ಶಿವಮೊಗ್ಗ: ಒಣ ಹಾಕಿದ್ದ ಬಟ್ಟೆ ತೆಗೆಯಲು ಹೋದಾಗ ವಿದ್ಯುತ್ ತಗುಲಿ ದಂಪತಿ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಕೃಷ್ಣಪ್ಪ (53) ವಿನೋದಾ (43) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಮನೆಯ ಬಳಿಯ ತಂತಿಯ ಮೇಲೆ ಒಣಗಿಸಿದ್ದ ಬಟ್ಟೆಯನ್ನು ತೆಗೆಯಲು ಹೋದ ಸಮಯದಲ್ಲಿ ವಿನೋದಾ ಅವರಿಗೆ ವಿದ್ಯುತ್ ಸ್ಪರ್ಶಿಸಿದೆ. ಈ ವೇಳೆ ಅವರನ್ನು ರಕ್ಷಿಸಲು ಹೋದ ಪತಿ ಕೃಷ್ಣಪ್ಪ ಅವರಿಗೂ ಕೂಡ ವಿದ್ಯುತ್ ಹರಿದು ಅವಘಡ ಸಂಭವಿಸಿದೆ.
ದಂಪತಿಗೆ ವಿದ್ಯುತ್ ತಗುಲಿದ್ದನ್ನು ಗಮನಿಸಿದ ಪಕ್ಕದ ಮನೆಯವರು ರಕ್ಷಿಸಲು ಮುಂದಾದಾಗ ಅವರಿಗೂ ವಿದ್ಯುತ್ ಶಾಕ್ ತಗುಲಿದೆ ಎನ್ನಲಾಗಿದೆ. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಜೋರಾದ ಗಾಳಿಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ಬಟ್ಟೆ ಒಣ ಹಾಕಿದ ತಂತಿಯ ಮೇಲೆ ಬಿದ್ದಿತ್ತು ಎನ್ನಲಾಗಿದೆ. ಮೃತ ದಂಪತಿಗೆ ಇಬ್ಬರು ಪುತ್ರಿಯದು, ಒಬ್ಬ ಪುತ್ರ ಇದ್ದಾನೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ