ನವದೆಹಲಿ: ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ನೇತೃತ್ವದಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಭಾರತ-ಕೆನಡಾ ಸಂಬಂಧಗಳು ಚೇತರಿಸಿಕೊಳ್ಳುತ್ತಿರುವ ದೊಡ್ಡ ಸಂಕೇತವಾಗಿ, ಅವರ ಉತ್ತರಾಧಿಕಾರಿ ಹಾಲಿ ಪ್ರಧಾನಿ ಮಾರ್ಕ್ ಕಾರ್ನಿ ಕೆನಡಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದಾರೆ.
ಜೂನ್ 15 ರಿಂದ 17 ರವರೆಗೆ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದು, ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರನ್ನು ಭೇಟಿ ಮಾಡಲು ತಾವು ಎದುರು ನೋಡುತ್ತಿರುವೆ ಎಂದು ಹೇಳಿದ್ದಾರೆ
ಶುಕ್ರವಾರ ಎಕ್ಸ್ನಲ್ಲಿ ಮೋದಿ, ಈ ಮಾಹಿತಿ ನೀಡಿದ್ದಾರೆ. ಕೆನಡಾದ ಪ್ರಧಾನಿಯಿಂದ ತಮಗೆ ಕರೆ ಬಂದಿದೆ ಮತ್ತು ಪರಸ್ಪರ ಗೌರವದಿಂದ ಮಾರ್ಗದರ್ಶಿಸಲ್ಪಟ್ಟ ಎರಡೂ ದೇಶಗಳು “ನವೀಕೃತ ಚೈತನ್ಯ” ದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಬರೆದಿದ್ದಾರೆ.
ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ, ಕೆನಡಾ ಪ್ರಧಾನಿ ಮೋದಿಗೆ ಆಹ್ವಾನ ಕಳುಹಿಸುತ್ತದೆಯೇ ಅಥವಾ 2019 ರ ನಂತರ ಅವರು ಭಾಗವಹಿಸದ ಮೊದಲ G7 ಶೃಂಗಸಭೆಯಾಗಲಿದೆಯೇ ಎಂಬ ಬಗ್ಗೆ ಊಹಾಪೋಹಗಳು ಇದ್ದವು.
2023 ರಲ್ಲಿ ಆಗಿನ ಪ್ರಧಾನಿ ಟ್ರೂಡೊ ಯಾವುದೇ ಪುರಾವೆಗಳನ್ನು ನೀಡದೆ ಕೆನಡಾ ಸಂಸತ್ತಿನಲ್ಲಿ “ಭಾರತೀಯ ಏಜೆಂಟರು” ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿಕೊಂಡಾಗ ಭಾರತ-ಕೆನಡಾ ಸಂಬಂಧವು ಹದಗೆಟ್ಟಿತು. ಈ ಆರೋಪವನ್ನು ಭಾರತ ಪದೇ ಪದೇ ತಳ್ಳಿಹಾಕಿದೆ ಮತ್ತು ಅಂದಿನಿಂದ ಕೆನಡಾ ಯಾವುದೇ ಪುರಾವೆಗಳನ್ನು ನೀಡಲು ವಿಫಲವಾಗಿದೆ
ಮುಂದಿನ ವರ್ಷ, ಭಾರತೀಯ ಹೈಕಮಿಷನರ್ ಅವರನ್ನು ಈ ಹತ್ಯೆಯಲ್ಲಿ “ಆಸಕ್ತಿಯ ವ್ಯಕ್ತಿ” ಎಂದು ಕೆನಡಾದ ಅಧಿಕಾರಿಗಳು ಕರೆದ ನಂತರ ಸಂಬಂಧವು ಮತ್ತಷ್ಟು ಹದಗೆಟ್ಟಿತು. ಭಾರತವು ಹೊಸ ಆರೋಪವನ್ನು “ಹಾಸ್ಯಾಸ್ಪದ” ಎಂದು ತಿರಸ್ಕರಿಸಿತು ಮತ್ತು ಹೈಕಮಿಷನರ್ ಮತ್ತು ಕೆಲವು ರಾಜತಾಂತ್ರಿಕರನ್ನು ಕೆನಡಾದಿಂದ ಹಿಂತೆಗೆದುಕೊಂಡಿತು ಮತ್ತು ಕೆನಡಾದ ಹಂಗಾಮಿ ಹೈಕಮಿಷನರ್ ಸ್ಟೀವರ್ಟ್ ರಾಸ್ ವೀಲರ್ ಸೇರಿದಂತೆ ಆರು ಕೆನಡಾದ ಅಧಿಕಾರಿಗಳನ್ನು ದೇಶದಿಂದ ಉಚ್ಚಾಟಿಸಿತು.
ಈ ವರ್ಷದ ಆರಂಭದಲ್ಲಿ ಟ್ರುಡೊ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಮತ್ತು ಏಪ್ರಿಲ್ನಲ್ಲಿ ಮಾರ್ಕ್ ಕಾರ್ನಿ ಕೆನಡಾದ ಚುನಾವಣೆಯಲ್ಲಿ ಗೆದ್ದ ನಂತರ ಬಾರತ-ಕೆನಡಾ ನಡುವಿನ ಸಂಬಂಧಗಳಲ್ಲಿ ಸುಧಾರಣೆಯ ಭರವಸೆಗಳು ಬೇರೂರಿದವು. ಕಾರ್ನಿ ಅವರು ಟ್ರುಡೊ ಅವರಂತೆಯೇ ಅದೇ ಲಿಬರಲ್ ಪಕ್ಷದವರಾಗಿದ್ದರೂ, ಅವರು ಭಾರತ-ಕೆನಡಾ ಸಂಬಂಧವನ್ನು “ನಂಬಲಾಗದಷ್ಟು ಮುಖ್ಯ” ಎಂದು ಬಣ್ಣಿಸಿದ್ದಾರೆ ಮತ್ತು “ಪರಸ್ಪರ ಗೌರವ”ದ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬಹುದು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಗೆ ಆಹ್ವಾನವನ್ನು ಆ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿ ಹಾಗೂ ಕೆನಡಾದಲ್ಲಿ ಖಾಲಿಸ್ತಾನಿ ಅಂಶಗಳಿಗೆ ಒಂದು ಕಡೆ ಮುಖಭಂಗವಾಗಿ ನೋಡಲಾಗುತ್ತಿದೆ. ಯಾಕೆಂದರೆ ಪ್ರಧಾನಿ ಮೋದಿಗೆ ಆಹ್ವಾನ ಕಳುಹಿಸಬಾರದು ಎಂದು ಅವರು ಲಾಬಿ ಮಾಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ