(೨೧.೦೬.೨೦೨೫ ರಂದು ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಲೇಖನ)
ಪ್ರತಿವರ್ಷ ಜೂನ್ ೨೧ ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ೨೦೦ಕ್ಕೂ ಹೆಚ್ಚಿನ ರಾಷ್ಟ್ರಗಳು ಆಚರಿಸುತ್ತಿವೆ. ಯೋಗದ ಕುರಿತಾದ ಮಾಹಿತಿ ಹಾಗೂ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಯೋಗದ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವುದು, ಜಾಗತಿಕ ಸಮನ್ವಯತೆ ಬಲಪಡಿಸುವುದು, ಸಮುದಾಯವನ್ನು ಹೆಚ್ಚು ಹತ್ತಿರ ತರುವುದು, ಒತ್ತಡ ರಹಿತ ವಾತಾವರಣದಲ್ಲಿ ಬದುಕಲು ಅಗತ್ಯವಾದ ಸ್ವಯಂ ಅರಿವಿಗಾಗಿ, ಧ್ಯಾನದ ಅಭ್ಯಾಸವನ್ನು ಬೆಳೆಸುವ ಧ್ಯೇಯಗಳೊಂದಿಗೆ ಯೋಗ ದಿನವನ್ನು ಆಚರಿಸಲಾಗುತ್ತಿದೆ.
ಯೋಗವು ಪ್ರಾಚೀನ ಅಭ್ಯಾಸವಾಗಿದ್ದು, ಪುರಾತನ ಕಾಲದಿಂದಲೂ ಇದನ್ನು ಅನುಸರಿಸುತ್ತ ಬರಲಾಗಿದೆ. ಯೋಗ ಮೂಲವನ್ನು ಹುಡುಕಿಕೊಂಡು ಸಾಗಿದಲ್ಲಿ ಅದು ಭಗವಾನ್ ಶಿವನಲ್ಲಿಗೆ ಬಂದು ತಲುಪುತ್ತದೆ. ಸಾಕ್ಷಾತ್ ಶಿವನೇ ಆದಿಯೋಗಿಯಾಗಿದ್ದು, ಯೋಗದ ಮೊದಲ ಗುರು ಎಂಬ ನಂಬಿಕೆ ಇದೆ. ಜೊತೆಗೆ ಪ್ರಪಂಚದ ಎಲ್ಲ ಯೋಗಿಗಳಿಗೆ ಶಿವನ ಗುರು ಎಂದು ಹೇಳಲಾಗುತ್ತದೆ.
ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುವ ಜೊತೆಗೆ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯವನ್ನು ಸೃಷ್ಟಿಸುತ್ತದೆ. ಹಾಗೂ ಆರೋಗ್ಯ ಮತ್ತು ಯೋಗಕ್ಷೇಮದ ಒಂದು ಸಮಗ್ರ ವಿಧಾನವಾಗಿದೆ.
ಯೋಗ ವ್ಯಾಯಾಮ ಮಾತ್ರವಲ್ಲದೇ ನಮ್ಮೊಂದಿಗೆ ವಿಶ್ವ ಮತ್ತು ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡು ಹಿಡಿಯಲು ನೆರವಾಗುತ್ತದೆ. ನಮ್ಮ ಜೀವನ ಶೈಲಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಅಳವಡಿಸಿಕೊಳ್ಳಲು ೨೦೧೪ ರ ಸೆಪ್ಟೆಂಬರ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪ ಮಾಡಿದ್ದರು. ಪ್ರಸ್ತಾಪವನ್ನು ಒಪ್ಪಿಕೊಂಡ ವಿಶ್ವಸಂಸ್ಥೆ ಜೂನ್ ೨೧ ಅನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಲು ನಿರ್ಣಯ ತೆಗೆದುಕೊಂಡಿತು. ತರುವಾಯ ೨೦೧೫ ರಿಂದ ಈ ದಿನವನ್ನು ಆಚರಿಸಲಾಗಿತ್ತಿದ್ದು. ಇದೀಗ ಯೋಗ ದಿನವು ಒಂದು ಜನಾಂದೋಲನವಾಗಿ ಮಾರ್ಪಟ್ಟಿದೆ. ಮತ್ತು ಜಗತ್ತಿನ ಎಲ್ಲ ಮೂಲೆಗಳಲ್ಲಿ ಸ್ವೀಕರಿಸಲ್ಪಟ್ಟು ಆಚರಣೆಗೊಳ್ಳುತ್ತಿದೆ.
ಯೋಗವು ನಮ್ಮ ದೇಹ ಮತ್ತು ಮನಸ್ಸು, ಬುದ್ದಿ, ಚೈತನ್ಯಗಳು ಒಟ್ಟಾಗಿ ಕೆಲಸ ಮಾಡಲು ಬೇಕಾದ ತರಬೇತಿಯನ್ನು ನೀಡುತ್ತದೆ ಮತ್ತು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ.ವಿಶ್ವ ಯೋಗ ದಿನದ ಲಾಂಛನದಲ್ಲಿ ವ್ಯಕ್ತಿಯ ದೇಹದ ಬಣ್ಣ ನೀಲಿಯಾಗಿದ್ದು ಇದು ನೀರಿನ ಅಂಶವನ್ನು ಪ್ರತಿನಿಧಿಸುತ್ತದೆ. ವ್ಯಕ್ತಿಯ ಜೊತೆಗೆ ಹಸಿರು ಮತ್ತು ಕಂದು ಬಣ್ಣದ ಎಲೆಗಳನ್ನು ಚಿತ್ರಿಸಲಾಗಿದ್ದು ಇದು ಪ್ರಕೃತಿಯನ್ನು ಮತ್ತು ಸೌರ ಶಕ್ತಿಯ ಮೂಲವನ್ನು ಸಂಕೇತಿಸುತ್ತದೆ. ಇದಲ್ಲದೆ ಲಾಂಛನದ ಕೆಳಭಾಗದಲ್ಲಿ ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ ಎಂದು ಬರೆಯಲಾಗಿದೆ. ಯೋಗದ ಸಹಾಯದಿಂದ ಜನರು ಸಾಮರಸ್ಯ ಮತ್ತು ಶಾಂತಿಯನ್ನು ಸಾಧಿಸುತ್ತಾರೆ.
ಯೋಗವು ಜಗತ್ತಿಗೆ ಭಾರತದ ಒಂದು ಅಮೂಲ್ಯ ಕೊಡುಗೆಯಾಗಿದೆ. ಇದು ದೇಹ ಮತ್ತು ಮನಸ್ಸನ್ನು ಚಿಂತನೆಯೊಂದಿಗೆ ಮತ್ತು ಕಾರ್ಯವನ್ನು ಸಫಲತೆಯೊಂದಿಗೆ ಮನುಷ್ಯ- ಪ್ರಕೃತಿಯೊಂದಿಗಿನ ಹೊಂದಾಣಿಕೆಯನ್ನು ಒಟ್ಟಾಗಿರಿಸುತ್ತದೆ. ಯೋಗ ಭಾರತದ ಸಂಸ್ಕೃತಿ ಅಷ್ಟೇ ಅಲ್ಲ. ಸನಾತನ ಕಾಲದಿಂದ ನಮ್ಮ ಹಿರಿಯರು ತಮ್ಮ ಮುಂದಿನ ಪೀಳಿಗೆಗೆ ಬಿಟ್ಟು ಹೋಗಿರುವ ಸಂಪತ್ತು. ಸಹಸ್ರಾರು ವರ್ಷಗಳ ಹಿಂದೆಯೇ ಈ ಯೋಗದ ಮಹತ್ವವನ್ನು ಅರಿತಿದ್ದ ನಮ್ಮ ಋಷಿ-ಮುನಿಗಳು ಆರೋಗ್ಯವಂತರಾಗಿದ್ದು, ಶತಾಯುಷಿಗಳಾಗಿ ಬಾಳಿ ಬದುಕಿದ್ದಾರೆ.
ಯೋಗಾಸನಗಳು ಮತ್ತು ಯೋಗ ಸೂತ್ರವು ಪತಂಜಲಿ ಮುನಿಗಳು ಮನುಕುಲಕ್ಕೆ ನೀಡಿದ ಕೊಡುಗೆಯಾಗಿದೆ. ಸಹಸ್ರಾರು ವರ್ಷಗಳ ಹಿಂದೆಯೇ ಭವಿಷ್ಯದಲ್ಲಿ ಮುಂದಿನ ಪೀಳಿಗೆಗೆ ಬರಬಹುದಾದ ಕಾಯಿಲೆಗಳ ಕುರಿತು ಚಿಂತಿಸಿ ಯೋಗದ ಮೂಲಕ ಪರಿಹಾರ ನೀಡಿದ್ದಾರೆ. ಇಂದಿನ ದಿನಮಾನಗಳಲ್ಲಿ ಎಲ್ಲಿಗೆ ಹೋದರೂ ತಪ್ಪದ ಒತ್ತಡಮಯ ಜೀವನದಲ್ಲಿ ಜನ ಸರಿಯಾಗಿ ತಮ್ಮ ಹೊಟ್ಟೆಗೆ ತಿನ್ನಲೂ ಆಗದೇ ತಮ್ಮ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸದ ಸ್ಥಿತಿಯಲ್ಲಿದ್ದು ಹಣವೆಂಬ ಮಾಯಾಮೃಗದ ಬೆನ್ನ ಹಿಂದೆ ಬಿದ್ದಿದ್ದಾರೆ. ಇದರಿಂದ ತಮಗೆ ಗೊತ್ತಿಲ್ಲದಂತೆಯೇ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ಅಂಟಿಸಿಕೊಂಡು ಜೀವನ ನಡೆಸುತ್ತಾ ೬೦-೬೫ ವರ್ಷಗಳಲ್ಲಿಯೇ ಮಾರಣಾಂತಿಕ ವ್ಯಾಧಿಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ ಜನಿಸುತ್ತಿರುವ ಮಕ್ಕಳು ಅಪೌಷ್ಟಿಕತೆಯಿಂದ ಯುವಕರು ದೌರ್ಬಲ್ಯತೆಯಿಂದ ಬಳಲಿ ಬೆಂಡಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಅಂತೆಯೇ ಇಂದು ಯೋಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ಬಂದಿದೆ. ಇದರಿಂದ ಸದೃಢ ಹಾಗೂ ಒತ್ತಡ ರಹಿತ ಸಮಾಜ ನಿರ್ಮಿಸಬಹುದಾಗಿದೆ. ಅದ್ದರಿಂದ ಯೋಗದ ಮಹತ್ವವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಯುಕ್ತ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಹೊಣೆಯಾಗಿದೆ.
ಯೋಗಾಭ್ಯಾಸವನ್ನು ವಿಶ್ವಕ್ಕೆ ಭಾರತವು ನೀಡಿದ ಅದ್ಭುತ ಕೊಡುಗೆ. ಕ್ರಿ.ಪೂ ೩ನೇ ಶತಮಾನದ ಹಿಂದಿನ ಇತಿಹಾಸ ಹೊಂದಿರುವ ಯೋಗದಿಂದ ವ್ಯಕ್ತಿಯ ದೈಹಿಕ, ಮನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಸಹಕಾರಿಯಾಗಿದೆ.
ಪ್ರಾಣಾಯಮವು ಯೋಗದ ಒಂದು ಭಾಗ. ಇದು ಉಸಿರಾಟ ಮತ್ತು ವಿಶ್ರಾಂತಿಯನ್ನೊಳಗೊಂಡ ಪ್ರಕ್ರಿಯೆಯಾಗಿದ್ದು, ದೇಹದ ಆರೋಗ್ಯಕ್ಕೆ ಇದರಿಂದ ಅಧಿಕ ಲಾಭವಿದೆ. ಪ್ರಾಣಾಯಾಮ ಎನ್ನುವುದು ಪ್ರಾಣ ಮತ್ತು ಆಯಾಮದ ಸಂಗಮವಾಗಿದೆ. ಪ್ರಾಣವೆಂದರೆ ಉಸಿರು ಅಥವಾ ಶಕ್ತಿ ಮತ್ತು ಆಯಾಮವೆಂದರೆ ನಿಯಂತ್ರಣವೆಂದು ಅರ್ಥ. ಪ್ರಾಣಾಯಾಮದಲ್ಲಿ ಅಧಿಕ ಪ್ರಮಾಣದ ಆಮ್ಲಜನಕವು ಶ್ವಾಸಕೋಶಕ್ಕೆ ಒದಗುತ್ತದೆ. ಹಾಗೆಯೇ ಅಷ್ಟೇ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೆೈಡ್ ಮತ್ತು ಉಸಿರಾಟದಿಂದ ೫೦೦ ಕ್ಯುಬಿಕ್ ಸೆಂಟಿ ಮೀಟರ್ ಗಾಳಿಯನ್ನು ತೆಗೆದುಕೊಳ್ಳುತ್ತಾನೆ. ಆದರೆ ಪ್ರಾಣಾಯಾಮದಲ್ಲಿ ಸುಮಾರು ೩೦೦೦-೪೦೦೦ ಕ್ಯುಬಿಕ್ ಸೆಂಟಿಮೀಟರ್ ಗಾಳಿ ತೆಗೆದುಕೊಳ್ಳುತ್ತಾನೆ. ಉಸಿರಾಟವನ್ನು ನಮ್ಮ ಇಚ್ಛೆಗೊಳಪಡಿಸಿ ಹತೋಟಿಗೆ ತರುವುದೇ ಪ್ರಾಣಾಯಾಮವಾಗಿದೆ.
ಯೋಗದಲ್ಲಿ ೮ ಅಂಗಗಳನ್ನು ನಿರ್ದೇಶಿಸಿ ಅದಕ್ಕೊಂದು ವೈಜ್ಞಾನಿಕ ಚೌಕಟ್ಟನ್ನು ನಿರ್ಮಿಸಿಕೊಟ್ಟ ಋಷಿಗಳು ಹೇಳುವಂತೆ ಮನಸ್ಸಿನ ಚಂಚಲತೆ, ಗೊಂದಲಗಳನ್ನು ನಿವಾರಿಸುವ ಕ್ರಮಬದ್ಧ ಉಪಾಯವೇ ಪ್ರಾಣಾಯಾಮ, ಪ್ರಾಣವಾಯುವು ಶ್ವಾಸಕೋಶಕ್ಕೆ ಸೇರಿ ಹೃದಯ ಭಾಗದಲ್ಲಿ ಚಲಿಸಿ ಆಮ್ಲಜನಕವನ್ನು ಪೂರೈಸಿ ನಿಯಂತ್ರಿಸುತ್ತದೆ. ಆಹಾರ ಸ್ವೀಕಾರ ಮತ್ತು ನಾಡಿ ಶುದ್ಧೀಕರಣ ಮಾಡುತ್ತದೆ.
• ಪ್ರತಿ ದಿನ ಒಂದು ಗಂಟೆ ಯೋಗಾಭ್ಯಾಸ ಮಾಡುವುದರಿಂದ ವ್ಯಕ್ತಿ ತನ್ನ ಈಗಿರುವ ವಯಸ್ಸಿಗಿಂತಾ ೫ ವರ್ಷ ಕಡಿಮೆ ವಯಸ್ಸಿನವನಂತೆ ಕಾಣುವನು.
• ಚರ್ಮದ ಅಂದವನ್ನು ಹೆಚ್ಚಿಸಿಕೊಳ್ಳಲು ಯೋಗ ಸಹಾಯಕಾರಿಯಾಗಿದೆ ವಯಸ್ಸಾದಾಗ ಬೇಗನೆ ಚರ್ಮ ಸುಕ್ಕು ಗಟ್ಟುವುದನ್ನು ನಿಯಂತ್ರಿಸಬಹುದಾಗಿದೆ.
• ಸಕಾರಾತ್ಮಕ ಯೋಚನೆಗಳನ್ನು ನಮ್ಮೊಳಗೆ ತುಂಬಿಸಕೊಳ್ಳುವ ಯೋಗ ಅತ್ಯಂತ ಪರಿಣಾಮಕಾರಿಯಾದ ಮಾರ್ಗವಾಗಿದೆ.
• ಯೋಗದಿಂದ ದೇಹ ಮತ್ತು ಮನಸ್ಸುಗಳೆರಡೂ ಆರೋಗ್ಯವಾಗಿರುತ್ತವೆ.
• ನಿರಂತರ ಯೋಗಾಭ್ಯಾಸದಿಂದ ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಸಂಚಯವಾಗುತ್ತದೆ ಹಾಗೂ ಉಲ್ಲಸಿತರಾಗಿರಲು ಸಹಕರಿಸುತ್ತದೆ.
ಇಂದು ಇಡೀ ವಿಶ್ವವೇ ಯೋಗದ ಮಹತ್ವವನ್ನು ಅರಿತು ಅದಕ್ಕೆ ಮಾನ್ಯತೆ ನೀಡಿದೆ. ಯೋಗದಲ್ಲಿ ದೈಹಿಕದ ಜೊತೆಗೆ ಮಾನಸಿಕ ಸದೃಢತೆಯನ್ನೂ ಕಂಡುಕೊಳ್ಳಬಹುದು ಎಂಬುದು ಸಾಬೀತಾಗಿದೆ. ಇತ್ತೀಚಿಗೆ ಯೋಗ ಮಾರ್ಗ ಅನುಸರಿಸುವವರ ಸಂಖ್ಯೆಯೂ ಅಧಿಕವಾಗುತ್ತಿದೆ.
ಆಧುನಿಕ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಮಧುಮೇಹ, ರಕ್ತದೊತ್ತಡ, ಹೃದಯಕಾಯಿಲೆ, ರಕ್ತನಾಳಗಳಲ್ಲಿನ ತೊಡಕು, ಬೊಜ್ಜು, ದಮ್ಮು, ತೊನ್ನು, ಪಾರ್ಕಿನ್ಸನ್ ಕಾಯಿಲೆ, ನಿದ್ರಾಹೀನತೆ, ತಲೆಶೂಲೆ, ಸಂಧಿವಾತ, ಕೀಲು ನೋವು, ಥೈರಾಯ್ಡ್, ಯಕೃತ್ತು ಬೇನೆ, ಮೂತ್ರ ಪಿಂಡಗಳ ವೈಫಲ್ಯ, ಕ್ಯಾನ್ಸರ್, ಬಿಳಿಕಾಮಾಲೆ, ಮಲಬದ್ದತೆ, ಅಜೀರ್ಣತೆ, ಆಮ್ಲೀಯತೆ ಮುಂತಾದ ಮಾರಕ ರೋಗಗಳಿಂದ ಬಳಲುತ್ತಿರುವ ಅಸಂಖ್ಯಾತ ಜನರಿಗೆ ಚಿಕಿತ್ಸೆ ನೀಡುವಲ್ಲಿ ಯೋಗ ಪರಿಣಾಮಕಾರಿಯಾಗಿದೆ.
ಹಿಂದೆ ಆಧ್ಯಾತ್ಮಿಕ ಸಾಧನೆಗಾಗಿ ಧ್ಯಾನದತ್ತ ತಮ್ಮ ಗಮನ ಕೇಂದ್ರೀಕರಿಸಲು ನೆರವಾಗಲೆಂದು ಋಷಿಗಳು ಬಳಸುತ್ತಿದ್ದ ಯೋಗ ಮತ್ತು ಪ್ರಾಣಾಯಾಮ ಇಂದು ಸರ್ವರೋಗ ನಿವಾರಕ ವಿಜ್ಞಾನವಾಗಿ ಬೆಳೆಯುತ್ತಿದೆ. ಹಲವಾರು ಸಂತರು, ಋಷಿಗಳು, ಸಂಘ-ಸಂಸ್ಥೆಗಳು, ಯೋಗ ತಜ್ಞರು, ಯೋಗವನ್ನು ಜನಪ್ರೀಯಗೊಳಿಸುತ್ತಿದ್ದಾರೆ.
– ಡಾ. ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು ಹುಬ್ಬಳ್ಳಿ
ನಿಮ್ಮ ಕಾಮೆಂಟ್ ಬರೆಯಿರಿ