ಭುವನೇಶ್ವರ: “ಜಗನ್ನಾಥ ಮಹಾಪ್ರಭುಗಳ ಭೂಮಿಗೆ ಬರಲು” ಬಯಸಿದ್ದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ಭೇಟಿ ನೀಡುವ ಆಹ್ವಾನವನ್ನು ತಿರಸ್ಕರಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಒಡಿಶಾದಲ್ಲಿ ಬಿಜೆಪಿ ಸರ್ಕಾರದ ಒಂದು ವರ್ಷದ ಸ್ಮರಣಾರ್ಥ ಭುವನೇಶ್ವರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, “ಕೇವಲ ಎರಡು ದಿನಗಳ ಹಿಂದೆ, ನಾನು ಜಿ 7 ಶೃಂಗಸಭೆಗಾಗಿ ಕೆನಡಾದಲ್ಲಿದ್ದೆ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ನನಗೆ ಕರೆ ಮಾಡಿದರು. ನೀವು ಕೆನಡಾಕ್ಕೆ ಬಂದಿರುವುದರಿಂದ, ವಾಷಿಂಗ್ಟನ್ ಮೂಲಕ ಹೋಗಿ, ನಾವು ಒಟ್ಟಿಗೆ ಭೋಜನ ಮಾಡಿ ಮಾತನಾಡುವ ಎಂದು ಹೇಳಿದರು. ಅವರು ಬಹಳ ಒತ್ತಾಯದಿಂದ ಆಹ್ವಾನ ನೀಡಿದರು. ನಾನು ಅಮೆರಿಕ ಅಧ್ಯಕ್ಷರಿಗೆ ಹೇಳಿದೆ, ಆಹ್ವಾನಕ್ಕೆ ಧನ್ಯವಾದಗಳು. ಜಗನ್ನಾಥ ಮಹಾಪ್ರಭುಗಳ ಭೂಮಿಗೆ ಹೋಗುವುದು ನನಗೆ ಬಹಳ ಮುಖ್ಯ ಮತ್ತು ಆದ್ದರಿಂದ ಅವರ ಆಹ್ವಾನವನ್ನು ನಯವಾಗಿ ನಿರಾಕರಿಸಿದೆ ಮತ್ತು ಮಹಾಪ್ರಭುಗಳ ಮೇಲಿನ ನಿಮ್ಮ ಪ್ರೀತಿ ಮತ್ತು ಭಕ್ತಿ ನನ್ನನ್ನು ಈ ಭೂಮಿಗೆ ಕರೆತಂದಿತು” ಎಂದು ಪ್ರಧಾನಿ ಮೋದಿ ಹೇಳಿದರು.
ಒಡಿಶಾದ ಬಿಜೆಪಿ ಸರ್ಕಾರವು “ಪುರಿ ಜಗನ್ನಾಥ ದೇವಾಲಯದ ನಾಲ್ಕು ದ್ವಾರಗಳು, ಅದರ ‘ರತ್ನ ಭಂಡಾರ’ವನ್ನು ಮತ್ತೆ ತೆರೆದು ಜನರ ಬೇಡಿಕೆಗಳನ್ನು ಈಡೇರಿಸಿದೆ ಎಂದು ಹೇಳಿದರು. ಒಡಿಶಾದ ಮೊದಲ ಬಿಜೆಪಿ ಸರ್ಕಾರವು ಉತ್ತಮ ಆಡಳಿತ ಮತ್ತು ಸಾರ್ವಜನಿಕ ಸೇವೆಗಳೊಂದಿಗೆ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 18,600 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 105 ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಿದರು ಮತ್ತು ಬೌಧ್ ಜಿಲ್ಲೆಗೆ ಮೊದಲ ಪ್ರಯಾಣಿಕ ರೈಲು ಸೇರಿದಂತೆ ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಅವರು “ಒಡಿಶಾ ವಿಷನ್ ಡಾಕ್ಯುಮೆಂಟ್” ಅನ್ನು ಅನಾವರಣಗೊಳಿಸಿದರು ಮತ್ತು ‘ಲಖ್ಪತಿ ದೀದೀಸ್’ ಅವರನ್ನು ಸನ್ಮಾನಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ