂರು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶೇಖರ ಮತ್ತು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಬಾಲಕೃಷ್ಣ ಹಾಗೂ ಕಬ್ಬನ್ಪಾರ್ಕ್ ಇನ್ಸ್ಪೆಕ್ಟರ್ ಗಿರೀಶ್.ಎ.ಕೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ದುರ್ಘಟನೆಯ ತನಿಖೆಯನ್ನು ಎರಡು ರೀತಿಯಲ್ಲಿ ತನಿಖೆಗೆ ಸರ್ಕಾರ ನಿರ್ಧರಿಸಿದೆ. ನ್ಯಾ.ಮೈಕಲ್ ಡಿ ಕುನ್ಹಾ ನೇತೃತ್ವದಲ್ಲಿ ಏಕ ಸದಸ್ಯ ಆಯೋಗದ ತನಿಖೆ ಹಾಗೂ ಸಿಐಡಿ ನೇತೃತ್ವದಲ್ಲಿ ತನಿಖೆಗೆ ನಿರ್ಧರಿಸಲಾಗಿದೆ ಎಂದರು. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಿದ್ದೇವೆ. ಮೃತಪಟ್ಟವರ ಕುಟುಂಬಗಳ ಜೊತೆಗೆ ನಮ್ಮ ಸರ್ಕಾರ ಇರಲಿದೆ. ಎಫ್ಐಆರ್ ಆಧಾರದ ಮೇಲೆ ಸಿಐಡಿ ತನಿಖೆ ನಡೆಸಲಿದೆ. 30 ದಿನದಲ್ಲಿ ನ್ಯಾಯಾಂಗ ತನಿಖೆ ಮುಗಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
18 ವರ್ಷಗಳ ಕಾಯುವಿಕೆಯ ನಂತರ ಆರ್ಸಿಬಿಯ ಚೊಚ್ಚಲ ಐಪಿಎಲ್ ಗೆಲುವು ರಾಜ್ಯದಲ್ಲಿ ಭಾವನಾತ್ಮಕ ವಿಷಯವಾಗಿತ್ತು. ಗುರುವಾರ ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡದ ಸಂಭ್ರಮಾಚರಣೆಗೆ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗುತ್ತಿದ್ದಂತೆ ಸಂಭವಿಸಿದ ಈ ದುರಂತದಲ್ಲಿ 11 ಜನರು ಸಾವಿಗೀಡಾದರು. ಮತ್ತು ಸುಮಾರು 47 ಜನರು ಗಾಯಗೊಂಡರು.
ರಾಜ್ಯ ಸರ್ಕಾರವು ದುಷ್ಕೃತ್ಯದ ಬಗ್ಗೆ ಭಾರಿ ಟೀಕೆಗಳನ್ನು ಎದುರಿಸಿತ್ತು. ಆರಂಭಿಕ ವಿಚಾರಣೆಯಲ್ಲಿ, ಈ ಕಾರ್ಯಕ್ರಮವು ಕೊನೆಯ ಕ್ಷಣದ ಯೋಜನೆಯಾಗಿದೆ ಎಂಬ ಸರ್ಕಾರದ ಹೇಳಿಕೆಗೆ ವಿರುದ್ಧವಾಗಿ, ಆರ್ಸಿಬಿ ಜೂನ್ 4 ರಂದು ಸನ್ಮಾನ ಸಮಾರಂಭದ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ