ವೇದಿಕೆಯಲ್ಲಿ ಪಕ್ಷದ ನಾಯಕನಿಗೆ ಹಾರ ಹಾಕಿ ಎಲ್ಲರೆದುರೇ ಹಲವು ಬಾರಿ ಕೆನ್ನೆಗೆ ಹೊಡೆದ ಕಾರ್ಯಕರ್ತ ; ವೀಡಿಯೊ ವೈರಲ್‌

ಜೌನಪುರ : ಉತ್ತರ ಪ್ರದೇಶದ ಜೌನಪುರ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸುಹೇಲ್‌ದೇವ ಸ್ವಾಭಿಮಾನ ಪಕ್ಷದ (ಎಸ್‌ಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ರಾಜಭರ ಅವರಿಗೆ ವೇದಿಕೆಯ ಮೇಲೆ ಹಾರ ಹಾಕಿದ ಪಕ್ಷದ ಕಾರ್ಯಕರ್ತನೊಬ್ಬ ನಂತರ ಪದೇ ಪದೇ ಅವರಿಗೆ ಕೆನ್ನೆಗೆ ಬಾರಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮಹಾರಾಜ ಸುಹೇಲ್‌ದೇವ ಅವರ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಜಲಾಲಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆಶಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ರಾಜಭರ ಪ್ರಾಬಲ್ಯದ ಜಫರಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಪೂಜ್ಯ ಮಹಾರಾಜ ಸುಹೇಲ್‌ದೇವ ರಾಜಭರ ಪ್ರತಿಮೆಯನ್ನು ಸ್ಥಾಪಿಸಲು ‘ಭೂಮಿ ಪೂಜೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೌ ಜಿಲ್ಲೆಯ ಮೂಲದ ಮಹೇಂದ್ರ ರಾಜಭರ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಪಕ್ಷದ ಕಾರ್ಯಕರ್ತ ಬ್ರಿಜೇಶ ರಾಜಭರ ಎಂಬಾತ ಮೊದಲು ಮಹೇಂದ್ರ ರಾಜಭರ ಅವರಿಗೆ ಹಾರ ಹಾಕಿ ಸನ್ಮಾನಿಸಿದ ನಂತರ ಸಾರ್ವಜನಿಕರ ಮುಂದೆ ಹಲವು ಬಾರಿ ಕಪಾಳಮೋಕ್ಷ ಮಾಡಿದರು, ಇದರಿಂದಾಗಿ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಯಿತು.

ಹಲ್ಲೆಯ ನಂತರ, ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಮತ್ತು ಸುಹೇಲದೇವ ಭಾರತೀಯ ಸಮಾಜ ಪಕ್ಷದ (SBSP) ಅಧ್ಯಕ್ಷ ಓಂ ಪ್ರಕಾಶ ರಾಜಭರ ದಾಳಿಯ ಹಿಂದಿದ್ದಾರೆ ಎಂದು ಮಹೇಂದ್ರ ರಾಜಭರ ಆರೋಪಿಸಿದರು. ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಓಂ ಪ್ರಕಾಶ ರಾಜಭರ ಅಥವಾ ಸುಹೇಲದೇವ ಭಾರತೀಯ ಸಮಾಜ ಪಕ್ಷ (SBSP) ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ಘಟನೆಯ ನಂತರ, ಮಹೇಂದ್ರ ರಾಜಭರ ಸ್ಥಳದಿಂದ ಹೊರಬಂದು ಜಲಾಲಪುರ ಪೊಲೀಸ್ ಠಾಣೆಯಲ್ಲಿ ಬ್ರಿಜೇಶ ರಾಜಭರ ವಿರುದ್ಧ ದೂರು ದಾಖಲಿಸಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಮಹೇಂದ್ರ ರಾಜಭರ ಅವರು, ಬ್ರಿಜೇಶ ರಾಜಭರ ಕಾರ್ಯಕ್ರಮಕ್ಕೆ ನಾಲ್ಕೈದು ದಿನಗಳ ಮೊದಲು ಓಂ ಪ್ರಕಾಶ ರಾಜಭರ ಅವರನ್ನು ಭೇಟಿಯಾಗಿದ್ದರು ಮತ್ತು ಅವರ ನಿರ್ದೇಶನದ ಮೇರೆಗೆ ದಾಳಿಯನ್ನು ಯೋಜಿಸಲಾಗಿತ್ತು ಎಂದು ಆರೋಪಿಸಿದ್ದಾರೆ. ಬ್ರಿಜೇಶ್ ಒಂದು ಕಾಲದಲ್ಲಿ ನನ್ನ ಪಕ್ಷದಲ್ಲಿ ಕಾರ್ಯಕರ್ತನಾಗಿದ್ದ, ಆದರೆ ಪ್ರಸ್ತುತ ಆತ ಅಧಿಕೃತ ಹುದ್ದೆಯನ್ನು ಹೊಂದಿಲ್ಲ. ಕಾರ್ಯಕ್ರಮಕ್ಕೆ ಹೇಗೆ ಅಥವಾ ಏಕೆ ಬಂದ ಅಥವಾ ಆತನನ್ನು ಯಾರು ಆಹ್ವಾನಿಸಿದರು ಎಂಬುದು ನನಗೆ ತಿಳಿದಿಲ್ಲ. ಪಕ್ಷದಲ್ಲಿ ಯಾವುದೇ ಆಂತರಿಕ ವಿವಾದ ಅಥವಾ ಯಾವುದೇ ಹಣಕಾಸಿನ ಭಿನ್ನಾಭಿಪ್ರಾಯವಿಲ್ಲ” ಎಂದು ಮಹೇಂದ್ರ ರಾಜಭರ ಹೇಳಿದರು, ಕಾರ್ಯಕ್ರಮದಲ್ಲಿ ಅನೇಕ ಜನರು ಹಾಜರಿದ್ದರೂ, ಅವರ ಮೇಲೆ ಹಲ್ಲೆ ನಡೆಸಿದ್ದು ಬ್ರಿಜೇಶ ರಾಜಭರ ಎಂದು ಹೇಳಿದರು.

ಮಹೇಂದ್ರ ರಾಜಭರ ದೂರು ದಾಖಲಿಸಿದ್ದಾರೆ ಎಂದು ದೃಢಪಡಿಸಿದ ಜಲಾಲಪುರ ಎಸ್‌ಎಚ್‌ಒ ತ್ರಿವೇಣಿ ಸಿಂಗ್, ತನಿಖೆಯ ಭಾಗವಾಗಿ ಘಟನೆಯ ವೈರಲ್ ವೀಡಿಯೊ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ, ಈ ದಾಳಿಯಲ್ಲಿ ಬಿಜೆಪಿಯ ಪಾತ್ರವಿದೆ ಎಂದು ಆರೋಪಿಸಿದರು, ಇದು ಹಿಂದುಳಿದವರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಕ್ಕೆ ಮತ್ತೊಂದು ಉದಾಹರಣೆ ಎಂದು ಅವರು ಹೇಳಿದರು.
“ಹಿಂದುಳಿದ ಸಮುದಾಯಗಳನ್ನು ಒಳಗಿನಿಂದ ಒಡೆಯುವ ಮೂಲಕ ತನ್ನ ವಿಭಜಕ ರಾಜಕೀಯವನ್ನು ಉಳಿಸಿಕೊಳ್ಳಬಹುದು ಎಂದು ಬಿಜೆಪಿ ಭಾವಿಸಿದರೆ, ಅದು ತಪ್ಪಾಗಲಿದೆ. ಈ ದಾಳಿಯಲ್ಲಿ ಬಿಜೆಪಿ ಭಾಗಿಯಾಗಿಲ್ಲದಿದ್ದರೆ, ದಾಳಿಕೋರನನ್ನು ತಕ್ಷಣವೇ ಬಂಧಿಸಿ ಆತನ ಕೃತ್ಯಗಳಿಗೆ ಶಿಕ್ಷೆ ವಿಧಿಸಬೇಕು” ಎಂದು ಅವರು ಒತ್ತಾಯಿಸಿದರು.
ಮಹೇಂದ್ರ ರಾಜಭರ ಈ ಹಿಂದೆ ಎಸ್‌ಬಿಎಸ್‌ಪಿ ಜೊತೆ ಉತ್ತಮ ಸಂಬಂಧ ಹೊಂದಿದ್ದರು ಮತ್ತು 2022 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮದೇ ಆದ ಪಕ್ಷವನ್ನು ರಚಿಸಲು ಅದರಿಂದ ಪ್ರತ್ಯೇಕವಾಗುವ ಮೊದಲು ಅದರ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಪ್ರಸ್ತುತ ಉತ್ತರ ಪ್ರದೇಶ ವಿಧಾನಸಭೆಯಲ್ಲಿ, ಎಸ್‌ಬಿಎಸ್‌ಪಿಯ ಜಗದೀಶ ನಾರಾಯಣ ರೈ ಜಫರಾಬಾದ್ ಅನ್ನು ಪ್ರತಿನಿಧಿಸುತ್ತಾರೆ. ಅವರು ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿಯ ಭಾಗವಾಗಿ 2022 ರ ಚುನಾವಣೆಯಲ್ಲಿ ಗೆದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ವಿಮಾನದ ಬಾಲ, ಟೇಬಲ್‌ಗಳ ಮೇಲೆ ಊಟ: ಏರ್ ಇಂಡಿಯಾ ವಿಮಾನ ಅಪ್ಪಳಿಸಿದ ವೈದ್ಯರ ಹಾಸ್ಟೆಲ್‌ ದೃಶ್ಯಗಳು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement